ಸುರತ್ಕಲ್: ಎನ್ ಐಟಿಕೆಯ ಕೇಂದ್ರ ಗ್ರಂಥಾಲಯದಲ್ಲಿ ಭದ್ರವಾಗಿದೆ ದ.ಕ ಜಿಲ್ಲೆಯ ಅಭ್ಯರ್ಥಿಗಳ ಚುನಾವಣಾ ಭವಿಷ್ಯ

ಸುರತ್ಕಲ್, ಮೇ 11: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಎನ್ ಐಟಿಕೆಯ ಕೇಂದ್ರ ಗ್ರಂಥಾಲಯದಲ್ಲಿ ನಿರ್ಮಿಸಲಾಗಿರುವ ಭದ್ರತಾ ಕೊಠಡಿಯಲ್ಲಿ ಭದ್ರವಾಗಿದೆ.
ಭದ್ರತಾ ಕೊಠಡಿಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಮೂರು ಪಾಳಿಯಲ್ಲಿ ಸಿ ಆರ್ ಪಿ ಎಫ್ ಜವಾನರನ್ನು ನಿಯೋಜಿಸಲಾಗಿದೆ. ಜೊತೆಗೆ ಚುನಾವಣಾ ಆಯೋಗದ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಸದ್ಯ ಎನ್ ಐಟಿಕೆ ಎಲ್ಲಿ ನಿರ್ಮಿಸಲಾಗಿರುವ ಬದ್ರತಾ ಕೊಠಡಿಯ ಬಳಿಗೆ ಯಾವುದೇ ರಾಜಕೀಯ ಪಕ್ಷಗಳ ನೇತಾರರು ಸೇರಿದಂತೆ ಯಾವೊಬ್ಬರಿಗೂ ಅವಕಾಶ ನೀಡಲಾಗುತ್ತಿಲ್ಲ. ಎನ್ಐಟಿಕೆ ಆವರಣದ ಸುತ್ತ ಸುರತ್ಕಲ್ ಪೊಲೀಸರು ಮತ್ತು ಸಿ ಆರ್ ಪಿ ಎಫ್ ಜವಾನರನ್ನು ನಿಯೋಜಿಸಲಾಗಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಭದ್ರತಾ ಕೊಠಡಿಯಲ್ಲಿ ಭದ್ರ ಆಗಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯವೂ ಮೇ 13ರ ಶನಿವಾರದಂದು ಹೊರಬೀಳಲಿದೆ.
ಮತ ಎಣಿಕೆಯ ಸಂದರ್ಭ ಜಿಲ್ಲಾಡಳಿತದಿಂದ ಅನುಮತಿ ಪಡೆದಿರುವ ಪತ್ರಕರ್ತರು ಹಾಗೂ ಅಭ್ಯರ್ಥಿಗಳ ಏಜೆಂಟರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಬಿಗಿ ಭದ್ರತೆಯನ್ನು ಏರ್ಪಡಿಸಲು ಸಿಆರ್ಪಿಎಫ್, ಕೆಎಸ್ಆರ್ಪಿ ತುಕಡಿಗಳನ್ನು ಬಳಸಲಾಗುವುದು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
