ಕಾಂಗ್ರೆಸ್ ಗೆಲುವು: ಕರ್ನಾಟಕದ ಜನತೆಗೆ ಪಾಕ್ ಪ್ರಧಾನಿ ಅಭಿನಂದಿಸಿದ್ದಾರೆಂದು ಸುಳ್ಳು ಸುದ್ದಿ ವೈರಲ್

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಕರ್ನಾಟಕದ ಜನತೆಗೆ ಧನ್ಯವಾದ ತಿಳಿಸಿ ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಶರೀಫ್ ಟ್ವೀಟ್ ಮಾಡಿದ್ದಾರೆಂಬ ಶೀರ್ಷಿಕೆಯೊಂದಿಗೆ ಒಂದು ಫೋಟೋ ವಾಟ್ಸ್ಯಾಪ್ ಮತ್ತು ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಪಕ್ಷವು ಎಸ್ಡಿಪಿಐ ಜೊತೆಗೂಡಿ ಭಾರತದಲ್ಲಿ ಇಸ್ಲಾಂ ಬಲವರ್ಧನೆಗೆ ಮತ್ತು ಕರ್ನಾಟಕದ ಸಾರ್ವಭೌಮತೆಗಾಗಿ ಶ್ರಮಿಸಲಿದೆ ಎಂಬ ಆಶಾವಾದವನ್ನೂ ಪಾಕ್ ಪ್ರಧಾನಿ ವ್ಯಕ್ತಪಡಿಸಿದ್ದಾರೆಂದು ಈ ವೈರಲ್ ಪೋಸ್ಟ್ನಲ್ಲಿ ಹೇಳಲಾಗಿದೆ.
ಆದರೆ ಪಾಕ್ ಪ್ರಧಾನಿಯ ಟ್ವಿಟರ್ ಪುಟ ಪರಿಶೀಲಿಸಿದಾಗ ಈ ಪೋಸ್ಟ್ ಮಾಡಲಾಗಿದೆ ಎಂದು ಹೇಳಲಾದ ಮೇ 13, 2023ರಂದು ಅವರ ಟ್ವಿಟರ್ ಪುಟದಲ್ಲಿ ಕೇವಲ ಮೂರು ಟ್ವೀಟ್ಗಳನ್ನು ಮಾಡಿರುವುದು ಹಾಗೂ ಇವುಗಳಲ್ಲಿ ಯಾವ ಟ್ವೀಟ್ ಕೂಡ ಕರ್ನಾಟಕ ಚುನಾವಣೆಗೆ ಸಂಬಂಧಿಸಿದ್ದಲ್ಲ ಎಂದು ತಿಳಿದು ಬಂದಿದೆ.
ಈ ವೈರಲ್ ಪೋಸ್ಟ್ ನಕಲಿ ಹಾಗೂ ಅದರಲ್ಲಿರುವ ಫೋಟೋ ತಿರುಚಲಾಗಿದೆ ಎಂದೂ ಅನಾಲಿಟಿಕ್ಸ್ ಸಂಸ್ಥೆ ಸೋಶಿಯಲ್ ಬ್ಲೇಡ್ ದೃಢೀಕರಿಸಿದೆ.
ಹಿರಿಯ ಬಿಜೆಪಿ ನಾಯಕ ಹಾಗೂ ಸಂಸದ ಸುಬ್ರಮಣಿಯನ್ ಸ್ವಾಮಿ ಕೂಡ ಟ್ವೀಟ್ ಮಾಡಿ ಈ ಪೋಸ್ಟ್ನ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದರು. ಆದರೆ ಅನೇಕ ಬಿಜೆಪಿ ಕಾರ್ಯಕರ್ತರು ಈ ವೈರಲ್ ಪೋಸ್ಟ್ ಅನ್ನು ಶೇರ್ ಮಾಡಿದ್ದರು.







