ರಾಹುಲ್, ಕೇಜ್ರಿವಾಲ್ ವಿರುದ್ಧ ಸಿಬಿಐ ತನಿಖೆ ಕೋರುವ ಅರ್ಜಿ ವಿಚಾರಣೆಗೆ ಸುಪ್ರೀಂ ಅಂಗೀಕಾರ
ಹೊಸದಿಲ್ಲಿ, ಮೇ 10: ಹಲವಾರು ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿರುವ ವಿಷಯದಲ್ಲಿ ಕೇಂದ್ರ ಸರಕಾರದ ವಿರುದ್ಧ ‘‘ತಪ್ಪು ಹೇಳಿಕೆಗಳನ್ನು’’ ನೀಡಿರುವುದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕೆಂದು ಸಿಬಿಐಗೆ ನಿರ್ದೇಶನಗಳನ್ನು ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯನ್ನು ಆಗಸ್ಟ್ 7ರಂದು ನಡೆಸಲು ದಿಲ್ಲಿ ಹೈಕೋರ್ಟ್ ಬುಧವಾರ ನಿರ್ಧರಿಸಿದೆ.
ತನ್ನ ಅರ್ಜಿಗೆ ಸಂಬಂಧಿಸಿ ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸಲು ಅರ್ಜಿದಾರ ಸುರ್ಜಿತ್ ಸಿಂಗ್ ಯಾದವ್ ಗೆ ಮುಖ್ಯ ನ್ಯಾಯಾಧೀಶ ಸತೀಶ್ಚಂದ್ರ ಶರ್ಮ ಮತ್ತು ನ್ಯಾ. ಸುಬ್ರಮಣಿಯಮ್ ಪ್ರಸಾದ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಸಮಯಾವಕಾಶ ನೀಡಿತು.
ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಅರ್ಜಿದಾರರ ವಕೀಲರು ಸಮಯಾವಕಾಶ ಕೋರುತ್ತಿದ್ದಾರೆ, ಹಾಗಾಗಿ, ಅರ್ಜಿಯ ವಿಚಾರಣೆಯನ್ನು ಆಗಸ್ಟ್ 7ಕ್ಕೆ ನಿಗದಿಪಡಿಸಿ ಎಂದು ನ್ಯಾಯಾಲಯ ಸೂಚಿಸಿತು.
ಸಾಲವನ್ನು ‘ರೈಟ್ ಆಫ್’ ಮಾಡುವುದು ಎಂದರೆ ‘‘ವೇವ್ ಆಫ್’’ (ಮನ್ನಾ) ಅಲ್ಲ ಎಂದು ಅರ್ಜಿದಾರರ ವಕೀಲ ವಾದಿಸಿದರು. ಕೈಗಾರಿಕೋದ್ಯಮಿಗಳಿಗೆ ನೀಡಲಾಗಿದ್ದ ಕೋಟ್ಯಂತರ ರೂಪಾಯಿ ಸಾಲಗಳನ್ನು ‘‘ಮನ್ನಾ ಮಾಡಲಾಗುತ್ತಿದೆ’’ ಎಂಬುದಾಗಿ ಮಾಧ್ಯಮಗಳಲ್ಲಿ ‘‘ತಪ್ಪಾಗಿ’’ ಪ್ರಕಟಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ಬಗ್ಗೆ ತಪ್ಪು ಭಾವನೆಯನ್ನು ಮೂಡಿಸಲು ರಾಜಕೀಯ ನಾಯಕರು ಮತ್ತು ಮಾಧ್ಯಮದವರು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮ ಕಾರ್ಯಸೂಚಿಗಳಿಗೆ ಪೂರಕವಾಗಿ ವಾಸ್ತವಾಂಶಗಳನ್ನು ತಿರುಚುತ್ತಿದ್ದಾರೆ. ‘‘ಕಪೋಲಕಲ್ಪಿತ’’ ಸುದ್ದಿಗಳಿಂದಾಗಿ ಜಗತ್ತಿನ ಮುಂದೆ ದೇಶದ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ.