ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ನೈತಿಕ ನೆಲೆಯಲ್ಲಿ ಶಿಂಧೆ, ಫಡ್ನವೀಸ್ ರಾಜೀನಾಮೆಗೆ ಉದ್ಧವ್ ಠಾಕ್ರೆ ಆಗ್ರಹ
ಮುಂಬೈ: ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ನೈತಿಕ ನೆಲೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಾಜೀನಾಮೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರು ಆಗ್ರಹಿಸಿದ್ದಾರೆ. ಹೊಸದಾಗಿ ಚುನಾವಣೆಯನ್ನು ಎದುರಿಸುವಂತೆ ಅವರು ಶಿಂದೆಯವರಿಗೆ ಸವಾಲು ಹಾಕಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪು ಆಗಿನ ರಾಜ್ಯಪಾಲ ಭಗತ ಸಿಂಗ್ ಕೋಶಿಯಾರಿ ಅವರ ಪಾತ್ರವನ್ನು ಬಯಲಿಗೆಳೆದಿದೆ ಮತ್ತು ಟೀಕಿಸಿದೆ ಕೂಡ. ಅಲ್ಲದೆ ಪಕ್ಷದ ಸಚೇತಕರಿಗೆ ಮಾನ್ಯತೆ ನೀಡುವಲ್ಲಿ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಪಾತ್ರದ ಕುರಿತೂ ಪ್ರಶ್ನೆಗಳನ್ನೆತ್ತಿದೆ ಎಂದು ಹೇಳಿದ ಠಾಕ್ರೆ,‘ರಾಜ್ಯಪಾಲರ ಪಾತ್ರವು ಶಂಕಾಸ್ಪದ ಮತ್ತು ಅಸಾಂವಿಧಾನಿಕವಾಗಿತ್ತು. ಒಂದು ಕಾಲದಲ್ಲಿ ರಾಜ್ಯಪಾಲರ ಹುದ್ದೆಗೆ ಗೌರವವಿತ್ತು. ಆದರೆ ರಾಜ್ಯಪಾಲರನ್ನು ಎದುರಾಳಿಗಳ ವಿರುದ್ಧ ಮತ್ತು ಸರಕಾರವನ್ನು ಉರುಳಿಸಲು ರಾಜಕೀಯ ಸಾಧನಗಳಾಗಿ ಬಳಸಿದರೆ ರಾಜ್ಯಪಾಲರ ಹುದ್ದೆಯು ನಿಜಕ್ಕೂ ಅಗತ್ಯವಿದೆಯೇ ಎಂದು ನಾವು ಯೋಚಿಸುವ ಅಗತ್ಯವಿದೆ ’ಎಂದರು.
ಕಳೆದ ವರ್ಷದ ಜೂನ್ ನಲ್ಲಿ ತನ್ನ ವಿರುದ್ಧ ಬಂಡೆದಿದ್ದ ಶಿಂದೆ ಸೇರಿದಂತೆ 16 ಶಾಸಕರ ಅನರ್ಹತೆಯ ಕುರಿತು ಶೀಘ್ರ ನಿರ್ಧಾರವನ್ನು ಕೈಗೊಳ್ಳುವಂತೆ ಅವರು ಸ್ಪೀಕರ್ಗೆ ಆಗ್ರಹಿಸಿದರು.
ತನಗೆ ಮುಖ್ಯಮಂತ್ರಿ ಹುದ್ದೆಯು ಬೇಕಿರಲಿಲ್ಲ,ತಾನು ಜನರಿಗಾಗಿ ಹೋರಾಡಿದ್ದೆ ಎಂದು ಹೇಳಿದ ಠಾಕ್ರೆ,ತಾನು ರಾಜೀನಾಮೆ ನೀಡಿರದಿದ್ದರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ತನ್ನನ್ನು ಮರುಸ್ಥಾಪಿಸಬಹುದಿತ್ತು ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಆದರೆ ತಾನು ರಾಜೀನಾಮೆ ನೀಡುವ ಮೂಲಕ ಯಾವುದೇ ತಪ್ಪನ್ನು ಮಾಡಿಲ್ಲ. ಅದು ಭಾವನಾತ್ಮಕ ನಿರ್ಧಾರವಾಗಿತ್ತು,ಅದು ಸರಿಯೋ ತಪ್ಪೋ ಎನ್ನುವುದು ತನಗೆ ಗೊತ್ತಿಲ್ಲ ಎಂದರು.
ಬಿಜೆಪಿಯಿಂದ ಕೈಗೊಂಬೆ ರಾಜ್ಯಪಾಲರ ನೇಮಕ: ಪವಾರ್
ಸರ್ವೋಚ್ಚ ನ್ಯಾಯಾಲಯದ ತೀರ್ಪು ರಾಜ್ಯಪಾಲರ ಪಾತ್ರವನ್ನು ಬಯಲಿಗೆಳೆದಿದೆ ಎಂದು ಹೇಳಿದ ಎನ್ಸಿಪಿ ಮುಖ್ಯಸ್ಥ, ರಾಜ್ಯಪಾಲರನ್ನು ನೇಮಕಗೊಳಿಸುವಾಗ ಮುನ್ನೆಚ್ಚರಿಕೆಗಳನ್ನು ವಹಿಸಿರಲಿಲ್ಲ, ಇದೇ ಕಾರಣಕ್ಕೆ ಸರ್ವೋಚ್ಚ ನ್ಯಾಯಾಲಯವು ಅವರನ್ನು ಕಟುವಾಗಿ ಟೀಕಿಸಿದೆ ಎಂದರು.
‘ಬಿಜೆಪಿ ನೇತೃತ್ವದ ಸರಕಾರವು ತನ್ನ ಸಿದ್ಧಾಂತವನ್ನು ಅನುಸರಿಸುವ ಜನರನ್ನು ಉನ್ನತ ಹುದ್ದೆಗಳಿಗೆ ನೇಮಕಗೊಳಿಸಲು ಬಯಸುತ್ತದೆ, ಆದರೆ ಇಲ್ಲಿ ಅವರ ಸಾಮರ್ಥ್ಯವನ್ನು ಪರಿಶೀಲಿಸಲಾಗುವುದಿಲ್ಲ ಮತ್ತು ಇಂದು ಅದರ ಫಲಿತಾಂಶವನ್ನು ನಾವು ನೋಡುತ್ತಿದ್ದೇವೆ. ರಾಜ್ಯಪಾಲದ ಹುದ್ದೆ ಮತ್ತು ಇತರ ಕೇಂದ್ರ ಸರಕಾರಿ ಕಚೇರಿಗಳನ್ನು ಅಧಿಕಾರಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ’ಎಂದರು.