ಜಯನಗರ ಮತ ಎಣಿಕೆ ಕೇಂದ್ರದಲ್ಲಿ ತೇಜಸ್ವಿ ಸೂರ್ಯ ಉಪಸ್ಥಿತಿ!; ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಸಾಧಿಸಿದ್ದರೂ, ತನ್ನಲ್ಲಿದ್ದ ಬೆಂಗಳೂರಿನ ಜಯನಗರ ಕ್ಷೇತ್ರವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಹಾಗೂ ಬಿಜೆಪಿ ಅಭ್ಯರ್ಥಿ ಸಿಕೆ ರಾಮಮೂರ್ತಿ ಅವರ ನಡುವಿನ ತೀವ್ರ ಪೈಪೋಟಿಯಲ್ಲಿ ಬಿಜೆಪಿ ಅಭ್ಯರ್ಥಿ 16 ಮತಗಳಿಂದ ಗೆಲುವು ಸಾಧಿಸಿದ್ದಾರೆಂದು ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ. ಆರಂಭದಲ್ಲಿ ಸೌಮ್ಯಾ ರೆಡ್ಡಿ ಗೆದ್ದಿದ್ದಾರೆ ಎನ್ನಲಾಗಿದ್ದರಿಂದ ಇದು ಗೊಂದಲದ ಗೂಡಾಗಿದೆ.
ಗೆಲುವಿನ ಸಂಭ್ರಮದಲ್ಲಿದ್ದರೂ ಕಾಂಗ್ರೆಸ್ ನಾಯಕರು ಮತ ಎಣಿಕೆ ಕೇಂದ್ರಕ್ಕೆ ದೌಡಾಯಿಸಿದ್ದರು. ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಸ್ಥಳಕ್ಕಾಗಮಿಸಿ ಅಧಿಕಾರಿಗಳನ್ನು ಹಾಗೂ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ. ಅನಿರೀಕ್ಷಿತ ಸೋಲಿನಿಂದ ಕಂಗೆಟ್ಟ ಸೌಮ್ಯಾರೆಡ್ಡಿ ಅವರು ಕಣ್ಣೀರು ಹಾಕಿದ್ದು, ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಮತ ಎಣಿಕೆ ಕೇಂದ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಕಾಣಿಸಿಕೊಂಡಿರುವುದರಿಂದ ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪಗಳೂ ನಡೆದಿದೆ. ಕಾಂಗ್ರೆಸ್ ಅಕ್ರಮ ಮಾಡಲು ಪ್ರಯತ್ನಿಸಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದರೆ, ಬಿಜೆಪಿ ನಾಯಕರು ಹಸ್ತಕ್ಷೇಪ ಮಾಡಿ ಫಲಿತಾಂಶ ತಿರುಚ್ಚಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಪ್ರತ್ಯಾರೋಪ ಮಾಡಿದ್ದಾರೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಚುನಾವಣಾ ಆಯೋಗದ ವೀಕ್ಷಕ ಸಮೀರ್ ವರ್ಮಾ ಅವರು ಒಟ್ಟಿಗೆ ಕೂತಿರುವ ಚಿತ್ರವು ವೈರಲ್ ಆಗಿರುವುದರಿಂದ ಕಾಂಗ್ರೆಸ್ ತನ್ನ ಸಂಶಯವನ್ನು ವ್ಯಕ್ತಪಡಿಸಿದೆ.
ಮತ ಎಣಿಕೆಯ ದಿನದಂದು ಮಧ್ಯಾಹ್ನ ಸುಮಾರು ಎರಡು ಗಂಟೆ ಹೊತ್ತಿಗೆ 16 ಸುತ್ತುಗಳ ಮತ ಎಣಿಕೆಯ ಬಳಿಕ ಸೌಮ್ಯಾ ರೆಡ್ಡಿ ಅವರು 294 ಮತಗಳ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ ಎಂಬ ಸುದ್ದಿಯು ಹಬ್ಬಿತ್ತು. ಗೆಲುವಿನ ಅಂತರ ಅಂಚೆ ಮತಗಳಿಗಿಂತ ಕಡಿಮೆ ಇದ್ದುದರಿಂದ ಮರು ಎಣಿಕೆ ಕಡ್ಡಾಯವಾಗಿತ್ತು. ಈ ವೇಳೆ ಮೊದಲಿಗೆ ತಿರಸ್ಕೃತಗೊಳಿಸಿದ್ದ 200 ಅಂಚೆ ಮತಗಳನ್ನು ಸಿಂಧುಗೊಳಿಸಿದ್ದರಿಂದ ಬಿಜೆಪಿ ಅಭ್ಯರ್ಥಿ 16 ಮತಗಳ ಮುನ್ನಡೆಯನ್ನ ಸಾಧಿಸಿದರು. ಇವಿಎಂ ಮತ್ತು ಅಂಚೆ ಮತಗಳನ್ನು ಪರಿಶೀಲಿಸಿ, ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರು 16 ಮತಗಳಿಂದ ಜಯ ಗಳಿಸಿದ್ದಾರೆಂದು ಅಧಿಕಾರಿಗಳು ಘೋಷಿಸಿದರು.
ಸಂಜೆ 7 ಗಂಟೆ ಸುಮಾರಿಗೆ ಮತ ಎಣಿಕೆ ಕೇಂದ್ರದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಆರ್ ಅಶೋಕ ಅವರಿದ್ದ ವಿಡಿಯೋಗಳು ಹೊರಬಿದ್ದವು. ಚುನಾವಣಾ ವೀಕ್ಷಕರು ತೇಜಸ್ವಿ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಆರೋಪಿಸಿದ ಕಾಂಗ್ರೆಸ್ ಮತ ಎಣಿಕೆ ಕೇಂದ್ರದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿದೆ.
ಈ ವೇಳೆಗಾಗುವಾಗಲೇ ನೂರಾರು ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಎಣಿಕೆ ಕೇಂದ್ರದ ಸುತ್ತ ನೆರೆದಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು. ರಾತ್ರಿ 8:45 ರ ಸುಮಾರಿಗೆ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಸ್ಥಳಕ್ಕಾಗಮಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರನ್ನು ಗೇಟ್ನ ಹೊರಗೆ ನಿಲ್ಲಿಸಿದರೆ, ಡಿ.ಕೆ.ಸುರೇಶ್ ಗೇಟ್ ಬಳಿ ಬಂದು ಅಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮತ ಎಣಿಕೆ ಕೇಂದ್ರದ ಗೇಟ್ಗಳನ್ನು ಅಲ್ಲಾಡಿಸಿ ಒಳಗೆ ಬಿಡುವಂತೆ ಒತ್ತಾಯಿಸಿದರು. ಇದರ ಬೆನ್ನಲ್ಲೇ ಗೇಟ್ನ ಹೊರಗೆ ಕುಳಿತು ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ಫಲಿತಾಂಶ ಪ್ರಕಟ ವಿಳಂಬದ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿದರು. ಈ ವೇಳೆ ಮತ ಎಣಿಕೆ ಕೇಂದ್ರದ ಒಳಗೆ ಅಭ್ಯರ್ಥಿಗಳಾದ ಸೌಮ್ಯ ರೆಡ್ಡಿ ಮತ್ತು ಸಿಕೆ ರಾಮಮೂರ್ತಿ ಅವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.
ಸುಮಾರು ಮೂರು ಗಂಟೆಗಳ ನಂತರ, ಮಧ್ಯರಾತ್ರಿಯ ಸುಮಾರಿಗೆ, ಸಿಕೆ ರಾಮಮೂರ್ತಿ ಮತ ಎಣಿಕೆ ಕೇಂದ್ರದ ಒಳಗಿನಿಂದ ಹೊರಬಂದು ತಮ್ಮ ಬೆಂಬಲಿಗರತ್ತ ಕೈ ಬೀಸಿದರು. ರಾಮಮೂರ್ತಿ ಅವರು 16 ಮತಗಳಿಂದ ವಿಜಯಿ ಎಂದು ಅಧಿಕೃತ ಘೋಷಣೆ ಬಂದಿತು. ಕಾಂಗ್ರೆಸ್ ಬೆಂಬಲಿಗರು ನಿರ್ಧಾರದ ವಿರುದ್ಧ ಪ್ರತಿಭಟಿಸಿದ್ದು, ಬಿಜೆಪಿ ಬೆಂಬಲಿಗರಿಂದ ಸಂಭ್ರಮಾಚರಣೆ ನಡೆಯಿತು.
ಮೊದಲ ಕಡ್ಡಾಯ ಮರುಎಣಿಕೆ ನಂತರವೂ ರಾಮಮೂರ್ತಿಗಿಂತ ಸೌಮ್ಯ ಅವರಿಗೆ ಹೆಚ್ಚು ಮತಗಳಿದ್ದವು ಎಂಬುದು ಕಾಂಗ್ರೆಸ್ನ ಪ್ರಮುಖ ಆರೋಪ. ಈ ವೇಳೆ ಚುನಾವಣಾ ಆಯೋಗದ ವೀಕ್ಷಕರು ಹೊರಗಡೆ ಹೋಗಿ ಮತ್ತೆ ಹಿಂತಿರುಗಿ ಬಂದು, ಮೊದಲ ಮರು ಎಣಿಕೆಯಲ್ಲಿ ತಿರಸ್ಕೃತಗೊಂಡ ಸುಮಾರು 200 ಗೆಜೆಟೆಡ್ ಅಲ್ಲದ ಅಂಚೆ ಮತಗಳನ್ನು ಮತ್ತೊಮ್ಮೆ ಎಣಿಕೆ ಮಾಡಿಸಿದ್ದಾರೆ ಕಾಂಗ್ರೆಸ್ ಆರೋಪಿಸಿದೆ. ಮರು ಎಣಿಕೆ ನಡೆದ ಬಳಿಕ ಸೌಮ್ಯಾ 16 ಮತಗಳಿಂದ ಹಿನ್ನಡೆಯಲ್ಲಿದ್ದರು. ನಂತರ ಮರು ಮತ ಎಣಿಕೆ ಕೇಳಿದಾಗ ಮತ್ತೆ ರಾಮಮೂರ್ತಿ 16 ಮತಗಳಿಂದ ಮುಂದಿದ್ದರು.
ಸರಿಯಾದ ಸ್ವರೂಪದಲ್ಲಿ ಇಲ್ಲದ ಅಂಚೆ ಮತಗಳು ಬಿಜೆಪಿಗೆ ಸೇರ್ಪಡೆಯಾಗಿದ್ದು, ಕಾಂಗ್ರೆಸ್ಗೆ ಅಂತಹ ಅಂಚೆ ಮತಗಳು ಸೇರ್ಪಡೆಯಾಗದ ಕಾರಣ ರಾಮಮೂರ್ತಿ ಅವರು ಈ ಮುನ್ನಡೆ ಸಾಧಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಚುನಾವಣಾ ಆಯೋಗದ ಸೂಚನೆಗಳ ಪ್ರಕಾರ, ಅಂತಹ ಮರು-ಪರಿಶೀಲನೆ/ಮರು ಎಣಿಕೆ ಮಾಡಿದಾಗಲೆಲ್ಲಾ, ಮತದಾನದ ಗೌಪ್ಯತೆಗೆ ಧಕ್ಕೆಯಾಗದಂತೆ ಸಂಪೂರ್ಣ ಕಾರ್ಯವಿಧಾನವನ್ನು ವೀಡಿಯೊಗ್ರಾಫ್ ಮಾಡಬೇಕು ಮತ್ತು ಭವಿಷ್ಯಕ್ಕಾಗಿ ವೀಡಿಯೊ ಕ್ಯಾಸೆಟ್/ಸಿಡಿಯನ್ನು ಪ್ರತ್ಯೇಕ ಲಕೋಟೆಯಲ್ಲಿ ಸೀಲ್ ಮಾಡಿಡಬೇಕು.
ಈ ನಡುವೆ ಕಾಂಗ್ರೆಸ್ನ ಒತ್ತಾಯದ ಮೇರೆಗೆ ಮರು ಮತ ಎಣಿಕೆ ನಡೆಸಲಾಗಿದೆ ಎಂದು ಬಿಜೆಪಿ ಹೇಳಿದ್ದು, ಕಾಂಗ್ರೆಸ್ ನಾಯಕರು ಮತ ಎಣಿಕೆ ಕೇಂದ್ರಕ್ಕೆ ನುಗ್ಗಿದ್ದಾರೆ ಎಂದು ಆರೋಪಿಸಿದೆ.
ಎಣಿಕೆ ಕೇಂದ್ರದಲ್ಲಿ ತೇಜಸ್ವಿ ಸೂರ್ಯಗೆ ಏನು ಕೆಲಸ?
ಬಿಟಿಎಂ ಲೇಔಟ್ ಕ್ಷೇತ್ರದಿಂದ ಗೆದ್ದಿರುವ ಸೌಮ್ಯಾ ಅವರ ತಂದೆ ರಾಮಲಿಂಗಾರೆಡ್ಡಿ ಅವರು ಸಂಜೆ 5.30 ರ ಸುಮಾರಿಗೆ ಮತ ಎಣಿಕೆ ಕೇಂದ್ರದಲ್ಲಿ ಏಕೆ ಇದ್ದರು ಎಂದು ಬಿಜೆಪಿ ಕೇಳಿದೆ. ಪ್ರಮಾಣಪತ್ರ ಪಡೆಯಲು ಕೇಂದ್ರಕ್ಕೆ ಬಂದಿದ್ದೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬಿಟಿಎಂ ಲೇಔಟ್ ಮತ್ತು ಪದ್ಮನಾಭನಗರ ಕ್ಷೇತ್ರಗಳ ಮತ ಎಣಿಕೆಗೆ ಇದೇ ಎಣಿಕೆ ಕೇಂದ್ರ ಬಳಸಿಕೊಂಡಿರುವುದು ಇಲ್ಲಿ ಗಮನಿಸಬೇಕಾದ ಅಂಶ. ಹಾಗಾಗಿ, ತಾಂತ್ರಿಕವಾಗಿ ಪದ್ಮನಾಭನಗರದಿಂದ ಗೆದ್ದ ಆರ್.ಅಶೋಕ, ಬಿಟಿಎಂ ಲೇಔಟ್ನಿಂದ ಗೆದ್ದಿರುವ ರಾಮಲಿಂಗಾರೆಡ್ಡಿ, ಜಯನಗರದಿಂದ ಸ್ಪರ್ಧಿಸಿದ್ದ ಸಿ.ಕೆ.ರಾಮಮೂರ್ತಿ ಮತ್ತು ಸೌಮ್ಯಾರೆಡ್ಡಿ ಮತ ಎಣಿಕೆ ಕೇಂದ್ರದಲ್ಲಿ ಉಪಸ್ಥಿತರಿರಬಹುದು. ಆದರೆ, ಸಂಸದ ತೇಜಸ್ವಿ ಸೂರ್ಯ ಮತಕೇಂದ್ರದೊಳಗೆ ಏಕೆ ಬಂದಿದ್ದರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮತ ಎಣಿಕೆ ಕೇಂದ್ರದ ದೃಶ್ಯಗಳು ತೇಜಸ್ವಿ ಸೂರ್ಯ ಅಲ್ಲಿ ಓಡಾಡುತ್ತಿರುವುದು, ಫೋನ್ನಲ್ಲಿ ಮಾತನಾಡುತ್ತಿರುವುದನ್ನು ತೋರಿಸಿದೆ. ಮತ್ತೊಂದು ದೃಶ್ಯದಲ್ಲಿ, ಎರಡನೇ ಮಹಡಿಯಲ್ಲಿ ಆರ್ ಅಶೋಕ ಮತ್ತು ಸಿಕೆ ರಾಮಮೂರ್ತಿ ಅವರೊಂದಿಗೆ ತೇಜಸ್ವಿ ಸೂರ್ಯ ಮತ ಎಣಿಕೆ ಕೇಂದ್ರದ ಹೊರಗೆ ಕುಳಿತಿರುವುದು ಕಂಡುಬಂದಿದೆ.







