ಡಾ.ನೂರ್ ಸಮದ್ ಅಬ್ಬಲಗೆರೆಗೆ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ

ಮಂಗಳೂರು: ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಕೃತಿಗೆ ಮುಸ್ಲಿಮ್ ಲೇಖಕರ ಸಂಘವು ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡುವ ರಾಜ್ಯಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯನ್ನು ‘ವಿಸ್ಮಯ ಕೀಟ ಪ್ರಪಂಚ’ ಕೃತಿಯ ಲೇಖಕ ಡಾ. ನೂರ್ ಸಮದ್ ಅಬ್ಬಲಗೆರೆ ಅವರಿಗೆ ಶುಕ್ರವಾರ ನಗರದ ಕಂಕನಾಡಿ ಮಸೀದಿ ಬಳಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನಗೈದು ಮಾತನಾಡಿದ ಶಾಸಕ ಯು.ಟಿ.ಖಾದರ್ ‘ಸಾಹಿತ್ಯ ಕೃತಿಗಳ ರಚನೆ ಮತ್ತು ಓದುವುದ ರಿಂದ ಸಕಾರಾತ್ಮಕ ಭಾವನೆ ಮೂಡಲಿದೆ. ಸಾಹಿತಿ ಹಾಗೂ ಸಾಹಿತ್ಯದಿಂದ ಸಮಾಜ ಮತ್ತು ಮನಸ್ಸುಗಳನ್ನು ಜೋಡಿಸುವ ಕೆಲಸವೂ ಆಗುತ್ತಿರುವುದು ಗಮನಾರ್ಹ. ಭವಿಷ್ಯದ ಹಿತದೃಷ್ಟಿಯಿಂದ ಮುಸ್ಲಿಂ ಸಮುದಾಯದಲ್ಲಿ ಸಾಹಿತಿ, ಲೇಖಕರು ಅಧಿಕ ಸಂಖ್ಯೆಯಲ್ಲಿದ್ದರೂ ಕೂಡ ಮತ್ತಷ್ಟು ಸಾಹಿತಿಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಅಗತ್ಯವಿದೆ’ ಎಂದರು.
ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಡಾ. ನೂರ್ ಸಮದ್ ಅಬ್ಬಲಗೆರೆ ‘ಬದ್ಧತೆ, ನಿಷ್ಠೆ, ಶ್ರದ್ಧೆಯಿಂದ ಯಾವುದೇ ಕೆಲಸ ಕೈಗೆತ್ತಿಕೊಂಡರೆ ಮನ್ನಣೆ ಸಿಗಲಿದೆ ಎಂಬುದಕ್ಕೆ ‘ವಿಸ್ಮಯ ಕೀಟ ಪ್ರಪಂಚ’ ಕೃತಿಗೆ ಲಭಿಸಿದ ಈ ಪ್ರಶಸ್ತಿಯು ಸಾಕ್ಷಿಯಾಗಿದೆ’ ಎಂದರು.
ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಸಲೀಂ ಬೋಳಂಗಡಿ ಸ್ತುತಿಗೀತೆ ಹಾಡಿದರು. ಸಂಘದ ಜೊತೆ ಕಾರ್ಯದರ್ಶಿ ಎ.ಕೆ.ಕುಕ್ಕಿಲ ಸ್ವಾಗತಿಸಿದರು. ಉಪಾಧ್ಯಕ್ಷ ಆಲಿಕುಂಞಿ ಪಾರೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.
ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿಗಳಾದ ಮುಹಮ್ಮದ್ ಬಡ್ಡೂರು, ರಾಜಾರಾಮ ವರ್ಮ ವಿಟ್ಲ, ಡಾ. ಅರುಣ್ ಉಳ್ಳಾಲ, ತನ್ಸೀರಾ ಆತೂರ್ ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ‘ಸೌಹಾರ್ದ ಪರಂಪರೆ: ಅಂದು-ಇಂದು-ಮುಂದು’ ಎಂಬ ವಿಷಯದಲ್ಲಿ ಪ್ರಧಾನ ಭಾಷಣಗೈದ ವ್ಯಂಗ್ಯ ಚಿತ್ರಗಾರ ದಿನೇಶ್ ಕುಕ್ಕುಜಡ್ಕ ‘ಸೌಹಾರ್ದಕ್ಕೆ ಒತ್ತು ನೀಡಿರುವ ಅನೇಕ ಪ್ರಸಂಗಗಳನ್ನು ಇತಿಹಾಸದ ಪುಟಗಳಿಂದ ತಿಳಿಯಬಹುದಾಗಿದೆ. ಅದು ಈಗಲೂ ಮುಂದುವರಿದಿದೆ. ಎಲ್ಲೋ ಒಂದುಕಡೆ ಯಾರೋ ಕೆಲವರ ಕುಹಕದಿಂದ ಅಹಿತಕರ ಘಟನೆ ನಡೆದಾಗ ಸೌಹಾರ್ದ ನಾಶವಾಗಿದೆ, ಸಾಮರಸ್ಯಕ್ಕೆ ಹೊಡೆತ ಬಿದ್ದಿವೆ ಎಂದು ಭಾವಿಸಬೇಕಿಲ್ಲ. ಸಮಾಜದಲ್ಲಿ ಸೌಹಾರ್ದ ಬಯಸುವ ಕೋಟ್ಯಂತರ ಜನರು ಇದ್ದಾರೆ ಎಂಬ ಸಕಾರಾತ್ಮಕ ಭಾವನೆಯಿಂದಿರಬೇಕಿದೆ’ ಎಂದರು.
ಅನಾಹುತಗಳು ಸಂಭವಿಸಿದಾಗ, ದುರ್ಘಟನೆಗಳು ನಡೆದಾಗ ಯುವಕರು ಜಾತಿ, ಮತ, ಧರ್ಮಗಳನ್ನು ನೋಡದೆ ನೆರವಿಗೆ ಧಾವಿಸುವುದನ್ನು ಎಲ್ಲಾ ಕಡೆಯೂ ಕಾಣಬಹುದು. ಇದು ಹೃದಯಗಳನ್ನು ಬೆಸೆಯುವ ಅತ್ಯುತ್ತಮ ಪ್ರಕ್ರಿಯೆಯಾಗಿದೆ. ಆದರೆ ಈ ಪ್ರಕ್ರಿಯೆಗೆ ದುರಂತಗಳು ಅಥವಾ ಅವಘಡಗಳೇ ನಡೆಯಬೇಕಾ? ಅವಘಡಗಳ ಹೊರತಾಗಿಯೂ ಸದಾ ಪರಸ್ಪರ ಬೆರೆತು ಸೌಹಾರ್ದದಿಂದಿರಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ ದಿನೇಶ್ ಕುಕ್ಕುಜಡ್ಕ ‘ರಾಜಕಾರಣ, ಅಧಿಕಾರ, ಹಣ ಬಲ ಇತ್ಯಾದಿಗಳು ಸೌಹಾರ್ದಕ್ಕೆ ಅಡ್ಡಿಯಾಗುತ್ತದೆ ಎಂಬ ವಾಸ್ತವನನ್ನು ನಾವೆಲ್ಲ ಅರಿತುಕೊಳ್ಳಬೇಕಿದೆ ಎಂದರು.
ಜಿಲ್ಲೆಯ ಕೆಲವು ಕಡೆಯ ಜಾತ್ರೆಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಗುಲ್ಲೆಬ್ಬಿಸುವ ಬ್ಯಾನರ್ ಹಾಕಲಾಯಿತು. ಆದರೆ ಇದರಿಂದ ಯಾರೂ ನಿರಾಶರಾಗಬೇಕಿಲ್ಲ. ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ಬ್ಯಾನರ್ಗೆ ಕಟ್ಟಿದ ನೂಲು ತುಂಡಾದೀತೇ ವಿನಃ ಸೌಹಾರ್ದ ಎಂದೂ ಹಾಳಾಗದು. ದೇಶದ ಹಲವೆಡೆಯ ಜನಾಂಗೀಯ ದ್ವೇಷದ ಮಧ್ಯೆಯೂ ಸೌಹಾರ್ದದ ವಾತಾವರಣವನ್ನು ಕಾಣ ಬಹುದಾಗಿದೆ ಎಂದು ದಿನೇಶ್ ಕುಕ್ಕುಜಡ್ಕ ಹೇಳಿದರು.