ಸೇನಾ ವಿಮಾನ ದುರಂತ: 5 ವರ್ಷದಲ್ಲಿ 55 ಯೋಧರ ಮೃತ್ಯು
ಹೊಸದಿಲ್ಲಿ: ಕಳೆದ ಆರು ತಿಂಗಳಲ್ಲಿ ದೇಶೀಯವಾಗಿ ನಿರ್ಮಿಸಿದ ನಾಲ್ಕು ’ಧ್ರುವ’ ಅತ್ಯಾಧುನಿಕ ಲಘು ಹೆಲಿಕಾಪ್ಟರ್ (ಎಎಲ್ಎಚ್) ಅಪಘಾತಕ್ಕೀಡಾಗಿರುವ ನಡುವೆಯೇ ಸೋಮವಾರ ಇನ್ನೊಂದು ಎಂಐಜಿ-21 ಯುದ್ಧವಿಮಾನ ಪತನವಾಗಿದೆ. ದೇಶದಲ್ಲಿ ಸೇನಾ ವಿಮಾನಗಳು ಅಪಘಾತಕ್ಕೀಡಾಗುತ್ತಿರುವ ದರ ಗಣನೀಯವಾಗಿ ಹೆಚ್ಚಿರವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಭವಿಸಿದ 50 ಸೇನಾ ವಿಮಾನ ಮತ್ತು ಹೆಲಿಕಾಪ್ಟರ್ ಅಪಘಾತಗಳಲ್ಲಿ 55 ಮಂದಿ ಯೋಧರು ಜೀವ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಹಳೆಯ ಎಂಐಜಿ-21 ಜೆಟ್ಗಳು ಹಾಗೂ ಚೀತ್/ ಚೇತಕ್ ಹೆಲಿಕಾಪ್ಟರ್ಗಳು ಗಣನೀಯ ಪ್ರಮಾಣದಲ್ಲಿ ಅಪಘಾತಕ್ಕೀಡಾಗಿವೆ.
"ಎಂಐಜಿ-21 ಹಾಗೂ ಚೀತ್/ಚೇತಕ್ ಹೆಲಿಕಾಪ್ಟರ್ಗಳು ಸಿಂಗಲ್ ಎಂಜಿನ್ ಯಂತ್ರಗಳಾಗಿದ್ದು, 1960ರ ದಶಕದಲ್ಲಿ ಅಭಿವೃದ್ಧಿಪಡಿಸಿದ್ದಾಗಿದ್ದು, ಕಾರ್ಯಾಚರಣೆ ಬಳಕೆಯಿಂದ ಸಾಕಷ್ಟು ಹಿಂದೆಯೇ ಹೊರಗುಳಿದಿವೆ. ಆದರೆ ಹೊಸ ಸೇರ್ಪಡೆ ಇಲ್ಲದ ಕಾರಣ ಸಶಸ್ತ್ರ ಪಡೆಗಳ ಏನು ಮಾಡಲು ಸಾಧ್ಯ? ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
ಈ ವಿಮಾನಗಳಲ್ಲಿ ಆಧುನಿಕ ವೈಮಾನಿಕಶಾಸ್ತ್ರ ಸೌಕರ್ಯಗಳು ಅಥವಾ ಅಂತರ್ಗತವಾದ ಸುರಕ್ಷಾ ಕ್ರಮಗಳಿಲ್ಲ. ಜತೆಗೆ ಪೈಲಟ್ಗಳ ಹಾಗೂ ತಂತ್ರಜ್ಞರ ಅಸಮರ್ಪಕ ತರಬೇತಿ ಹಾಗೂ ಮೇಲ್ವಿಚಾರಣೆ, ಕಳಪೆ ನಿರ್ವಹಣೆ, ಕೂಲಂಕಷ ಪರೀಕ್ಷೆಗಳನ್ನು ನಡೆದಿರುವುದು, ಬಿಡಿಭಾಗಗಳಿಗೆ ಸಂಬಂಧಿಸಿದಂತೆ ಗುಣಮಟ್ಟ ನಿಯಂತ್ರಣದ ಕೊರತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.
ಶೇಕಡ 90ರಷ್ಟು ಅಪಘಾತಗಳಿಗೆ ಮಾನವ ಪ್ರಮಾದಗಳು ಹಾಗೂ ತಾಂತ್ರಿಕ ದೋಷಗಳು ಕಾರಣ ಎಂದು ಹಲವು ವರದಿಗಳಿಂದ ತಿಳಿದು ಬಂದಿದೆ. ಸಮರ್ಪಕವಾಗಿ ತಪಾಸಣೆ ಮತ್ತು ಸಮತೋಲನ, ಸರಿಪಡಿಸುವಿಕೆ ಕ್ರಮ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.