'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಉತ್ತರಪ್ರದೇಶದಲ್ಲಿ ತೆರಿಗೆ ಇಲ್ಲ : ಆದಿತ್ಯನಾಥ್
ಲಕ್ನೊ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ (Uttar Pradesh Chief Minister Adityanath) ಅವರು ಮಂಗಳವಾರ ತಮ್ಮ ಸರಕಾರ 'ದಿ ಕೇರಳ ಸ್ಟೋರಿ'The Kerala Story' ಚಲನಚಿತ್ರವನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸುವುದಾಗಿ ಘೋಷಿಸಿದ್ದಾರೆ.
"ದಿ ಕೇರಳ ಸ್ಟೋರಿ" ಅನ್ನು ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗುವುದು" ಎಂದು ಮುಖ್ಯಮಂತ್ರಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಆದಿತ್ಯನಾಥ್ ಹಾಗೂ ಅವರ ಇಡೀ ಕ್ಯಾಬಿನೆಟ್ ಚಿತ್ರದ ವಿಶೇಷ ಪ್ರದರ್ಶನವನ್ನು ನೋಡುವ ನಿರೀಕ್ಷೆಯಿದೆ.
ಮೇ 6 ರಂದು ಮಧ್ಯಪ್ರದೇಶವು ವಿವಾದಾತ್ಮಕ ಚಲನಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸಿದ ಮೊದಲ ರಾಜ್ಯವಾಯಿತು.
ಉತ್ತರಾಖಂಡದ ಬಿಜೆಪಿ ಸರಕಾರವು ರಾಜ್ಯದಲ್ಲಿ ಅದಾ ಶರ್ಮಾ ಅಭಿನಯದ ಚಲನಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಘೋಷಣೆ ಮಾಡುವ ನಿರೀಕ್ಷೆಯಿದೆ.
ಪಶ್ಚಿಮಬಂಗಾಳದಲ್ಲಿ ನಿಷೇಧ
ದಿ ಕೇರಳ ಸ್ಟೋರಿಯನ್ನು ನಿಷೇಧಿಸುವ ನಿರ್ಧಾರವನ್ನು ಪಶ್ಚಿಮ ಬಂಗಾಳ ಸರಕಾರ ಸೋಮವಾರ ಪ್ರಕಟಿಸಿದ್ದು, ರಾಜ್ಯದಲ್ಲಿ "ಶಾಂತಿಯನ್ನು ಕಾಪಾಡಲು" ಹಾಗೂ ಹಿಂಸಾಚಾರವನ್ನು ತಪ್ಪಿಸಲು ನಿಷೇಧಿಸುವ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ತಮಿಳುನಾಡಿನ ಮಲ್ಟಿಪ್ಲೆಕ್ಸ್ ಥಿಯೇಟರ್ಗಳು ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯನ್ನು ಉಲ್ಲೇಖಿಸಿ ಮೇ 7 ರಿಂದ ಕೇರಳ ಸ್ಟೋರಿ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿವೆ.