ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ‘ನಿರಂತರ ಉದ್ದೇಶಿತ ದಾಳಿ’: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ವರದಿ

ಹೊಸದಿಲ್ಲಿ: ಅಮೆರಿಕದ ವಿದೇಶಾಂಗ ಇಲಾಖೆಯು ಸೋಮವಾರ ಬಿಡುಗಡೆಗೊಳಿಸಿರುವ ವರದಿಯು ಮುಸ್ಲಿಮರು, ಕ್ರೈಸ್ತರು,ಸಿಕ್ಖರು, ಹಿಂದು ದಲಿತರು ಮತ್ತು ಮೂಲನಿವಾಸಿ ಸಮುದಾಯಗಳು ಸೇರಿದಂತೆ ಭಾರತದಲ್ಲಿಯ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ‘ನಿರಂತರ ಉದ್ದೇಶಿತ ದಾಳಿಗಳನ್ನು’ ಎತ್ತಿ ತೋರಿಸಿದೆ ಎಂದು scroll.in ವರದಿ ಮಾಡಿದೆ.
2022ನೇ ಸಾಲಿನ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತು ವರದಿಯು ಜೂ.22ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಒಂದು ತಿಂಗಳು ಮೊದಲು ಹೊರಬಿದ್ದಿದೆ. ವರದಿಯು ರಶ್ಯಾ ಮತ್ತು ಚೀನಾಗಳನ್ನೂ ಹೆಸರಿಸಿದೆ.
ಭಾರತದಲ್ಲಿಯ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಿತಿಯ ಕುರಿತು ವಿವರಗಳನ್ನು ಹಂಚಿಕೊಂಡ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೋರ್ವರು, ವರದಿಯಲ್ಲಿನ ಮುಖ್ಯಾಂಶಗಳನ್ನು ನೋಡಿ ತನಗೆ ನೋವುಂಟಾಗಿದೆ ಎಂದು ಹೇಳಿದರು.
ಯುಎಸ್ ಹಾಲೋಕಾಸ್ಟ್ ಮ್ಯೂಝಿಯಂ ಭಾರತದಲ್ಲಿಯ ಮಾನವ ಹಕ್ಕುಗಳ ಸ್ಥಿತಿಯ ಬಗ್ಗೆ ಗಣನೀಯ ಗಮನ ಸೆಳೆಯುವುದನ್ನು ಮುಂದುವರಿಸಿದೆ ಮತ್ತು ಭಾರತದಲ್ಲಿ ಸಂಭಾವ್ಯ ಸಾಮೂಹಿಕ ಹತ್ಯೆಗಳಿಗೆ ಸಂಬಂಧಿಸಿದಂತೆ ಅದನ್ನು ಅಗ್ರ ಕಳವಳಕಾರಿ ದೇಶಗಳ ಪಟ್ಟಿಯಲ್ಲಿ ಸೇರಿಸಿದೆ ಎಂದು ಅವರು ತಿಳಿಸಿದರು. ಯುಎಸ್ ಹಾಲೋಕಾಸ್ಟ್ ಮ್ಯೂಝಿಯಂ ದ್ವೇಷವನ್ನು ಎದುರಿಸಲು,ನರಮೇಧವನ್ನು ತಡೆಗಟ್ಟಲು ಮತ್ತು ಮಾನವ ಘನತೆಯನ್ನು ಉತ್ತೇಜಿಸಲು ವಿಶ್ವಾದ್ಯಂತ ನಾಗರಿಕರು ಮತ್ತು ನಾಯಕರನ್ನು ಪ್ರೇರೇಪಿಸುತ್ತದೆ.
ಯುಎಸ್ ಹಾಲೋಕಾಸ್ಟ್ ಮ್ಯೂಝಿಯಂ ಈ ಮೊದಲು ಹೊರಡಿಸಿದ ಎಚ್ಚರಿಕೆಯಲ್ಲಿ ಸಾಮೂಹಿಕ ಹತ್ಯೆಗಳ ಅತ್ಯಂತ ಹೆಚ್ಚಿನ ಅಪಾಯಕ್ಕಾಗಿ 162 ದೇಶಗಳ ಪೈಕಿ ಭಾರತವು ಎಂಟನೇ ಸ್ಥಾನದಲ್ಲಿದೆ.
ವಿದೇಶಾಂಗ ಇಲಾಖೆಯು ತನ್ನ ವರದಿಯಲ್ಲಿ ಮುಸ್ಲಿಮರ ನರಮೇಧ, ಥಳಿಸಿ ಹತ್ಯೆ ಮತ್ತು ಹಿಂಸಾಚಾರಕ್ಕಾಗಿ ಬಹಿರಂಗ ಕರೆಗಳು ಸೇರಿದಂತೆ ಅಮಾನವೀಯ ದ್ವೇಷ ಭಾಷಣಗಳನ್ನು ಗಮನಿಸಿದೆ ಎಂದು ಅಧಿಕಾರಿ ಹೇಳಿದರು.
ವರದಿಯು ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು ಮತ್ತು ಮನೆಗಳ ನೆಲಸಮ ಕಾರ್ಯಾಚರಣೆಗಳು ಮತ್ತು ಕೆಲವು ಪ್ರಕರಣಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿಗಳನ್ನು ನಡೆಸುತ್ತಿರುವವರ ನಿರ್ಭಯತೆ ಮತ್ತು ಅವರಿಗೆ ಕ್ಷಮಾದಾನವನ್ನೂ ಪಟ್ಟಿ ಮಾಡಿದೆ.
ರಾಜ್ಯಮಟ್ಟದಲ್ಲಿ ಧಾರ್ಮಿಕ ಉಡುಪುಗಳ ಮೇಲೆ ಹೇರಲಾಗುತ್ತಿರುವ ನಿರ್ಬಂಧಗಳನ್ನೂ ಬೆಟ್ಟು ಮಾಡಿರುವ ವರದಿಯು,ಕರ್ನಾಟಕದ ಬಿಜೆಪಿ ಸರಕಾರವು 2022, ಫೆ.5ರಂದು ಶಾಲಾಕಾಲೇಜುಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದನ್ನು ಉಲ್ಲೇಖಿಸಿದೆ.
ಬಿಜೆಪಿಯ ಮಾಜಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರು ಟಿವಿಯಲ್ಲಿ ಪ್ರವಾದಿ ಮುಹಮ್ಮದ್ ಅವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಬಳಿಕ ದೇಶದ ಹಲವಾರು ಭಾಗಗಳು ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಅಗ್ನಿಸ್ಪರ್ಶಕ್ಕೆ ಸಾಕ್ಷಿಯಾಗಿದ್ದನ್ನೂ ವರದಿಯು ಉಲ್ಲೇಖಿಸಿದೆ. ವಿಶ್ವಸಂಸ್ಥೆ ಸೇರಿದಂತೆ ವ್ಯಾಪಕ ಖಂಡನೆಗಳ ಬಳಿಕ ಬಿಜೆಪಿ ಅವರಿಬ್ಬರನ್ನೂ ಉಚ್ಚಾಟಿಸಿತ್ತು.
ಗುಜರಾತಿನ ಖೇಡಾದಲ್ಲಿ ಅಕ್ಟೋಬರ್ 4ರಂದು ಮಸೀದಿಯೊಂದರ ಸಮೀಪದ ಗರ್ಭಾ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿ ಹಿಂದು ವ್ಯಕ್ತಿಗಳನ್ನು ಗಾಯಗೊಳಿಸಿದ್ದ ಆರೋಪದಲ್ಲಿ ನಾಲ್ವರು ಮುಸ್ಲಿಮ್ ಪುರುಷರನ್ನು ಮಫ್ತಿಯಲ್ಲಿದ್ದ ಪೊಲೀಸರು ಸಾರ್ವಜನಿಕವಾಗಿ ಥಳಿಸಿದ್ದು ಸೇರಿದಂತೆ 2022ರಲ್ಲಿ ಹಲವಾರು ರಾಜ್ಯಗಳಲ್ಲಿ ಕಾನೂನು ಜಾರಿ ಅಧಿಕಾರಿಗಳು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರಗಳನ್ನು ನಡೆಸಿರುವ ಬಹಳಷ್ಟು ವರದಿಗಳಿವೆ ಎಂದೂ ಧಾರ್ಮಿಕ ಸ್ವಾತಂತ್ರ್ಯ ಕುರಿತು ವರದಿಯು ಹೇಳಿದೆ.
ಭಾರತದಲ್ಲಿನ ಸ್ಥಿತಿಯ ಬಗ್ಗೆ ಮಾನವ ಹಕ್ಕುಗಳ ಸಂಘಟನೆಗಳು ಸೇರಿದಂತೆ ಅಂತರರಾಷ್ಟ್ರಿಯ ಸಮುದಾಯವು ನಿಗಾಯಿರಿಸಿದೆ ಎಂದೂ ವಿದೇಶಾಂಗ ಇಲಾಖೆಯ ಅಧಿಕಾರಿ ತಿಳಿಸಿದರು.
‘ಈ ಕಳವಳಗಳ ಕುರಿತು ಭಾರತದಲ್ಲಿಯ ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡುವುದನ್ನು ನಾವು ಮುಂದುವರಿಸುತ್ತೇವೆ ’ಎಂದರು.







