ಇಲಾಖಾ ಸೇವೆಗಳ ಕಡತಗಳನ್ನು ದಿಲ್ಲಿ ಸರಕಾರಕ್ಕೆ ಹಸ್ತಾಂತರಿಸಿದ ಲೆ.ಗವರ್ನರ್
ಸುಪ್ರೀಂಕೋರ್ಟ್ ಆದೇಶದ ಪಾಲನೆ
ಹೊಸದಿಲ್ಲಿ,ಮೇ 16: ಉನ್ನತ ಆಡಳಿತ ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆ ಕುರಿತಾಗಿ ಸುಪ್ರೀಂಕೋರ್ಟ್ ಕಳೆದ ವಾರ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯಾಲಯವು ದಿಲ್ಲಿ ಸರಕಾರಕ್ಕೆ ಸಂಬಂಧಿಸಿದ ಸರಕಾರಿ ಸೇವೆಗೆ ಸಂಬಂಧಿಸಿದ ಕಡತಗಳನ್ನು ವಾಪಾಸ್ ಮಾಡಿದ್ದಾರೆಂದು ರಾಜ್ ನಿವಾಸ್ನ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಜಮೀನು,ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಹೊರತುಪಡಿಸಿ ದಿಲ್ಲಿಯಲ್ಲಿನ ಚುನಾಯಿತ ಸರಕಾರವು ಇತರ ಸೇವೆಗಳ ಇಲಾಖೆಗಳ ಮೇಲೆ ಶಾಸಕಾಂಗ ಹಾಗೂ ಕಾರ್ಯಾಂಗದ ಅಧಿಕಾರಗಳನ್ನು ಹೊಂದಿದೆ ಎಂದು ಸುಪ್ರೀಂಕೋರ್ಟ್ ಕಳೆದ ಗುರುವಾರ ತೀರ್ಪು ನೀಡಿತ್ತು.
‘‘ಮೇ 11ನೇ ತಾರೀಕಿನ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದ ತೀರ್ಪಿಗೆ ಅನುಸಾರವಾಗಿ ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯಾಲಯವು ಸೂಕ್ತ ಕ್ರಮಕ್ಕಾಗಿ ಸೇವಾ ವಿಷಯಗಳಿಗೆ ಸಂಬಂಧಿಸಿದ ಕಡತಗಳನ್ನು ಸೂಕ್ತ ಕ್ರಮಕ್ಕಾಗಿ ಸರಕಾರಕ್ಕೆ ಹಿಂತಿರುಗಿಸಿದೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಿಲ್ಲಿ ಸರಕಾರದ ವಿವಿಧ ಆಸ್ಪತ್ರೆಗಳ ಸಿಬ್ಬಂದಿಯ ಗುತ್ತಿಗೆಯ ಒಪ್ಪಂದದ ವಿಸ್ತರಣೆಗೆ ಸಂಬಂಧಿಸಿದ ಪ್ರಸ್ತಾವನೆಗಳು ಹಾಗೂ ದೀನ ದಯಾಳ ಉಪಾಧ್ಯಾಯ ಆಸ್ಪತ್ರೆಯ ಎ ಗ್ರೂಪ್ ನ ಸಿಬ್ಬಂದಿಯ ರಾಜೀನಾಮೆ ಸ್ವೀಕಾರಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳು , ಈ ಕಡತಗಳಲ್ಲಿ ಒಳಗೊಂಡಿದ್ದವು.
ಸುಪ್ರೀಂಕೋರ್ಟ್ ನ ಮೇ 11ರ ಆದೇಶದ ಹಿನ್ನೆಲೆಯಲ್ಲಿ ಮುಂದಿನ ಸೂಕ್ತ ಅಥವಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಈ ಕಡತಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.