ಮಂಗಳೂರು: ಕೋಬ್ರಾ ದ್ವಿಚಕ್ರ ವಾಹನ ಹಸ್ತಾಂತರ

ಮಂಗಳೂರು, ಮೇ 16: ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದ ಒತ್ತಡ ನಿವಾರಣೆಗೆ ನಾಲ್ಕು ಕೋಬ್ರಾ ದ್ವಿಚಕ್ರ ವಾಹನಗಳನ್ನು ಸಂಚಾರ ಪೂರ್ವ ಮತ್ತು ಪಶ್ಚಿಮ ಠಾಣೆಗಳಿಗೆ ಮಂಗಳವಾರ ಹಸ್ತಾಂತರಿಸಲಾಯಿತು.
ಸಂಚಾರ ಪೊಲೀಸರಿಗೆ ಸಂಚಾರ ನಿರ್ವಹಣೆಯು ಸವಾಲಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ನಗರದಲ್ಲಿ ಸುಗಮ ಸಂಚಾರವನ್ನು ಜಾರಿ ಮಾಡಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿದರೂ ಕೂಡ ಸಂಚಾರ ಪೊಲೀಸರ ಇರುವಿಕೆಯು ಅನಿವಾರ್ಯವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಸಣ್ಣ ಪುಟ್ಟ ಅಪಘಾತ ಸಂಭವಿಸಿ ವಾಹನ ಸವಾರರು ಜಗಳವಾಡಿಕೊಂಡ ಸಂದರ್ಭ ವಾಹನಗಳನ್ನು ರಸ್ತೆಯ ಮಧ್ಯದಲ್ಲಿಯೇ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತಾರೆ. ಈ ವೇಳೆ ಆ ಸ್ಥಳಕ್ಕೆ ತುರ್ತಾಗಿ ಹೋಗಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹಕಾರಿಯಾಗುವಂತೆ 'ಕೋಬ್ರಾ' ದ್ವಿಚಕ್ರ ವಾಹನಗಳನ್ನು ಹಸ್ತಾಂತರಿಸಲಾಗಿದೆ.
'ಕೋಬ್ರಾ' ದ್ವಿಚಕ್ರ ವಾಹನಗಳನ್ನು ಠಾಣಾ ಸರಹದ್ದಿನಲ್ಲಿ ಉಪಯೋಗಿಸಿಕೊಂಡು ಸಂಚಾರ ಸುವ್ಯವಸ್ಥೆ ಮತ್ತು ರಸ್ತೆ ಅಪಘಾತಗಳನ್ನು ತಡೆಗಟ್ಟಲು ಹಾಗೂ ನೊಂದವರಿಗೆ ಸಹಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.





