ಜೆ.ಪಿ.ನಡ್ಡಾರ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ: ಮಂಜುನಾಥ ಭಂಡಾರಿ

ಉಡುಪಿ, ಮೇ 8: ಮೇ 10ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರಕಾರ ಸೋತರೆ, ಕೇಂದ್ರದಿಂದ ರಾಜ್ಯಕ್ಕೆ ಸಿಗುವ ಎಲ್ಲಾ ಸವಲತ್ತುಗಳನ್ನು ನಿಲ್ಲಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೀಡಿ ರುವ ಹೇಳಿಕೆ ಬೆದರಿಕೆಯ ದಾಟಿಯಲ್ಲಿದ್ದು, ಇದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಡ್ಡಾರ ಹೇಳಿಕೆ ಸಂಯುಕ್ತ ಒಕ್ಕೂಟ ತತ್ವಕ್ಕೆ ವಿರುದ್ಧವಾದುದು ಎಂದು ಟೀಕಿಸಿದರು.
ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗಿ ಅವರು ನೀಡಿರುವ ಈ ಹೇಳಿಕೆ ಖಂಡನಾರ್ಹವಾದುದು. ತಕ್ಷಣ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕಲ್ಲದೇ, ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜಿನಾಮೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಈ ದೇಶದ ಸಂವಿಧಾನವು ಗ್ರಾಮ ಪಂಚಾಯತ್ನಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೆ ಜನರು ತಮಗೆ ಬೇಕಾದ ಅಭ್ಯರ್ಥಿಯನ್ನು ಹಾಗೂ ಪಕ್ಷವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿದೆ. ಸಂವಿಧಾನ ದೇಶದ ಜನತೆಗೆ ನೀಡಿರುವ ಈ ಹಕ್ಕನ್ನು ಚಲಾಯಿಸಲು ಬೆದರಿಕೆಯೊಡ್ಡುವ ಕೆಲಸವನ್ನು ನಡ್ಡಾ ತಮ್ಮ ಹೇಳಿಕೆಯ ಮೂಲಕ ಮಾಡಿದ್ದಾರೆ ಎಂದವರು ಆರೋಪಿಸಿದರು.
ನಡ್ಡಾ ನೀಡಿರುವ ಹೇಳಿಕೆ ದೇಶದ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕ ವಾದುದು. ಕರ್ನಾಟಕ ಶೇ.94ರಷ್ಟು ಆರ್ಥಿಕ ಸ್ವಾವಲಂಬಿ ರಾಜ್ಯವಾಗಿದೆ. ರಾಜ್ಯವು ಪ್ರತಿವರ್ಷ ಒಟ್ಟು 6.27 ಲಕ್ಷ ಕೋಟಿ ರೂ.ಗಳನ್ನು ಬೇರೆ ಬೇರೆ ರೂಪದಲ್ಲಿ ಕೇಂದ್ರ ಸರಕಾರಕ್ಕೆ ನೀಡುತ್ತದೆ. ಇದರಲ್ಲಿ 4.25 ಲಕ್ಷ ಕೋಟಿ ರೂ. ವಿವಿಧ ತೆರಿಗೆಗಳ ಮೂಲಕ ಹಾಗೂ 2 ಲಕ್ಷಕೋಟಿ ರೂ. ಸೆಸ್ ಮೂಲಕ ಎಂದವರು ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದರು. ಆದರೆ ರಾಜ್ಯಕ್ಕೆ ಕೇಂದ್ರದಿಂದ ಪ್ರತಿವರ್ಷ ಬರುವ ಅನುದಾನ ಕೇವಲ 48,000 ಕೋಟಿ ರೂ.ಮಾತ್ರ ಎಂದವರು ವಿವರಿಸಿದರು.
ಡಬಲ್ ಇಂಜಿನ್ ಸರಕಾರ ಬೇಡ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕರು ಹೇಳುವಂತೆ ನಮಗೆ ಡಬಲ್ ಇಂಜಿನ್ ಸರಕಾರದ ಅಗತ್ಯವಿಲ್ಲ. ಏಕೆಂದರೆ ರಾಜ್ಯದ ಸರಕಾರ ಸ್ವಯಂನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮಂಜುನಾಥ ಭಂಡಾರಿ ತಿಳಿಸಿದರು.
ನಮಗಿಂದು ಬೇಕಾಗಿರುವುದು ರಿವರ್ಸ್ ಗೇರ್ ಸರಕಾರ. ಬಿಜೆಪಿ ಸರಕಾರ ಮಾಡಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರವನ್ನು ತೊಡೆದು ಹಾಕಿ ಮತ್ತೆ ಹಿಂದಿನ ಸ್ಥಿತಿಗೆ ತರಲು ರಿವರ್ಸ್ ಗೇರ್ ಸರಕಾರವೇ ಬೇಕು. 1200ರೂ.ಗಳಿಗೆ ಏರಿಸಿರುವ ಅಡುಗೆ ಅನಿಲ ಸಿಲಿಂಡರ್ನ ಬೆಲೆಯನ್ನು ಜನರಿಗಾಗಿ ಮತ್ತೆ 400-500ರೂ.ಗಳಿಗೆ ತರಬೇಕಾಗಿದೆ. ಇದನ್ನು ರಿವರ್ಸ್ ಗೇರ್ ಸರಕಾರ ಮಾಡಲಿದೆ ಎಂದರು.
ಈ ಚುನಾವಣಾ ಪ್ರಚಾರದ ವೇಳೆ 28 ಪ್ರಚಾರ ಭಾಷಣ ಮಾಡಿರುವ, ಹಾಗೂ 7 ರೋಡ್ ಶೋನಲ್ಲಿ ಪಾಲ್ಗೊಂಡಿ ರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಭಂಡಾರಿ, ಇದು ರಾಜ್ಯ ಬಿಜೆಪಿಯಲ್ಲಿ ಸೂಕ್ತ ನಾಯಕತ್ವ ಇಲ್ಲದಿರುವುದನ್ನು ಹಾಗೂ ಇತುವ ನಾಯಕರ ಮೇಲೆ ಅವರಿಗೆ ನಂಬುಗೆ ಇಲ್ಲದಿರುವುದನ್ನು ತೋರಿಸುತ್ತದೆ ಎಂದರು.
ಚುನಾವಣೆಯ ವೇಳೆ ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಯನ್ನು ಖಂಡಿತ ಈಡೇರಿಸಲಿದೆ. ಇದರಿಂದಾಗಿಯೇ ನಮಗೆ ರಾಜ್ಯದಲ್ಲಿ 140ರಿಂದ 150 ಸೀಟುಗಳನ್ನು ಗೆಲ್ಲುವ ವಿಶ್ವಾಸ ಮೂಡಿದೆ ಎಂದು ಮಂಜುನಾಥ ಭಂಡಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಾಯಕರಾದ ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಭಾಸ್ಕರ ರಾವ್ ಕಿದಿಯೂರು, ಹರೀಶ್ ಕಿಣಿ, ಕುಶಲ ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಾಳ, ರವಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
‘ತಲೆ ಬೋಳಿಸುವ ಖರ್ಚು ಕಾಂಗ್ರೆಸ್ ನೀಡಲಿದೆ’
ಕಾಂಗ್ರೆಸ್ ನೀಡಿರುವ ಗ್ಯಾರಂಟಿಯನ್ನು ಐದು ವರ್ಷದೊಳಗ ಅನುಷ್ಠಾನಗೊಳಿಸಿದರೆ, ತಾನು ಅರ್ಧ ತಲೆ ಬೋಳಿಸಿಕೊಂಡು ಕಾಂಗ್ರೆಸ್ ಕಚೇರಿ ಮುಂದೆ ಕುಳಿತುಕೊಳ್ಳುವುದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೀಡಿರುವ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬರಿಗೂ ಖಂಡಿತ ತಲುಪಿಸಲಿದೆ. ಹೀಗಾಗಿ ಸುರೇಶ್ ನಾಯಕ್ರ ತಲೆ ಬೋಳಿಸುವ ಖರ್ಚನ್ನು ಕಾಂಗ್ರೆಸ್ ಭರಿಸಲು ಸಿದ್ಧವಿದೆ ಎಂದು ನುಡಿದರು.







