ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶಕ್ಕೆ ಕಂಟಕ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಡಾ.ಪರಕಾಲ ಪ್ರಭಾಕರ್

ಬೆಂಗಳೂರು: ಮೋದಿ ಆಡಳಿತವು ಆರ್ಥಿಕತೆ ಮತ್ತು ಇತರ ಹಲವು ವಿಷಯಗಳ ನಿರ್ವಹಣೆಯಲ್ಲಿ ಅಸಮರ್ಥವಾಗಿದ್ದರೂ, ಜನರಲ್ಲಿ ಸುಪ್ತವಾಗಿರುವ ವಿಭಜಕ ಭಾವನೆಗಳನ್ನು ಹೊರ ತರಲು ಅದು ಅತ್ಯಂತ ಸಮರ್ಥವಾಗಿದೆ ಎಂದು ಅರ್ಥಶಾಸ್ತ್ರಜ್ಞ ಮತ್ತು ಸಾಮಾಜಿಕ ವಿಮರ್ಶಕ ಡಾ. ಪರಕಾಲ ಪ್ರಭಾಕರ್ ಅವರು thewire.in ಸುದ್ದಿ ಜಾಲತಾಣಕ್ಕಾಗಿ ಕರಣ್ ಥಾಪರ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಡಾ ಪ್ರಭಾಕರ್ ಅವರ ಹೊಸ ಪುಸ್ತಕ ‘The Crooked Timber of New India: Essays on A Republic in Crisis’ ರವಿವಾರ, ಮೇ 14 ರಂದು ಬೆಂಗಳೂರಿನಲ್ಲಿ ಔಪಚಾರಿಕವಾಗಿ ಬಿಡುಗಡೆಯಾಯಿತು. ಈ ಪುಸ್ತಕವು ಮೋದಿ ಸರ್ಕಾರದ ಆರ್ಥಿಕತೆ, ರಾಜಕೀಯ ಮತ್ತು ಇತರ ವಿಷಯಗಳ ಬಗ್ಗೆ ಪ್ರಬಂಧಗಳ ಸರಣಿಯನ್ನು ಒಳಗೊಂಡಿದೆ.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಪಿಎಚ್.ಡಿ ಪಡೆದಿರುವ ಡಾ.ಪ್ರಭಾಕರ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ.
2014 ರ ಚುನಾವಣೆಯಲ್ಲಿ ಗೆಲ್ಲಲು ಬಳಸಿದ 'ಅಭಿವೃದ್ಧಿ' ಯ ಹಲಗೆಯ ಮೇಲೆ ಗೆದ್ದ ಬಿಜೆಪಿಯು ಹಿಂದುತ್ವವನ್ನು ಕುತಂತ್ರದಿಂದ ಕಳ್ಳಸಾಗಣೆ ಮಾಡಿದೆ ಎಂದು ಅವರು ಹೇಳಿದ್ದಾರೆ. 2024 ರಲ್ಲಿ ಮತ್ತೊಂದು ಬಾರಿ ಮೋದಿ ಸರ್ಕಾರ ಬಂದರೆ ಅದು ಆರ್ಥಿಕತೆಗೆ ಮಾತ್ರವಲ್ಲದೆ, ಒಟ್ಟಾರೆ ರಾಷ್ಟ್ರಕ್ಕೆ ವಿಪತ್ತು ತರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಾಗಿದೆ.
ಹಿಂದುತ್ವದಿಂದ ಪ್ರೇರಿತರಾಗಿ ಜನರನ್ನು ಒಟ್ಟುಗೂಡಿಸುವ ಮತ್ತು ಅವರ ಕೀಳು ಪ್ರವೃತ್ತಿಯನ್ನು ಉದ್ದೀಪಿಸುವ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಸಾಮರ್ಥ್ಯದಿಂದಾಗಿ ಅವರು ಜನಪ್ರಿಯತೆ ಹೊಂದಿದ್ದಾರೆ ಎಂದು ಡಾ. ಪ್ರಭಾಕರ್ ವಾದಿಸಿದ್ದಾರೆ.
ಆದರೆ 2014 ರ ಚುನಾವಣೆಯ ಪೂರ್ವದಲ್ಲಿ ನಡೆದ ಹೋರಾಟವು ಹಿಂದೂ ಮತ್ತು ಮುಸ್ಲಿಮರ ನಡುವೆ ಆಗಿರಲಿಲ್ಲ ಎಂದು ಒತ್ತಿ ಹೇಳಿದ ಅವರು, ಆ ಹೋರಾಟವು, ಬಡತನ ಮತ್ತು ನಿರುದ್ಯೋಗದ ವಿರುದ್ಧ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ನಡೆಸಿದ ಹೋರಾಟವಾಗಿತ್ತು ಎಂದಿದ್ದಾರೆ.
2014ರಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯವರು ಉತ್ತಮ ಆಡಳಿತ, ಸ್ವಚ್ಛ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ಮತ್ತು ‘ಅಭಿವೃದ್ಧಿ’ ಭರವಸೆ ನೀಡಿ ಮತ ಕೇಳಿದ್ದರು ಎಂದು ಡಾ.ಪ್ರಭಾಕರ್ ನೆನಪಿಸಿಕೊಂಡರು.
ಹಿಂದೂ ರಾಷ್ಟ್ರ ಮತ್ತು ಹಿಂದುತ್ವದ ನಿಜವಾದ ಉದ್ದೇಶವನ್ನು ಮುಂದಿಟ್ಟು ನರೇಂದ್ರ ಮೋದಿ ಅವರು ಮೊದಲ ಬಾರಿಗೆ ದೇಶದ ಜನರ ವಿಶ್ವಾಸವನ್ನು ಗೆದ್ದಿರಲಿಲ್ಲ ಎಂದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಹಿಂದುತ್ವವನ್ನು ಕಳ್ಳಸಾಗಣೆ ಮಾಡಲಾಗಿದೆ. ಟ್ರೋಜನ್ ಕುದುರೆಯಂತೆ ʼಅಭಿವೃದ್ಧಿʼಯನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಾಯಕತ್ವದ ಗುರಿಯು ಬಿರುಕುಗಳನ್ನು ತೆಗೆದುಹಾಕುವುದು ಮತ್ತು ಸಾಮರಸ್ಯವನ್ನು ಉತ್ತೇಜಿಸುವುದು, ಅದನ್ನು ಬಿಟ್ಟು ಕೋಮು ಭಾವನೆಗಳಿಗೆ ಧಕ್ಕೆ ತರುವುದು ನಾಯಕರ ಕೆಲಸವಲ್ಲ ಎಂದು ಡಾ. ಪ್ರಭಾಕರ್ ಹೇಳಿದರು. ಬಿಜೆಪಿ ಮತ್ತು ಮೋದಿ ಅವರು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಯಸಿದರೆ, ಅದನ್ನು ಅವರು 2014 ರ ಚುನಾವಣೆಯಲ್ಲಿ ಸ್ಪರ್ಧಿಸುವಾಗಲೇ ಹೇಳಬೇಕಿತ್ತು ಎಂದು ಪ್ರಭಾಕರ್ ಹೇಳಿದ್ದಾರೆ.
ವಿಭಜನೆಯ ಸಮಯದಲ್ಲಿ ಭಾರತದಲ್ಲಿ ಹಿಂದೂ ಬಹುಸಂಖ್ಯಾತವಾದವು ಸ್ವೀಕಾರಾರ್ಹತೆಯನ್ನು ಕಂಡಿರಲಿಲ್ಲ ಎಂದು ಗಮನಸೆಳೆದ ಅವರು, ವಿಭಜನೆಯ ನಂತರ ಹಿಂದುತ್ವ ರಾಷ್ಟ್ರೀಯವಾದಿ ರಾಜಕಾರಣಕ್ಕೆ ಭಾರತದಲ್ಲಿ ಹೆಚ್ಚಿನ ಸಾಧ್ಯತೆ ಇತ್ತು. ದೇಶ ವಿಭಜನೆ ವೇಳೆ ಎರಡೂ ಸಮುದಾಯಗಳ ಲಕ್ಷಾಂತರ ಜನರು ಸಾಮೂಹಿಕವಾಗಿ ವಲಸೆ ಹೋಗುತ್ತಿದ್ದರು, ಎರಡೂ ದೇಶಕ್ಕೂ ಸಾವಿರಾರು ಮೃತದೇಹಗಳು ಬರುತ್ತಿದ್ದವು. ಆ ಸಮಯದಲ್ಲಿ ಅಭದ್ರತೆ ಮತ್ತು ಭಯ ಹೆಚ್ಚಿತ್ತು, ಆಗ ಹಿಂದುತ್ವ ರಾಜಕಾರಣ ಬೆಳೆಯಲು ಅನುಕೂಲಸ್ಥ ಸನ್ನಿವೇಶ ಇದ್ದರೂ, ಆಗ ಬಹುಸಂಖ್ಯಾತವಾದಕ್ಕೆ ಭಾರತದಲ್ಲಿ ಮಾನ್ಯತೆ ಸಿಗಲಿಲ್ಲ ಎನ್ನುವುದನ್ನು ಅವರು ಗಮನ ಸೆಳೆದರು.
ಏಳು ದಶಕಗಳ ನಂತರ ಹಿಂದುತ್ವ ರಾಜಕಾರಣಕ್ಕೆ ಸ್ವೀಕಾರ ಸಿಗುತ್ತಿದೆ, ಬಹುಶಃ ವಿಭಜನೆಯ ಬಗ್ಗೆ ಯಾವುದೇ ಕಹಿ ನೆನಪಿಲ್ಲದ ಮತ್ತು ಅದರಿಂದ ಬಳಲದಿರುವ ಭಾರತೀಯರ ತಲೆಮಾರಿನಲ್ಲಿ ಅದಕ್ಕೆ ಮಾನ್ಯತೆ ಸಿಗುತ್ತಿದೆ ಎಂದು ಡಾ. ಪ್ರಭಾಕರ್ ಗಮನಿಸಿದರು.
ಅರ್ಥಶಾಸ್ತ್ರದಲ್ಲಿ ಕೆಲವು ಮೂಲಭೂತ ತರಬೇತಿ ಹೊಂದಿರುವ ಯಾವುದೇ ಅರ್ಥಶಾಸ್ತ್ರಜ್ಞರು, ಇಷ್ಟು ದೊಡ್ಡ ಪ್ರಮಾಣದಲ್ಲಿ ನೋಟು ಅಮಾನ್ಯೀಕರಣವನ್ನು ಶಿಫಾರಸು ಮಾಡುತ್ತಿರಲಿಲ್ಲ ಎಂದು ಪ್ರಭಾಕರ್ ಹೇಳಿದ್ದಾರೆ. ನೋಟು ರದ್ಧತಿಯನ್ನು ಒಂದು ದೊಡ್ಡ ಪ್ರಮಾದ ಎಂದು ಕರೆದ ಅವರು, ಈ ನಡೆಯು ಪ್ರಮಾದಗಳನ್ನು ಹೆಚ್ಚಿಸಿತು ಮತ್ತು ಬಿಕ್ಕಟ್ಟನ್ನು ಉಲ್ಬಣಗೊಳಿಸಿತು ಎಂದು ಡಾ. ಪ್ರಭಾಕರ್ ಹೇಳಿದರು.







