ಅಭಿವೃದ್ಧಿ ನಿಧಿ ಯೋಜನೆ ವಿಸ್ತರಿಸಲು ಕೆಪಿಎಫ್ಬಿಎ ಮನವಿ

ಮಂಗಳೂರು: ಪಶುಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ ಯೋಜನೆಯನ್ನು ಇನ್ನೂ ಎರಡು ವರ್ಷಗಳ ವರೆಗೆ ವಿಸ್ತರಿಸುವಂತೆ ಕರ್ನಾಟಕ ಪೌಲ್ಟ್ರಿ ಫಾರ್ಮರ್ ಆ್ಯಂಡ್ ಬ್ರೀಡರ್ಸ್ ಅಸೋಸಿಯೇಶನ್ ( ಕೆಪಿಎಫ್ಬಿಎ ), ಮಹಾರಾಷ್ಟ್ರದ ಪೌಲ್ಟ್ರಿ ಫಾರ್ಮರ್ ಆ್ಯಂಡ್ ಬ್ರೀಡರ್ಸ್ ಅಸೋಸಿಯೇಶನ್, ಪಶ್ಚಿಮ ಬಂಗಾಳ ಪೌಲ್ಟ್ರಿ ಫೆಡರೇಶನ್ ಮತ್ತು ಸೆಂಟ್ರಲ್ ಇಂಡಿಯಾ ವೆಂಕೋಬ್ ಬ್ರಾಯ್ಲರ್ ಬ್ರೀಡರ್ಸ್ ಹ್ಯಾಚರೀಸ್ ಅಸೋಸಿಯೇಶನ್ನ ಪದಾಧಿಕಾರಿಗಳು ಕೇಂದ್ರ ಸರಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯದರ್ಶಿ ಡಾ.ರಾಜೇಶ್ ಕುಮಾರ್ ಸಿಂಗ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಆತ್ಮನಿರ್ಭರ ಭಾರತ ಅಭಿಯಾನ ಉತ್ತೇಜನ ಪ್ಯಾಕೇಜ್ನ ಭಾಗವಾಗಿ ಪ್ರಾರಂಭಿಸಲಾದ ಈ ಯೋಜನೆಯು ಫೀಡ್ ಮಿಲ್ಗಳು, ಹ್ಯಾಚರಿಗಳು ಮತ್ತು ಸಂಸ್ಕರಣಾ ಘಟಕಗಳ ಸಹಿತ ಪಶುಸಂಗೋಪನಾ ಮೂಲ ಸೌಕರ್ಯಗಳಲ್ಲಿ ಹೂಡಿಕೆಗೆ ಪ್ರೋತ್ಸಾಹ ನೀಡುವ ಮೂಲಕ ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಯೋಜನೆಯ ಮೂಲಕ ನೀಡಲಾಗುವ ಮೂರು ಪ್ರತಿಶತದಷ್ಟು ಬಡ್ಡಿ ಸಹಾಯಧನ ರೈತರಿಗೆ ಗಮನಾರ್ಹ ಉತ್ತೇಜನವನ್ನು ನೀಡಿದೆ. ಮಾ.೩೧ರಂದು ಕೊನೆಗೊಂಡ ಯೋಜನೆಯ ವಿಸ್ತರಣೆಯು ಮೂಲಸೌಕರ್ಯ ಯೋಜನೆಗಳನ್ನು ಸ್ಥಾಪಿಸುವುದರಿಂದ ಇನ್ನೂ ಅನೇಕ ರೈತರಿಗೆ ಪ್ರಯೋಜನ ಪಡೆಯಲು ಸಹಾಯ ಮಾಡುತ್ತದೆ ಎಂದು ಕೆಪಿಎಫ್ಬಿಎ ಅಧ್ಯಕ್ಷ ಡಾ.ಬಿ.ಸುಶಾಂತ್ ರೈ ಹೇಳಿದರು.
ಇದರಿಂದ ರೈತರು ಮತ್ತು ಗ್ರಾಹಕರಿಗೆ ಅತ್ಯಗತ್ಯವಾದ ಗುಣಮಟ್ಟದ ಪ್ರಾಣಿ ಪ್ರೋಟಿನ್ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ಈ ಯೋಜನೆಯನ್ನು ವಿಸ್ತರಿಸುವ ಮೂಲಕ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವುದರ ಜತೆಗೆ ಉದ್ಯೋಗವನ್ನು ಸೃಷ್ಟಿಸುವ ಮೂಲಸೌಕರ್ಯ ಯೋಜನೆಗಳನ್ನು ಸ್ಥಾಪಿಸಲು ಸರಕಾರವು ಉದ್ಯಮಿಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.







