ಜನತಾ ಜನಾರ್ದನನಿಗೆ ದೊರೆತ ಗೆಲುವು: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ, ಮೇ 13: ಕರ್ನಾಟಕ ವಿಧಾನಸಭಾಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಉತ್ಕೃಷ್ಟ ಪ್ರದರ್ಶನವು, ಜನತಾ ಜನಾರ್ದನನಿಗೆ ದೊರೆತ ವಿಜಯವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಬಿಜೆಪಿಯ ದುರಾಡಳಿತದ ವಿರುದ್ಧ ಆಕ್ರೋಶಗೊಂಡು ಜನತೆ ಮತ ಚಲಾಯಿಸಿದ್ದಾರೆ ಎಂದವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ವಿಧಾನಸಭೆಯ ಎಲ್ಲಾ ನೂತನ ಚುನಾಯಿತ ಶಾಸಕರು ಶನಿವಾರ ಸಂಜೆಯೊಳಗೆ ಬೆಂಗಳೂರಿಗೆ ತಲುಪುವಂತೆ ಸೂಚಿಸಲಾಗಿದೆ. ಅವರ ಆಗಮನದ ಬಳಿಕ ಅವರಿಗೆ ಮುಂದಿನ ಸೂಚನೆಗಳನ್ನು ನೀಡಲಾಗುವುದು. ತರುವಾಯ ಹೈಕಮಾಂಡ್ ವೀಕ್ಷಕರನ್ನು ಕಳುಹಿಸಲಿದ್ದು, ಸರಕಾರ ರಚನೆಯ ಪ್ರಕ್ರಿಯೆಯು ನಡೆಯಲಿದೆ’’ ಎಂದು ಹೇಳಿದ್ದಾರೆ.
‘‘ಜನತೆ ತಾವಾಗಿಯೇ ಎಚ್ಚೆತ್ತುಕೊಂಡು, ನಮ್ಮನ್ನು ಬೆಂಬಲಿಸಿದ್ದಾರೆ. ದುರಾಡಳಿತದ ವಿರುದ್ಧ ಆಕ್ರೋಶಗೊಂಡು ಅವರು ಮತಹಾಕಿದ್ದಾರೆ. ಕರ್ನಾಟಕದ ಮತದಾರರು ಜಾಗೃತರಾಗಿದ್ದಾರೆಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರದ ಡಜನ್ಗಟ್ಟಲೆ ಸಚಿವರು, ಇತರ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಮೊಕ್ಕಾಂ ಹೂಡಿದ್ದ ಹೊರತಾಗಿಯೂ, ಜನಬಲ, ಹಣಬಲ ಹಾಗೂ ತೋಳ್ಬಲ ವ್ಯಾಪಕ ಬಳಕೆಯಾಗಿರುವ ಹೊರತಾಗಿಯೂ ಜನರು ಒಗ್ಗಟ್ಟಿನಿಂದ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ’’ ಎಂದವರು ತಿಳಿಸಿದರು.
ವಿಜೇತ ಕಾಂಗ್ರೆಸ್ ಅಭ್ಯರ್ಥಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ ಅವರು, ಉತ್ತಮ ಕೆಲಸಕ್ಕೆ ಜನತೆ ಬೆಂಬಲ ನೀಡಿದ್ದಾರೆ. ಸೋಲಲಿ, ಇಲ್ಲವೇ ಗೆಲ್ಲಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಜನತೆಯ ಜೊತೆಗಿರಬೇಕು ಹಾಗೂ ಅವರಿಗಾಗಿ ಕೆಲಸ ಮಾಡಬೇಕು ಎಂದು ಖರ್ಗೆ ಕಿವಿಮಾತು ಹೇಳಿದರು.
ಪಕ್ಷದ ಯಶಸ್ಸಿಗಾಗಿ ಕಾಂಗ್ರೆಸ್ನ ರಾಜ್ಯ ನಾಯಕತ್ವ,ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಖರ್ಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ‘‘ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ ಫಲವಾಗಿ ನಮಗೆ ಈ ಫಲಿತಾಂಶಗಳು ದೊರೆತಿವೆ. ಜನರು ಕೂಡಾ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಪ್ರಣಾಳಿಕೆಯಲ್ಲಿ ನಾವು ನೀಡಿರುವ ಖಾತರಿಗಳು ಕೂಡಾ ಫಲನೀಡಿದ್ದು, ಬಡವರು ಹಾಗೂ ದಮನಿತರು ನಮ್ಮ ಪರವಾಗಿ ಮತಚಲಾಯಿಸಿದ್ದಾರೆ ಎಂದರು.
ಐತಿಹಾಸಿಕ ತೀರ್ಪಿಗಾಗಿ ಕರ್ನಾಟಕದ ಜನತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಿಮಗೆ ಸಂಬಂಧಿಸಿದ ವಿಷಯಗಳ ಗೆಲುವು ಹಾಗೂ ಕರ್ನಾಟಕದ ಅಭಿವೃದ್ದಿಗೆ ಆದ್ಯತೆ ನೀಡುವ ಕುರಿತಾದ ಗೆಲುವು ಇದಾಗಿದೆ. ಭಾರತವನ್ನು ಒಗ್ಗೂಡಿಸುವ ರಾಜಕೀಯದ ವಿಜಯವಿದು. ಕಾಂಗ್ರೆಸ್ ಪಕ್ಷದ ಗೆಲುವುಗಾಗಿ ಶ್ರಮವಹಿಸಿದ ಕಾರ್ಯಕರ್ತರು ಹಾಗೂ ನಾಯಕರನ್ನು ನಾನು ಅಭಿನಂದಿಸುತ್ತೇನೆ. ನಿಮ್ಮ ಪರಿಶ್ರಮವು ಉತ್ತಮ ಫಲಿತಾಂಶ ತಂದುಕೊಟ್ಟಿದೆ. ರಾಜ್ಯದ ಜನತೆಗೆ ನೀಡಿರುವ ಭರವಸೆಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಪಕ್ಷವು ಅವಿಶ್ರಾಂತವಾಗಿ ಶ್ರಮಿಸಲಿದೆ. ಜೈ ಕರ್ನಾಟಕ, ಜೈ ಕಾಂಗ್ರೆಸ್.
- ಪ್ರಿಯಾಂಕ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಬದಲಾವಣೆಯ ಪರವಾಗಿ ನಿರ್ಣಾಯಕ ತೀರ್ಪನ್ನು ನೀಡಿದ ಕರ್ನಾಟಕದ ಜನತೆಗೆ ನನ್ನ ನಮನಗಳು. ಕ್ರೂರವಾದ ಸರ್ವಾಧಿಕಾರ ಹಾಗೂ ಬಹುಸಂಖ್ಯಾತವಾದಿ ರಾಜಕೀಯವು ಮಾಯವಾಗಿ ಹೋಗಿದೆ. ಜನತೆ ಬಹುತ್ವವಾದ ಹಾಗೂ ಪ್ರಜಾತಾಂತ್ರಿಕ ಶಕ್ತಿಗಳು ಗೆಲ್ಲಬೇಕೆಂದು ಬಯಸಿದಾಗ, ಅವರ ಆಶಯವನ್ನು ಹತ್ತಿಕ್ಕುವುದಕ್ಕಾಗಿ ಅವರ ಮೇಲೆ ಪ್ರಾಬಲ್ಯ ಸ್ಥಾಪಿಸುವ ಕೇಂದ್ರದ ಸಂಚು ಸಫಲವಾಗದು. ಇದು ಈ ಕಥೆಯ ನೀತಿಯಾಗಿದೆ, ನಾಳೆಗೊಂದು ಪಾಠ.
- ಮಮತಾ ಬ್ಯಾನರ್ಜಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ