Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದೇಹದ ಅಂಗಾಂಗಗಳನ್ನು ಕಾಡುವ ಲೂಪಸ್ ರೋಗ

ದೇಹದ ಅಂಗಾಂಗಗಳನ್ನು ಕಾಡುವ ಲೂಪಸ್ ರೋಗ

ಇಂದು ವಿಶ್ವ ಲೂಪಸ್ ದಿನ

ಡಾ. ಮುರಲೀ ಮೋಹನ್, ಚೂಂತಾರುಡಾ. ಮುರಲೀ ಮೋಹನ್, ಚೂಂತಾರು10 May 2023 10:27 AM IST
share
ದೇಹದ ಅಂಗಾಂಗಗಳನ್ನು ಕಾಡುವ ಲೂಪಸ್ ರೋಗ
ಇಂದು ವಿಶ್ವ ಲೂಪಸ್ ದಿನ

ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸನ್ ಎಂಬ ಹೆಸರಿನಿಂದ ಕರೆಯಲ್ಪಡುವ ಲೂಪಸ್ ರೋಗ ಒಂದು ರೀತಿಯಲ್ಲಿ ವಿಶಿಷ್ಟ ರೋಗವಾಗಿದ್ದು, ಹಲವಾರು ಅಂಗಾಂಗಗಳನ್ನು ಸದ್ದಿಲ್ಲದೆ ಕಾಡುತ್ತದೆ. ಇದೊಂದು ಸಾಂಕ್ರಾಮಿಕವಲ್ಲದ, ದೀರ್ಘಕಾಲಿಕ ಕಾಯಿಲೆಯಾಗಿದ್ದು, ಚರ್ಮ, ಕೀಲುಗಳು, ಮೂತ್ರಪಿಂಡಗಳು, ಹೃದಯ, ಶ್ವಾಸಕೋಶಗಳು, ರಕ್ತನಾಳಗಳು ಮತ್ತು ಮೆದುಳು ಸೇರಿದಂತೆ ದೇಹದ ಹಲವಾರು ಭಾಗಗಳ ಮೇಲೆ ದಾಳಿ ಮಾಡುತ್ತದೆ.

ಇದೊಂದು ಅಟೋಇಮ್ಯೂನ್ ಅಂದರೆ ಸ್ವಯಂ ನಿರೋಧಕ ಕಾಯಿಲೆಯಾಗಿರುತ್ತದೆ. ಈ ರೋಗಿಗಳಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ನಮ್ಮ  ದೇಹದ ರಕ್ಷಣ ವ್ಯವಸ್ಥೆ ಅತ್ಯಂತ ಉಗ್ರವಾಗಿ ಕೆರಳಿಕೊಂಡು, ದೇಹದ ಜೀವಕೋಶಗಳ ಮೇಲೆ ದಾಳಿ ಮಾಡಿ, ಹಾನಿ ಉಂಟು ಮಾಡುತ್ತದೆ. ಈ ಲೂಪಸ್ ರೋಗದಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಅತಿಯಾಗಿ ಕ್ರಿಯಾಶೀಲವಾಗಿರುತ್ತದೆ.

ಎಚ್ಐವಿ ರೋಗಗಳಲ್ಲಿ ದೇಹದ ರಕ್ಷಣಾ ವ್ಯವಸ್ಥೆಯ ಮೇಲೆ ವೈರಾಣು ದಾಳಿ ಮಾಡಿ ಅದರ ಕ್ರಿಯಾಶೀಲತೆಯನ್ನು ಕುಂದಿಸುತ್ತದೆ. ಆದರೆ ಇಲ್ಲಿ ನಮ್ಮ ದೇಹದ (ಆ್ಯಂಟಿಬಾಡಿಗಳು) ಪ್ರತಿಕಾಯಗಳು ದೇಹದ ಜೀವಕೋಶಗಳ ಮೇಲೆಯೇ ದಾಳಿ ಮಾಡಿ ದೇಹದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಕೆರಳಿಸಿ, ಹಾಳುಗೆಡವುತ್ತದೆ. ಸಾಮಾನ್ಯವಾಗಿ ನಮ್ಮ ದೇಹಕ್ಕೆ ವೈರಾಣುಗಳು ಅಥವಾ ಬ್ಯಾಕ್ಟೀರಿಯಗಳು ದಾಳಿ ಮಾಡಿದಾಗ, ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಅವುಗಳ ವಿರುದ್ಧ ಹೋರಾಡಲು ಆ್ಯಂಟಿಬಾಡಿಗಳನ್ನು ತಯಾರು ಮಾಡಿ ದೇಹವನ್ನು ರಕ್ಷಿಸುತ್ತದೆ. ಆದರೆ ಇಲ್ಲಿ ದೇಹದ ಅಂಗಾಂಶಗಳ ವಿರುದ್ಧವೇ ಆ್ಯಂಟಿಬಾಡಿಗಳು ತಯಾರಾಗಿ ದೇಹದ ಅಂಗಾಂಶಗಳನ್ನು ಹಾಳು ಮಾಡಿ, ರೋಗದ ಲಕ್ಷಣಗಳನ್ನು ಪ್ರಕಟಪಡಿಸುತ್ತದೆ.

ಪ್ರತೀ ವರ್ಷ ಮೇ ತಿಂಗಳ 10ರಂದು ವಿಶ್ವ ಲೂಪಸ್ ದಿನ ಎಂದು ಆಚರಿಸಿ, ಈ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಮತ್ತು ತಪ್ಪುಕಲ್ಪನೆಗಳನ್ನು ತೊಡೆದು ಹಾಕಲಾಗುತ್ತದೆ. ಇದು ಖಂಡಿತವಾಗಿಯೂ ಸಾಂಕ್ರಾಮಿಕ ರೋಗ ಅಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಇಂತಹ ರೋಗಿಗಳನ್ನು ಅಸ್ಪಶ್ಯರಂತೆ ಕಾಣುತ್ತಿರುವುದು ಬಹಳ ಖೇದನೀಯ ವಿಚಾರ. ನಮ್ಮ ಭಾರತ ದೇಶದಲ್ಲಿ ಪ್ರತೀ ಒಂದು ಲಕ್ಷ ಜನರಲ್ಲಿ ಸುಮಾರು 5 ಮಂದಿ ಈ ಲೂಪಸ್ ರೋಗದಿಂದ ಬಳಲುತ್ತಿದ್ದಾರೆ.

ಈ ಲೂಪಸ್ ರೋಗವನ್ನು ಪತ್ತೆಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ಬಹಳ ಸಂಕೀರ್ಣವಾದ ಸಮಸ್ಯೆಯಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಮುಂದುವರಿದ ಹಂತದಲ್ಲಿ ರೋಗ ನಿರ್ಣಯ ಮಾಡಲಾಗುತ್ತದೆ ಮತ್ತು ರೋಗದ ಚಿಕಿತ್ಸೆ ಬಹಳ ನಿಧಾನ ಮತ್ತು ಶ್ರಮದಾಯಕವಾಗಿರುತ್ತದೆ. ಈ ಲೂಪಸ್ ರೋಗ ಪುರುಷರಿಗಿಂತ ಮಹಿಳೆಯರಲ್ಲಿ ಐದು ಪಟ್ಟು ಹೆಚ್ಚು ಸಾಮಾನ್ಯವಾಗಿರುತ್ತದೆ. ಸ್ಯಾಮಾನ್ಯವಾಗಿ 15 ರಿಂದ 45 ವರ್ಷದ ಮಹಿಳೆಯರನ್ನು ಈ ರೋಗ ಹೆಚ್ಚು ಕಾಡುತ್ತದೆ.

ಲೂಪಸ್ ರೋಗ ಕುಟುಂಬದ ಇತಿಹಾಸ ಹೊಂದಿದ್ದು ತಂದೆಯಿಂದ ಮಕ್ಕಳಿಗೆ ಬಳುವಳಿಯಾಗಿ ಬರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಕೆಲವೊಂದು ಔಷಧಿಗಳ ಅಡ್ಡ ಪರಿಣಾಮವಾಗಿ ಲೂಪಸ್ ರೋಗ ಬರುತ್ತದೆ. ಕೆಲವೊಂದು ನಿರ್ದಿಷ್ಟ ಔಷಧಿಗಳು ವ್ಯಕ್ತಿಯ ರಕ್ಷಣಾ ವ್ಯವಸ್ಥೆಯನ್ನು ಹಾಳುಗೆಡವಿ ಲೂಪಸ್ ರೋಗ ಬರುವಂತೆ ಮಾಡುವ ಸಾಧ್ಯತೆ ಇರುತ್ತದೆ.

ಲೂಪಸ್ ರೋಗಕ್ಕೆ ಕಾರಣಗಳು

1. ಜೆನೆಟಿಕ್ಸ್: ಲೂಪಸ್ ರೋಗಕ್ಕೆ ಕುಟುಂಬ ಚರಿತ್ರೆ ಇತಿಹಾಸವನ್ನು ಹೊಂದಿದ್ದು, ಹೆತ್ತವರಿಂದ ಮಕ್ಕಳಿಗೆ ಬರುವ ಸಾಧ್ಯತೆ ಇರುತ್ತದೆ. ಕಪ್ಪುವರ್ಣೀಯರಲ್ಲಿ ಹೆಚ್ಚು ಕಂಡುಬರುತ್ತದೆ.

2. ಸೋಂಕುಗಳು: ಕೆಲವೊಂದು ಬ್ಯಾಕ್ಟೀರಿಯ ಅಥವಾ ವೈರಾಣು ಸೋಂಕುಗಳ ರಕ್ಷಣಾ ವ್ಯವಸ್ಥೆಯನ್ನು ಕೆರಳಿಸಿ ಹಾಳುಗೆಡವಿ ಲೂಪಸ್ ರೋಗಕ್ಕೆ ಕಾರಣವಾಗಬಹುದು.

3. ಸೂರ್ಯನ ಬೆಳಕು: ಅತಿಯಾಗಿ ಸೂರ್ಯನ ಪ್ರಖರವಾದ ಬೆಳಕಿಗೆ ಒಡ್ಡಿಕೊಂಡಲ್ಲಿ ಚರ್ಮದಲ್ಲಿ ಪ್ರತಿ ರಕ್ಷಣಾ ವ್ಯವಸ್ಥೆ ಕೆರಳಿ ಲೂಪಸ್ ಉಂಟಾಗುವ ಸಾಧ್ಯತೆ ಇರುತ್ತದೆ.

4. ರಸದೂತಗಳ ಪ್ರಭಾವ: ಈಸ್ಟೋಜಿನ್ ಎಂಬ ರಸದೂತ ಲೂಪಸ್ ರೋಗಕ್ಕೆ ಪರೋಕ್ಷವಾಗಿ ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿದೆ. ಮಹಿಳೆ ಮತ್ತು ಪುರುಷ ಇಬ್ಬರಲ್ಲೂ ಈ ರಸದೂತ ಇರುತ್ತದೆ. ಆದರೆ ಮಹಿಳೆಯರಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ಆದರೆ ಮಹಿಳೆಯರಲ್ಲಿ ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ಮುಟ್ಟಿನ ಸಮಯದಲ್ಲಿ ಈ ರಸದೂತ ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸಲ್ಪಡುತ್ತದೆ ಮತ್ತು ಮಹಿಳೆಯರಲ್ಲಿ ಲೂಪಸ್ ಲಕ್ಷಣಗಳು ಕಾಣಿಸಬಹುದು.

5. ಔಷಧಿಗಳು: ಕೆಲವೊಂದು ಅಪಸ್ಮಾರ ನಿಯಂತ್ರಕ ಔಷಧಿಗಳು ಮತ್ತು ಆ್ಯಂಟಿ ಬಯೋಟಿಕ್ ಔಷಧಿಗಳು ಲೂಪಸ್ ರೋಗಕ್ಕೆ ಕಾರಣವಾಗಬಹುದು ಎಂದು ತಿಳಿದು ಬಂದಿದೆ. ಈ ಔಷಧಿಗಳನ್ನು ಬದಲಿಸಿದ ಬಳಿಕ ಅಥವಾ ನಿಲ್ಲಿಸಿದ ಬಳಿಕ ರೋಗದ ಲಕ್ಷಣಗಳು ಸುಧಾರಿಸುತ್ತದೆ ಎಂದು ತಿಳಿದು ಬಂದಿದೆ.

ಪತ್ತೆ ಹಚ್ಚುವುದು ಹೇಗೆ?

ಈ ರೋಗ ಪತ್ತೆ ಹಚ್ಚುವುದು ಬಹಳ ಸಂಕೀರ್ಣವಾಗಿದೆ. ಸಾಮಾನ್ಯವಾಗಿ ರಕ್ತ ಪರೀಕ್ಷೆ, ಮೂತ್ರ ಪಿಂಡದ ಮೌಲ್ಯಮಾಪನ ಪರೀಕ್ಷೆ, ಯಕೃತ್ ಕಾರ್ಯಕ್ಷಮತೆ ಪರೀಕ್ಷೆ, ಮೂತ್ರದ ಪರೀಕ್ಷೆ, ಎದೆಗೂಡಿನ ಕ್ಷ-ಕಿರಣ ಪರೀಕ್ಷೆ, ಹೃದಯದ ಇಸಿಜಿ ಮತ್ತು ಇಕೋ ಕಾರ್ಡಿಯೋಗ್ರಾಮ್ ಪರೀಕ್ಷೆ ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ಚರ್ಮದ ಬಯಾಪ್ಸಿ ಪರೀಕ್ಷೆ ಮಾಡಲಾಗುತ್ತದೆ. ಇದರ ಜೊತೆಗೆ ಆ್ಯಂಟಿ ನೂಕ್ಲಿಯರ್ ಆಂಟಿಬಾಡಿ ಎಂಬ ಪರೀಕ್ಷೆ ಕೂಡಾ ಮಾಡಲಾಗುತ್ತದೆ. ಕೊನೆಗೆ ರೋಗಿಯ ವಯಸ್ಸು, ಲಿಂಗ, ರೋಗದ ಲಕ್ಷಣಗಳು, ಕುಟುಂಬ ಚರಿತ್ರೆ, ರೋಗದ ತೀವ್ರತೆ ಎಲ್ಲವನ್ನು ಈ ಪರೀಕ್ಷೆಗಳ ಫಲಿತಾಂಶಗಳ ಜೊತೆಗೆ ತಾಳೆ ಹಾಕಿ ರೋಗದ ನಿರ್ಣಯ ಮಾಡಲಾಗುತ್ತದೆ. ಈ ರೋಗ ನಿರ್ಣಯ ಮಾಡಲು ಫಿಸಿಷಿಯನ್, ಮೂತ್ರಪಿಂಡ ತಜ್ಞರು, ನೇಪ್ರಾಲಾಜಿಸ್ಟ್, ನರರೋಗತಜ್ಞರು, ಹೃದ್ರೋಗ ತಜ್ಞರು, ಚರ್ಮರೋಗ ತಜ್ಞರು, ಅನ್ನನಾಳ ತಜ್ಞರು ಎಲ್ಲರೂ ಒಟ್ಟು ಸೇರಿ ವಿಚಾರ ವಿನಿಮಯ ಮಾಡಿ ರೋಗದ ಲಕ್ಷಣ ಮತ್ತು ಚರಿತ್ರೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಅಂತಿಮವಾಗಿ ರೋಗದ ನಿರ್ಣಯವನ್ನು ಮಾಡುತ್ತಾರೆ. ಒಮ್ಮೆ ರೋಗದ ನಿರ್ಣಯ ಮಾಡಿ, ರೋಗದ ಮೂಲವನ್ನು ಪತ್ತೆ ಮಾಡಿದ ಬಳಿಕ ರೋಗದ ಚಿಕಿತ್ಸೆ ಸುಲಭವಾಗುತ್ತದೆ. 

ಚಿಕಿತ್ಸೆ ಸಿಗದಿದ್ದಲ್ಲಿ...

1. ರಕ್ತಹೀನತೆ, ಆಂತರಿಕ ರಕ್ತಸ್ರಾವ, ಆಂತರಿಕ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಇರುತ್ತದೆ.

2. ರಕ್ತನಾಳಗಳ ಉರಿಯೂತ ಉಂಟಾಗಬಹುದು

3. ಮೂತ್ರಪಿಂಡದ ಶಾಶ್ವತ ವೈಫಲ್ಯ ಮತ್ತು ಹಾನಿ ಉಂಟಾಗಬಹುದು

4. ಹೃದಯ ರಕ್ತನಾಳದ ಕಾಯಿಲೆಗಳು ಬರುತ್ತದೆ. ಹೃದಯದ ಸ್ನಾಯುಗಳ ಉರಿಯೂತ ಉಂಟಾಗಿ ಹೃದಯಾಘಾತದ ಅಪಾಯ ವೃದ್ಧಿಸುತ್ತದೆ.

5. ತಲೆನೋವು, ತಲೆಸುತ್ತುವಿಕೆ ಮತ್ತು ಪಾರ್ಶ್ವವಾಯು ಕೂಡಾ ಉಂಟಾಗಬಹುದು.

ಈ ಎಲ್ಲಾ ಕಾರಣಗಳಿಂದ ಸಕಾಲದಲ್ಲಿ ಎಚ್ಚೆತ್ತು ಸೂಕ್ತ ತಜ್ಞ ವೈದ್ಯರ ಬಳಿ ಸಕಾಲಿಕವಾಗಿ ಪರಿಪೂರ್ಣ ಚಿಕಿತ್ಸೆ ಪಡೆಯಬೇಕು.

ಚಿಕಿತ್ಸೆ ಹೇಗೆ?

ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ರೋಗದ ಲಕ್ಷಣಗಳು ಮತ್ತು ಅವುಗಳ ತೀವ್ರತೆಯನ್ನು ಅನುಸರಿಸಿ ಚಿಕಿತ್ಸೆ ನೀಡಲಾಗುತ್ತದೆ. ಕೆರಳಿದ ದೇಹದ ರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸಲು ಬೇಕಾದ ಔಷಧಿ ನೀಡಲಾಗುತ್ತದೆ. ಸ್ಟೀರಾಯ್ಡ್ ಔಷಧವನ್ನು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಈ ಚಿಕಿತ್ಸೆ ಬಗ್ಗೆ ಇನ್ನೂ ಗೊಂದಲ ಇದೆ. ಲೂಪಸ್ ಕಾರಣದಿಂದ ಉಂಟಾದ ನೋವು, ಉರಿಯೂತ, ಜ್ವರಗಳನ್ನು  ನಿಯಂತ್ರಿಸಲು ಬೇಕಾದ ಔಷಧಿ ನೀಡಲಾಗುತ್ತದೆ. ಯಾವ ಕಾರಣಕ್ಕೆ ಲೂಪಸ್ ಉಂಟಾಗುತ್ತದೆ ಎಂದು ಪತ್ತೆ ಹಚ್ಚಿ ಅದಕ್ಕೆ ಬೇಕಾದ ಚಿಕಿತ್ಸೆ ನೀಡಲಾಗುತ್ತದೆ. ನಿರಂತರ ವ್ಯಾಯಾಮ, ಈಜುವಿಕೆ, ಸೈಕ್ಲಿಂಗ್ ಮುಂತಾದವುಗಳಿಗೆ ಚಿಕಿತ್ಸೆಯಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ರೀತಿ  ಮಾಡಿ  ಸ್ನಾಯುಗಳ ಆರೋಗ್ಯ ಕಾಪಾಡಲಾಗುತ್ತದೆ.

ಕೊನೆಮಾತು:

ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಳುಗೆಡವಿ ದೇಹದ ಹೆಚ್ಚಿನ ಎಲ್ಲಾ ಅಂಗಾಂಗಗಳನ್ನು ಆವರಿಸುವ ಕಾರಣದಿಂದ ಈ ರೋಗಕ್ಕೆ ಸಿಸ್ಟೆಮಿಕ್ ಲೂಪಸ್ ಎರಿಥೆ ಮಾಟೋಸಿಸ್ ಎಂಬ ಹೆಸರು ಬಂದಿದೆ. ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ರೋಗದ ತೀವ್ರತೆ ಮತ್ತು ಲಕ್ಷಣಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಸಂಪೂರ್ಣವಾಗಿ ಈ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಇದನ್ನು ಜನರು ಅರಿತು ವೈದ್ಯರ ಜೊತೆ ಸಹಕರಿಸಿದಲ್ಲಿ ಚಿಕಿತ್ಸೆ ನೀಡಲು ಹೆಚ್ಚು ಸುಲಭವಾಗಬಹುದು.

ರೋಗದ ಲಕ್ಷಣಗಳು

 ► ಕೀಲು ನೋವು, ಬಿಗಿತ ಮತ್ತು ಉರಿಯೂತ ಕಂಡು ಬರುತ್ತದೆ.

 ► ಅತಿಯಾದ ಸುಸ್ತು, ಆಯಾಸ ಮತ್ತು ಜ್ವರ ಬಂದಂತೆ ಅನಿಸುತ್ತದೆ.

 ► ಮುಖದ ಮೇಲೆ ಚಿಟ್ಟೆಯ ಆಕಾರದ ಮಚ್ಚೆಗಳು ಕಂಡು ಬರುತ್ತದೆ. ಚರ್ಮದ ಕಾಂತಿ ಕಳೆದು ಹೋಗಿ ವಿಕಾರವಾಗುತ್ತದೆ.

 ► ಸನ್ ಬರ್ನ್ ಅಂದರೆ ಸೂರ್ಯನ ಶಾಖಕ್ಕೆ ಚರ್ಮ ಕೆಂಪಗಾಗಿ ಊದಿಕೊಳ್ಳುತ್ತದೆ.

 ► ತಲೆ ನೋವು, ಗೊಂದಲ, ಮರೆವು, ಒಣ ಕಣ್ಣುಗಳು, ಎದೆನೋವು, ಉಸಿರಾಟದ ತೊಂದರೆ ಕಾಡಬಹುದು.

 ► ಶೀತಕ್ಕೆ ಒಡ್ಡಿಕೊಂಡಾಗ ಮತ್ತು ಒತ್ತಡದ ಸನ್ನಿವೇಶಗಳಲ್ಲಿ, ಬೆರಳುಗಳು, ಕಾಲ್ಬೆರಳುಗಳು ಬಿಳಿಚಿಕೊಳ್ಳಬಹುದು ಮತ್ತು ನೀಲಬಣ್ಣಕ್ಕೆ ತಿರುಗುತ್ತದೆ.

share
ಡಾ. ಮುರಲೀ ಮೋಹನ್, ಚೂಂತಾರು
ಡಾ. ಮುರಲೀ ಮೋಹನ್, ಚೂಂತಾರು
Next Story
X