ಯಡಿಯೂರಪ್ಪರ ಕಣ್ಣೀರಿನಲ್ಲಿ ಬಿಜೆಪಿ ಸರಕಾರ ಕೊಚ್ಚಿ ಹೋಗಿದೆ...: ದಿಂಗಾಲೇಶ್ವರ ಸ್ವಾಮೀಜಿ
''ಬ್ರಾಹ್ಮಣ ವಿಚಾರವಾಗಿ ನಾನು 6 ತಿಂಗಳ ನಂತರ ಸುದ್ದಿಗೋಷ್ಠಿ ಮಾಡುತ್ತೇನೆ'' ► ಲಿಂಗಾಯತ ನಾಯಕನಿಗೆ ಡಿಸಿಎಂ ಸ್ಥಾನ ನೀಡುವಂತೆ ಸ್ವಾಮೀಜಿ ಆಗ್ರಹ

ಹುಬ್ಬಳ್ಳಿ: 'ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಣ್ಣೀರಿನಲ್ಲಿ ಬಿಜೆಪಿ ಸರ್ಕಾರ ಕೊಚ್ಚಿ ಹೋಗತ್ತೆ ಅಂತ ನಾನು ಈ ಹಿಂದೆ ಹೇಳಿದ್ದೆ. ಈಗ ಆ ಪಕ್ಷದ ನಾಯಕರಿಗೆ ಇದು ಅರಿವಾಗಿದೆ' ಎಂದು ಶಿರಹಟ್ಟಿಯ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಅಂದು ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಮಾತಾಡಿರಲಿಲ್ಲ. ಯಡಿಯೂರಪ್ಪ ಎಲ್ಲರಿಗೂ ಬೇಕಾದ ನಾಯಕರು. ಅವತ್ತು ಎಲ್ಲಾ ಸಮಾಜದ ನಾಯಕರು ಯಡಿಯೂರಪ್ಪರನ್ನು ಮುಂದುವರಿಸಿಬೇಕು ಎಂದಿದ್ದರು. ಬಿಜೆಪಿ ನಾಯಕರು ಯಾವದೋ ಕೆಟ್ಟ ಉದ್ದೇಶ, ಅಥವಾ ಸ್ವಾರ್ಥಕ್ಕೆ ತಗೆದುಕೊಂಡ ನಿರ್ಣಯ ಇಂದಿನ ಹೀನಾಯ ಪರಸ್ಥಿಗೆ ಕಾರಣ' ಎಂದು ತಿಳಿಸಿದರು.
'ನಾನು ಈ ಹಿಂದೆ ಸರಕಾರದ ಶೇ.30 ಕಮಿಷನ್ ಬಗ್ಗೆ ಮಾತನಾಡಿದಾಗ, ನನ್ನ ವಿರುದ್ಧ ದುರಹಂಕಾರಿಯಾಗಿ ಮಾತನಾಡಿ, ಗೂಂಡಾ ವೃತ್ತಿಯಲ್ಲಿ ದಾಳಿ ಮಾಡಿದ್ದರು. ಅದರ ಪರಿಣಾಮವೇ ಈ ಹೀನಾಯ ಸೋಲು ಎಂದ ಸ್ವಾಮೀಜಿ, ಕೇಸರಿ ಪಡೆ ಎಂದು ಹೇಳಿ ಅಧಿಕಾರಕ್ಕೆ ಬಂದು ಖಾವಿಧಾರಿಗಳನ್ನ ಸರಿಯಾಗಿ ನಡೆಸುಕೊಳ್ಳಲಿಲ್ಲ. ಖಾವಿ ದಾರಿಗಳು ಪಾಠ ಮಾಡಿದ್ದರೂ, ಅವರು ಪಾಠ ಕಲಿಯಲಿಲ್ಲ. ರಾಜ್ಯದ ಹಿರಿಯ ನಾಯಕರನ್ನು ಕಡೆಗಣಿಸಿದ್ದೇ ಇಂದಿನ ಸ್ಥಿತಿಗೆ ಕಾರಣ' ಎಂದರು.
'ಯಡಿಯೂರಪ್ಪ, ಸವದಿ,ಶೆಟ್ಟರ್, ಈಶ್ವರಪ್ಪ ಕಡೆಗಣಸಿರೋದೆ ಇದಕ್ಕೆಲ್ಲ ಕಾರಣ. ಪಕ್ಷ ಕಟ್ಟದ ವ್ಯಕ್ತಿ ಮಾತ ಕೇಳಬೇಕು ಅಂದ್ರೆ ಏನು?' ಎಂದು ಪರೋಕ್ಷವಾಗಿ ಬಿಎಲ್ ಸಂತೋಷ್ ವಿರುದ್ದ ಆಕ್ರೋಶ ಹೊರ ಹಾಕಿದರು.
ಇನ್ನು ಜಗದೀಶ್ ಶೆಟ್ಟರ್, ಸವದಿಯನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಇದೇ ವೇಳೆ ಸ್ವಾಮೀಜಿಗಳು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದರು.
''ಆರು ತಿಂಗಳ ನಂತರ ಸುದ್ದಿಗೋಷ್ಠಿ ಮಾಡುತ್ತೇನೆ''
'ಬ್ರಾಹ್ಮಣ ವಿಚಾರವಾಗಿ ನಾನು ಆರು ತಿಂಗಳ ನಂತರ ಸುದ್ದಿಗೋಷ್ಠಿ ಮಾಡುತ್ತೇನೆ. ರಾಜ್ಯದಲ್ಲಿ ಏನಾಗಿದೆ ಅನ್ನೋ ದಾಖಲೆ ಇವೆ. ಬ್ರಾಹ್ಮಣರ ಬಗ್ಗೆ ಮಾತಾಡೋಕೆ ನನಗೆ ಭಯ ಇಲ್ಲ, ನನಗೆ ಯಾರ ಅಂಕುಶವೂ ಇಲ್ಲ' ಎಂದು ಸ್ವಾಮೀಜಿಗಳು ತಿಳಿಸಿದರು.







