ಕರ್ನಾಟಕದ ಫಲಿತಾಂಶದ ಮಾದರಿಯನ್ನು ಇತರ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಬೇಕಿದೆ: ಶರದ್ ಪವಾರ್
ಮುಂಬೈ: ಕರ್ನಾಟಕ ಫಲಿತಾಂಶದ ಮಾದರಿಯನ್ನು ಇತರ ರಾಜ್ಯಗಳಲ್ಲೂ ಜಾರಿಗೊಳಿಸಬೇಕಿದ್ದು, ಅದಕ್ಕಾಗಿ ಸಮಾನ ಮನಸ್ಕ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಕೆಲಸ ಮಾಡಬೇಕಿದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕರೆ ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ.
ಇದಕ್ಕೂ ಮುನ್ನ ರವಿವಾರ ಸಿಪಿಐ ನಾಯಕ ಡಿ.ರಾಜಾ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಅವರ ಮುಂಬೈ ನಿವಾಸದಲ್ಲಿ ಭೇಟಿ ಮಾಡಿ, ಬಿಜೆಪಿಗೆ ಪರ್ಯಾಯ ರೂಪಿಸುವ ಕುರಿತು ಮಾತುಕತೆ ನಡೆಸಿದರು. ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿರುವ ಬೆನ್ನಿಗೇ ಈ ಭೇಟಿ ನಡೆದಿದೆ.
ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್, "ಕರ್ನಾಟಕ ವಿಧಾನಸಭಾ ಚುನಾವಣೆಯು ಒಂದು ಸಂದೇಶ ನೀಡಿದೆ. ಇತರ ರಾಜ್ಯಗಳಲ್ಲಿ ಸಮಾನ ಮನಸ್ಕ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಕೆಲಸ ಮಾಡಬೇಕಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಾವು ಕರ್ನಾಟಕದಂಥ ಕಾರ್ಯಸೂಚಿ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಂಥ ಎರಡೂ ನೆಲೆಯಲ್ಲಿ ಕೆಲಸ ಮಾಡಲಿದ್ದು, ನಾವು ಈ ಪ್ರಕ್ರಿಯೆಯನ್ನು ಶುರು ಮಾಡಲಿದ್ದೇವೆ ಎಂದೂ ತಿಳಿಸಿದ್ದಾರೆ.
ಸಿಪಿಐ ಪಕ್ಷದ ನಾಯಕ ಡಿ.ರಾಜಾ, ಬಿಜೆಪಿಯನ್ನು ಮಣಿಸಲು ಅಗತ್ಯವಿರುವ ಸಮಾನ ಮನಸ್ಕತೆ ಕುರಿತು ಮಾತನಾಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 224 ಸ್ಥಾನಗಳ ಪೈಕಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ 135 ಸ್ಥಾನ, ಆಡಳಿತಾರೂಢ ಪಕ್ಷ ಬಿಜೆಪಿ 66 ಸ್ಥಾನ, ಜೆಡಿಎಸ್ 19 ಸ್ಥಾನ ಹಾಗೂ ಸ್ವತಂತ್ರ ಅಭ್ಯರ್ಥಿಗಳು 4 ಸ್ಥಾನಗಳಲ್ಲಿ ವಿಜಯಿಯಾಗಿದ್ದಾರೆ.