ಮತದಾನದ ಹಿನ್ನೆಲೆ: ದ.ಕ.ಜಿಲ್ಲಾದ್ಯಂತ ವಿಶೇಷ ಪೊಲೀಸ್ ಬಂದೋಬಸ್ತ್

ಮಂಗಳೂರು, ಮೇ 9: ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯುವ ಮತದಾನದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾದ್ಯಂತ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ 4,500ಕ್ಕೂ ಅಧಿಕ ಪೊಲೀಸ್/ಅರೆಸೇನಾ ಪಡೆಯ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 10 ಅಂತರ್ ರಾಜ್ಯ, 7 ಅಂತರ್ಜಿಲ್ಲಾ , 9 ಸ್ಥಳೀಯ ಚೆಕ್ಪೋಸ್ಟ್ಗಳಿವೆ. ಅಂತರ್ರಾಜ್ಯ ಚೆಕ್ಪೋಸ್ಟ್ಗಳಲ್ಲಿ ಕೇಂದ್ರ ಅರೆಸೇನಾ ಪಡೆ (ಸಿಪಿಎಂಎಫ್), ಸ್ಥಳೀಯ ಪೊಲೀಸ್ ಮತ್ತು ಸರ್ವೇಕ್ಷಣಾ ತಂಡ ಗಳು 24 ತಾಸು ಕಣ್ಗಾವಲು ಇರಿಸಿವೆ.
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 7 ಮತ್ತು ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿಯ 163 ಸೂಕ್ಷ್ಮ ಮತಗಟ್ಟೆಗಳು, ಗಡಿಭಾಗದ ಮತಗಟ್ಟೆಗಳಲ್ಲಿ ಕೂಡ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್, ಡಿಸಿಪಿ ಅಂಶುಕುಮಾರ್ ಮತ್ತು ದ.ಕ.ಜಿಲ್ಲಾ ಎಸ್ಪಿ ಡಾ. ವಿಕ್ರಮ್ ಅಮಟೆ ಮಂಗಳವಾರ ಮಸ್ಟರಿಂಗ್ ಕೇಂದ್ರಗಳು, ಮತಗಟ್ಟೆಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ‘ಚುನಾವಣೆಗೆ ಸಂಬಂಧಿಸಿದಂತೆ ನಗರದ 60 ರೌಡಿಗಳನ್ನು ಗಡಿಪಾರು ಮಾಡಲಾಗಿದ್ದು, ಅವರ ಮೇಲೆ ನಿಗಾ ವಿಶೇಷ ವಹಿಸಲಾಗಿದೆ. ಇಬ್ಬರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮಕೈಗೊಳ್ಳಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭದ್ರತೆಯ ಸಲುವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ 17 ಸೆಕ್ಟರ್ಗಳನ್ನು ರಚಿಸಲಾಗಿದೆ. ಇದರಲ್ಲಿ ಎಸ್ಸೈ, ಇನ್ಸ್ಪೆಕ್ಟರ್, ಎಸಿಪಿ ದರ್ಜೆಯ ಅಧಿಕಾರಿಗಳು ನಿರಂತರ ಗಸ್ತು ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಕೇರಳ ಗಡಿ ಭಾಗದಲ್ಲಿರುವ 8 ಚೆಕ್ಪೋಸ್ಟ್ಗಳಲ್ಲದೆ 14 ಒಳರಸ್ತೆಗಳಲ್ಲಿಯೂ ರಾಜ್ಯ ಸಶಸ್ತ್ರ ಮೀಸಲು ಪಡೆ ನಿಯೋಜಿಸಲಾಗಿದೆ. ಕಾಸರಗೋಡು ಪೊಲೀಸರೊಂದಿಗೆ ಜಂಟಿ ಗಸ್ತು ನಡೆಸಲಾಗುತ್ತಿದೆ. ಕಾಸರಗೋಡು ಪೊಲೀಸರು ಕೂಡ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಬಿಗಿಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದರು.