ಮೇ 15ಕ್ಕೆ ಯಾರ ನೇತೃತ್ವದಲ್ಲಿ ಸಂಪುಟ ಸಭೆ ಎಂದು ಖರ್ಗೆ ಘೋಷಣೆ ಮಾಡ್ತಾರೆ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು, ಮೇ 8: ವಿಧಾನಸಭೆ ಚುನಾವಣೆ ಬಳಿಕ ಮೇ 15ರಂದು ಯಾರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಘೋಷಣೆ ಮಾಡಲಿದ್ದಾರೆ. ನಾವು ನಿಶ್ಚಿತವಾಗಿಯೂ 141 ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇ 15ರಂದು ನಡೆಯಲಿರುವ ಮೊದಲ ಸಚಿವ ಸಂಪುಟ ಸಭೆಯಲ್ಲಿ ನಾವು ಘೋಷಣೆ ಮಾಡಿರುವ ‘ಗ್ಯಾರಂಟಿ’ ಯೋಜನೆಗಳನ್ನು ಜಾರಿ ತರುತ್ತೇವೆ. 113 ಸ್ಥಾನಗಳು ನಿಮ್ಮ ಲೆಕ್ಕ. ನಮ್ಮ ಗುರಿ 141 ಸ್ಥಾನಗಳು. ಮೇ 13ರಂದು ಫಲಿತಾಂಶ ನೋಡಿ, ಮೇ 15ರಂದು ನಾವು ಸರಕಾರ ರಚನೆ ಮಾಡುತ್ತೇವೆ’ ಎಂದು ಭರವಸೆ ವ್ಯಕ್ತಪಡಿಸಿದರು.
ಬೆದರಿಕೆಗೆ ಕನ್ನಡಿಗರು ಹೆದರುವುದಿಲ್ಲ: ಬಿಜೆಪಿಗೆ ಮತ ಹಾಕದಿದ್ದರೆ ರಾಜ್ಯಕ್ಕೆ ಕೇಂದ್ರದ ಯೋಜನೆ ನೀಡುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಗಳಾಗುತ್ತವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕದ ಜನರಿಗೆ ಬೆದರಿಕೆ ಹಾಕಿದ್ದಾರೆ. ಇಂತಹ ಬೆದರಿಕೆಗಳಿಗೆ ಕನ್ನಡಿಗರು ಹೆದರುವುದಿಲ್ಲ’ ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
‘ಬಿಜೆಪಿಯವರು ರಾಜ್ಯದ ಜನರಿಗೆ ಬೆದರಿಕೆ ಹಾಕಿ ಮತ ಪಡೆಯಲು ಮುಂದಾಗಿದ್ದಾರೆ. ಈ ದೇಶ ಒಕ್ಕೂಟ ವ್ಯವಸ್ಥೆಯಿಂದ ರೂಪುಗೊಂಡಿದೆ. ಕೇಂದ್ರ ಸರಕಾರದ ಆದಾಯದಲ್ಲಿ ಶೇ.41ರಷ್ಟು ಕರ್ನಾಟಕ ರಾಜ್ಯದಿಂದ ಹೋಗುತ್ತಿದೆ. ಇದರಲ್ಲಿ ನಮಗೆ ಮರಳಿ ಬರುತ್ತಿರುವುದು ಬಿಡಿಗಾಸಿನಷ್ಟು ಮಾತ್ರ. ನಡ್ಡಾರ ಬೆದರಿಕೆಗೆ ನಾವು ಕನ್ನಡಿಗರು ಹೆದರುವುದಿಲ್ಲ. ಯಾವುದ್ಯಾವುದಕ್ಕೋ ನಾವು ಹೆದರಲಿಲ್ಲ, ಇನ್ನು ಇದಕ್ಕೆ ಹೆದರುತ್ತೇವಾ?’ ಎಂದು ಪ್ರಶ್ನಿಸಿದರು.
‘ಇದು ಕರ್ನಾಟಕದ ಸ್ವಾಭಿಮಾನದ ಚುನಾವಣೆ. ಮೇಕೆದಾಟು ಪಾದಯಾತ್ರೆ ಸಮಯದಲ್ಲಿ ಬಿಜೆಪಿ ಸರಕಾರ ಈ ಯೋಜನೆಗೆ 1ಸಾವಿರ ಕೋಟಿ ರೂ.ಅನುದಾನ ಘೋಷಣೆ ಮಾಡಿದರು. ಈ ಡಬಲ್ ಇಂಜಿನ್ ಸರಕಾರ ಇದ್ದಾಗ ನಡ್ಡಾ ಶಿಫಾರಸ್ಸು ಮಾಡಿ ಎಲ್ಲ ಇಲಾಖೆ ಅನುಮತಿ ಕೊಡಿಸಿ ಕೆಲಸ ಆರಂಭಿಸಲು ಅವರಿಂದ ಸಾಧ್ಯವಾಗಲಿಲ್ಲ. ಈ ಯೋಜನೆಯಲ್ಲಿ ಆಣೆಕಟ್ಟು ನಿರ್ಮಾಣದ ಕಾಮಗಾರಿಗೆ ಬೇಕಾದ ಭೂಮಿ ವಶಕ್ಕೆ ಪಡೆಯಲು ಸರಕಾರ ಯಾಕೆ ಮುಂದಾಗಲಿಲ್ಲ?’ ಎಂದು ಅವರು ವಾಗ್ದಾಳಿ ನಡೆಸಿದರು.
‘ಕರ್ನಾಟಕವೇ ಕೇಂದ್ರಕ್ಕೆ ಆದಾಯ ನೀಡಿ ಸಹಾಯ ಮಾಡುತ್ತಿದೆ. ಇಲ್ಲಿರುವ ವಿದ್ಯಾವಂತರು, ಪ್ರಜ್ಞಾವಂತರು ದೇಶಕ್ಕೆ ಆದಾಯ ನೀಡುತ್ತಿದ್ದಾರೆ. ವಿಶ್ವವೇ ಕರ್ನಾಟಕ ಹಾಗೂ ಬೆಂಗಳೂರು ಮೂಲಕ ಇಡೀ ದೇಶವವನ್ನು ನೋಡುತ್ತಿದೆ ಎಂದು ವಾಜಪೇಯಿ ಅವರೇ ಹೇಳಿದ್ದಾರೆ. ಇದು ಈ ರಾಜ್ಯದ ಶಕ್ತಿ’ ಎಂದು ಅವರು ತಿಳಿಸಿದರು.
‘ನಾನು ಕೊನೆ ದಿನ ನನ್ನ ಕ್ಷೇತ್ರ ಕನಕಪುರದಲ್ಲಿ ಮತ ಕೇಳಲು ಹೋಗುತ್ತಿದ್ದೇನೆ. ನಾಮಪತ್ರ ಸಲ್ಲಿಸುವಾಗ ಅಲ್ಲಿನ ಜನರಿಗೆ ಕೈಮುಗಿದು ಬಂದಿದ್ದೆ. ಈಗ ಮತ್ತೆ ಹೋಗುತ್ತಿದ್ದೇನೆ. ಅಲ್ಲಿ ನಮ್ಮ ಸರಕಾರ ಮುಂದಿನ ದಿನಗಳಲ್ಲಿ ಏನು ಮಾಡಲಿದೆ, ಹೇಗೆ ದಕ್ಷ ಆಡಳಿತ ನೀಡುತ್ತೇವೆ. ಮಹಿಳೆಯರಿಗಾಗಿ ಪ್ರತಿ ತಾಲೂಕಿನಲ್ಲಿ ಹೆರಿಗೆ ಆಸ್ಪತ್ರೆ ಸ್ಥಾಪಿಸಿ ಉಚಿತ ಹೆರಿಗೆ ಮಾಡುವ ವ್ಯವಸ್ಥೆ ನೀಡುತ್ತೇವೆ. ಎಲ್ಲ ಸಮಾಜವನ್ನು ಸಮಾನವಾಗಿ ನೋಡಿ, ‘ಶಾಂತಿಯ ತೋಟ’ ನೀರ್ಮಾಣ ಮಾಡುತ್ತೇವೆ. ಪಂಚಾಯ್ತಿ ಮಟ್ಟದಲ್ಲಿ ಉತ್ತಮ ಶಿಕ್ಷಣ ಸಿಗುವಂತೆ ಮಾಡುತ್ತೇವೆ. 2ನೆ ಹಂತಗಳ ನಗರಗಳಲ್ಲಿ ಉದ್ಯೋಗ ಸೃಷ್ಟಿಸಸಲು ನಮ್ಮದೇ ಆದ ಯೋಜನೆಗಳಿವೆ’ ಎಂದು ವಿವರಿಸಿದರು.
‘ಪಕ್ಷದ ಜಾಹೀರಾತಿನ ವಿಚಾರವಾಗಿ 24 ತಾಸಿನಲ್ಲಿ ಉತ್ತರ ನೀಡುವಂತೆ ಆಯೋಗ ನೋಟೀಸ್ ನೀಡಿದ್ದು, ನಾವು ಉತ್ತರ ನೀಡಿದ್ದೇವೆ. ಈ ವಿಚಾರವಾಗಿ ಅವರು ಏನು ಎಂದು ಕಳುಹಿಸಿದ್ದು, ಅವರ ರೇಟ್ ಪಟ್ಟಿಯಲ್ಲಿ ಮುಖ್ಯಮಂತ್ರಿ ಹುದ್ದೆ ಹಾಗೂ ಮಂತ್ರಿಗಿರಿ ಹುದ್ದೆಯ ರೇಟ್ ಅನ್ನು ಯತ್ನಾಳ್ ಹೇಳಿದ್ದಾರೆ. ಉಳಿದಂತೆ ಮಾಧ್ಯಮ ವರದಿಗಳು, ಬಿಜೆಪಿಯ ವಿಶ್ವನಾಥ್, ಗೂಳಿಹಟ್ಟಿ ಶೇಖರ್ ಹೇಳಿಕೆಗಳೇ ಸಾಕ್ಷಿ. ನೀವು ಕೊಟ್ಟಿರುವ ಸಾಕ್ಷಿ ಆಧಾರದ ಮೇಲೆ ನಾವು ಜಾಹೀರಾತು ನೀಡಿದ್ದೇವೆ. ಆಯೋಗದ ನೋಟೀಸ್ಗೆ ಉತ್ತರ ನೀಡಿದ್ದೇವೆ’ ಎಂದು ಅವರು ತಿಳಿಸಿದರು.







