ಜಲಂಧರ್ ಕ್ಷೇತ್ರವನ್ನು ಬೃಹತ್ ಅಂತರದಿಂದ ಗೆದ್ದ ಆಪ್
ಚಂಡೀಗಢ, ಮೇ 13: 24 ವರ್ಷಗಳಿಂದ ಕಾಂಗ್ರೆಸ್ ನ ತೆಕ್ಕೆಯಲ್ಲಿದ್ದ ಜಲಂಧರ್ ಲೋಕಸಭಾ ಕ್ಷೇತ್ರವನ್ನು ಆಮ್ ಆದ್ಮಿ ಪಕ್ಷ (ಆಪ್)ವು ಶನಿವಾರ 58,000ಕ್ಕೂ ಅಧಿಕ ಮತಗಳಿಂದ ಗೆದ್ದಿದೆ. ಚತುಷ್ಕೋನ ಸ್ಪರ್ಧೆಯಲ್ಲಿ, ಹಿಂದಿನ ವಿಧಾನಸಭೆಯಲ್ಲಿ ಜಲಂಧರ್ ಪಶ್ಚಿಮ ಕ್ಷೇತ್ರದ ಶಾಸಕರಾಗಿದ್ದ ಸುಶೀಲ್ ಕುಮಾರ್ ರಿಂಕು ತನ್ನ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಕರಮ್ಜಿತ್ ಕೌರ್ರನ್ನು ಸೋಲಿಸಿದರು.
ರಿಂಕು ಈ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಆಪ್ ಸೇರಿದ್ದರು. ಕರಮ್ಜಿತ್ ಕೌರ್ರ ಪತಿ ಹಾಗೂ ಹಾಲಿ ಸಂಸದ ಸಂಟೋಖ್ ಚೌಧರಿ ಭಾರತ್ ಜೋಡೋ ಯಾತ್ರೆಯ ವೇಳೆ ಮೃತಪಟ್ಟ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಸಲಾಗಿತ್ತು. ಇದರೊಂದಿಗೆ ಆಪ್ ಲೋಕಸಭೆಗೆ ಮರುಪ್ರವೇಶ ಮಾಡುತ್ತಿದೆ. ಆಪ್ನ ಮೊದಲ ಲೋಕಸಭಾ ಸದಸ್ಯರಾಗಿದ್ದ ಭಗವಂತ್ ಸಿಂಗ್ ಮಾನ್, ಕಳೆದ ವರ್ಷ ಪಂಜಾಬ್ ವಿಧಾನಸಭಾ ಚುನಾವಣೆಯ ಬಳಿಕ ತನ್ನ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದ ಮುಖ್ಯಮಂತ್ರಿಯಾದರು. ಆದರೆ, ಉಪಚುನಾವಣೆಯಲ್ಲಿ ಅವರ ಸ್ಥಾನವನ್ನು ಉಳಿಸಿಕೊಳ್ಳಲು ಅವರ ಪಕ್ಷಕ್ಕೆ ಸಾಧ್ಯವಾಗಲಿಲ್ಲ.
ಆಪ್ 3,02,097 ಮತಗಳನ್ನು ಪಡೆದರೆ, ಕಾಂಗ್ರೆಸ್ 2,43,450 ಮತಗಳನ್ನು ಗಳಿಸಿದೆ. ಅಕಾಲಿ-ಬಿಎಸ್ಪಿ ಮಿತ್ರಕೂಟವು 1,58,354 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರೆ, ಬಿಜೆಪಿಯು 1,34,706 ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ.
‘‘ಅಭೂತಪೂರ್ವ’’ ಗೆಲುವು: ಕೇಜ್ರಿವಾಲ್
ಪಂಜಾಬ್ನಲ್ಲಿ ಭಗವಂತ್ ಮಾನ್ ಸರಕಾರ ಮಾಡುತ್ತಿರುವ ಉತ್ತಮ ಕೆಲಸಗಳಿಂದಾಗಿ ಈ ‘‘ಅಭೂತಪೂರ್ವ ಗೆಲುವು’’ ಸಾಧ್ಯವಾಯಿತು ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ‘‘ನಾವು ಅಭಿವೃದ್ಧಿಯ ರಾಜಕಾರಣ ಮಾಡುತ್ತೇವೆ ಹಾಗೂ ನಮ್ಮ ಕೆಲಸಗಳ ಆಧಾರದಲ್ಲಿ ಜನರಿಂದ ಮತಗಳನ್ನು ಕೇಳುತ್ತೇವೆ. ಭಗವಂತ ಮಾನ್ ಸರಕಾರದ ಕೆಲಸವನ್ನು ಜನರು ಗುರುತಿಸಿದ್ದು, ‘ನಿಮ್ಮ ಜೊತೆ ನಾವಿದ್ದೇವೆ’ ಎಂಬ ಭರವಸೆಯನ್ನು ನೀಡಿದ್ದಾರೆ. ಇದು ದೊಡ್ಡ ಸಂದೇಶವಾಗಿದೆ’’ ಎಂದು ಅವರು ಹೇಳಿದರು.