ಸಂವಿಧಾನದಲ್ಲಿ 370ನೇ ವಿಧಿ 'ತಾತ್ಕಾಲಿಕ' ಕಾಯ್ದೆಯಾಗಿತ್ತು: ಅಮಿತ್ ಶಾ
![ಸಂವಿಧಾನದಲ್ಲಿ 370ನೇ ವಿಧಿ ತಾತ್ಕಾಲಿಕ ಕಾಯ್ದೆಯಾಗಿತ್ತು: ಅಮಿತ್ ಶಾ ಸಂವಿಧಾನದಲ್ಲಿ 370ನೇ ವಿಧಿ ತಾತ್ಕಾಲಿಕ ಕಾಯ್ದೆಯಾಗಿತ್ತು: ಅಮಿತ್ ಶಾ](https://www.varthabharati.in/sites/default/files/images/articles/2023/05/15/377523-1684172374.jpeg)
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ, ಈಗ ರದ್ದಾಗಿರುವ 370ನೇ ವಿಧಿಯು ಆರಂಭದಿಂದಲೂ ತಾತ್ಕಾಲಿಕ ಅವಕಾಶವಾಗಿತ್ತು ಹಾಗೂ ಸಂವಿಧಾನ ರಚನೆಕಾರರು ಅದನ್ನು ಜಾಣ್ಮೆಯಿಂದ ಸೇರಿಸಿದ್ದರು ಎಂದು ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಶಾಸನ ಕರಡು ರಚನೆಯ ಕುರಿತು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಒಂದು ವೇಳೆ ಶಾಸನವನ್ನು ಉತ್ತಮವಾಗಿ ರೂಪಿಸಿದರೆ ಅದರ ಕುರಿತು ಯಾವುದೇ ನ್ಯಾಯಾಲಯವು ವಿವರಣೆ ನೀಡುವ ಅಗತ್ಯವೇ ಬೀಳುವುದಿಲ್ಲ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಒಂದು ವೇಳೆ ಕರಡು ರಚನೆಯು ಸ್ಪಷ್ಟ ಮತ್ತು ಪಾರದರ್ಶಕವಾಗಿದ್ದರೆ, ಅಧಿಕಾರಿಗಳು ಕನಿಷ್ಠ ತಪ್ಪು ಮಾಡುವಂತಾಗಿ, ಕಾನೂನಿನ ಕುರಿತು ಜನರಲ್ಲಿ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಅದೇ ಒಂದು ವೇಳೆ ಕರಡು ರಚನೆಯಲ್ಲಿ ಲೋಪಗಳಿದ್ದರೆ ಅವುಗಳ ವ್ಯಾಖ್ಯಾನವು ಅತಿಕ್ರಮಣಕ್ಕೆ ಒಳಗಾಗುತ್ತವೆ. ಒಂದು ವೇಳೆ ಕರಡು ರಚನೆಯು ಪರಿಪೂರ್ಣ ಹಾಗೂ ಸರಳವಾಗಿದ್ದರೆ ಅದರ ವ್ಯಾಖ್ಯಾನವೂ ಸ್ಪಷ್ಟವಾಗಿರುತ್ತದೆ ಎಂದು ಹೇಳಿದ್ದಾರೆ.
2019ರಲ್ಲಿ ಬಿಜೆಪಿ ಸರ್ಕಾರ ರದ್ದುಗೊಳಿಸಿದ್ದ 370ನೇ ವಿಧಿಯನ್ನು ಉಲ್ಲೇಖಿಸಿದ ಅಮಿತ್ ಶಾ, ಸಂವಿಧಾನದಲ್ಲಿ ಒದಗಿಸಲಾಗಿದ್ದ ಆ ಅವಕಾಶವು ಅಸ್ತಿತ್ವದಲ್ಲಿರಬಾರದು ಎಂದು ಇಡೀ ದೇಶ ಬಯಸಿತ್ತು ಎಂದು ಪ್ರತಿಪಾದಿಸಿದ್ದಾರೆ.