ಉಡುಪಿ: ಸ್ಥಾನ ಬದಲಾದರೂ, ಬದಲಾಗದ ಜಾತಿ ಸಮೀಕರಣ

ಉಡುಪಿ: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಗಳನ್ನು ಹೊರತು ಪಡಿಸಿದರೆ, ಉತ್ತರ ಕನ್ನಡವೂ ಸೇರಿದಂತೆ ಉಳಿದೆಲ್ಲಾ ಜಿಲ್ಲೆಗಳಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಇದರಿಂದ ಕಾಂಗ್ರೆಸ್ 136 ಸ್ಥಾನ ಗಳಿಸುವ ಮೂಲಕ ನಿಚ್ಚಳ ಬಹುಮತ ಪಡೆದು ಕೊಂಡಿದೆ.
ಇಡೀ ರಾಜ್ಯ ಒಂದು ರೀತಿಯಲ್ಲಿ ಯೋಚಿಸಿದರೆ, ಕರಾವಳಿಯ ಎರಡು ಜಿಲ್ಲೆಗಳು ಅದಕ್ಕೆ ವ್ಯತಿರಿಕ್ತವಾಗಿ ಯೋಚಿಸುತ್ತದೆ ಎಂಬುದು ಇಲ್ಲಿ ಮತ್ತೊಮ್ಮೆ ಸಾಬೀತಾಯಿತು. ಹಿಂದಿನ ಬಹಳಷ್ಟು ಸಂದರ್ಭಗಳಲ್ಲಿ, ಚಳವಳಿ, ಹೋರಾಟ ಸಂದರ್ಭಗಳಲ್ಲೂ ಇದು ಢಾಳಾಗಿ ಕಂಡುಬಂದಿದೆ.
ಇದರೊಂದಿಗೆ ಸೋಷಿಯಲ್ ಇಂಜಿನಿಯರಿಂಗ್ನಲ್ಲೂ ಕರಾವಳಿ ಜಿಲ್ಲೆಗಳು ನಿರ್ದಿಷ್ಟ ಪ್ರಕಾರದಲ್ಲೇ ತನ್ನ ನಿರ್ಣಯ ಗಳನ್ನು ಹೊರಹಾಕುತ್ತಿದೆ. ಈ ಬಾರಿಯ ಚುನಾವಣಾ ಫಲಿತಾಂಶವನ್ನು ಗಮನಿಸಿ, 2018ರ ಚುನಾವಣೆಯಂತೆ ಈ ಬಾರಿಯೂ ಇಬ್ಬರು ಬಂಟರು, ಒಬ್ಬರು ಬಿಲ್ಲವರು, ಒಬ್ಬರು ಮೊಗವೀರರು ಹಾಗೂ ಒಬ್ಬರು ಬ್ರಾಹ್ಮಣ ಅಭ್ಯರ್ಥಿ ಜಯಗಳಿಸಿದ್ದಾರೆ. ಅಂದ ಹಾಗೆ ಈ ಬಾರಿ ಬದಲಾದ ಕ್ಷೇತ್ರಗಳಲ್ಲಿ ಒಟ್ಟಾರೆಯಾಗಿ ಇದೇ ಫಲಿತಾಂಶ ಬಂದಿದೆ.
2018ರಲ್ಲಿ ಬೈಂದೂರು ಮತ್ತು ಕುಂದಾಪುರಗಳಲ್ಲಿ ಬಂಟ ಅಭ್ಯರ್ಥಿ ಜಯ ಗಳಿಸಿದರೆ, ಕಾರ್ಕಳದಲ್ಲಿ ಬಿಲ್ಲವ, ಕಾಪುವಿನಲ್ಲಿ ಮೊಗವೀರ ಹಾಗೂ ಉಡುಪಿ ಕ್ಷೇತ್ರದಲ್ಲಿ ಬ್ರಾಹ್ಮಣ ಅಭ್ಯರ್ಥಿ ಜಯ ಪಡೆದಿದ್ದಾರೆ. 2023ರಲ್ಲಿ ಕಾಪು ಮತ್ತು ಬೈಂದೂರುಗಳಲ್ಲಿ ಬಂಟ ಸಮುದಾಯದ ಅಭ್ಯರ್ಥಿಗಳು, ಕಾರ್ಕಳದಲ್ಲಿ ಬಿಲ್ಲವ, ಉಡುಪಿಯಲ್ಲಿ ಮೊಗವೀರ ಹಾಗೂ ಕುಂದಾಪುರದಲ್ಲಿ ಬ್ರಾಹ್ಮಣ ಅಭ್ಯರ್ಥಿ ನಿರಾಯಾಸ ಜಯ ಪಡೆದಿದ್ದಾರೆ. ಇಲ್ಲಿಗೆ ಕ್ಷೇತ್ರ ಬದಲಾದರೂ ಅದೇ ಸಮುದಾಯದ ಅಭ್ಯರ್ಥಿಗಳು ಸತತ ಎರಡನೇ ಬಾರಿಗೆ ಜಯ ಗಳಿಸಿದ್ದಾರೆ.
ಉಡುಪಿ: ನಿಜವಾಗಿಯೂ ಉಡುಪಿ ಜಿಲ್ಲೆಯಲ್ಲಿ ಪ್ರಬಲ ಸಮುದಾಯ ಗಳಾದ ಬಂಟರು, ಬಿಲ್ಲವರು, ಮೊಗವೀರರು ರಾಜಕೀಯ ಕ್ಷೇತ್ರದಲ್ಲಿ ಪಾರಮ್ಯ ಮೆರೆಯುತಿದ್ದಾರೆ. ಇದರೊಂದಿಗೆ ಬ್ರಾಹ್ಮಣ ಅಭ್ಯರ್ಥಿಗೆ ಮಣೆ ಹಾಕುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆ ಯಾವುದೇ ಜನಸಂಖ್ಯೆಯ ಬಲ ಇರಬೇಕಾಗಿಲ್ಲ. ಆದರೆ ಜನಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ಸಮುದಾಯಗಳೂ ಈ ಸ್ಪರ್ಧೆಯಲ್ಲಿ ಹಿಂದೆ ಬೀಳುತ್ತಿವೆ. ದಲಿತರು, ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರು, ಬೈಂದೂರಿನಲ್ಲಿ ಪ್ರಬಲವಾಗಿರುವ ದೇವಾಡಿ ಗರು, ಸೇರ್ವೆಗಾರರು ಸಹ ಇದೇ ವಿಭಾಗಕ್ಕೆ ಬರುತ್ತಾರೆ.
ಉಡುಪಿ ಕ್ಷೇತ್ರದಲ್ಲಿ ಇದುವರೆಗೆ ನಡೆದಿರುವ 16 ಚುನಾವಣೆಗಳಲ್ಲಿ ಮೊಗವೀರರು (10 ಬಾರಿ) ಹಾಗೂ ಬ್ರಾಹ್ಮಣರು ಮತ್ತು ಗೌಡಸಾರಸ್ವತರು ಆರು ಬಾರಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಕಾಪು ಕ್ಷೇತ್ರದಲ್ಲಿ ಆರಂಭಿಕ ಚುನಾವಣೆಯಲ್ಲಿ ಕ್ರೈಸ್ತರನ್ನು ಹೊರತು ಪಡಿಸಿದರೆ, ಸ್ಪರ್ಧಿಸಿ ಗೆದ್ದವರೆಲ್ಲರೂ ಬಂಟರು (5), ಬಿಲ್ಲವರು (6), ಮೊಗವೀರ (3) ಒಟ್ಟು 15 ಚುನಾವಣೆಗಳಲ್ಲಿ ಜಯದ ಗೆರೆ ದಾಟಿದ್ದಾರೆ.
ಕುಂದಾಪುರ: ಇನ್ನು ಕುಂದಾಪುರದಲ್ಲಿ ಕಳೆದ 13 ಚುನಾವಣೆಗಳ ದಾಖಲೆಯನ್ನು ಈ ಬಾರಿ ಮುರಿಯಲಾಯಿತು. ಇಲ್ಲಿ ವಿನ್ನಿಫ್ರೆಡ್ ಫೆರ್ನಾಂಡೀಸ್ ಎರಡು ಬಾರಿ ಜಯಗಳಿಸಿದ್ದು ಬಿಟ್ಟರೆ 2018ರವರೆಗೆ ಸತತ 13 ಬಾರಿ ಬಂಟ ಅಭ್ಯರ್ಥಿಯೇ ಇಲ್ಲಿ ಜಯಗಳಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ನ ಪ್ರತಾಪ್ಚಂದ್ರ ಶೆಟ್ಟಿ (5), ಹಾಲಾಡಿ ಶ್ರೀನಿವಾಸ ಶೆಟ್ಟಿ (5) ಹಾಗೂ ಇತರ ಬಂಟರು ಸೇರಿದ್ದಾರೆ. ಹಾಲಾಡಿಯವರ ಮುತುವರ್ಜಿಯಿಂದ ಈ ಬಾರಿ ಬ್ರಾಹ್ಮಣ ಕಿರಣ್ ಕುಮಾರ್ ಕೊಡ್ಗಿ ಹಿಂದಿನ ದಾಖಲೆ ಮುರಿದು ಬ್ರಾಹ್ಮಣ ಅಭ್ಯರ್ಥಿಯ ಹೆಸರು ಕ್ಷೇತ್ರದಲ್ಲಿ ನೊಂದಾಯಿಸಿದರು.
ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬೈಂದೂರಿನಲ್ಲಿ ಬಂಟರು, ಬಿಲ್ಲವರು ಹಾಗೂ ಬ್ರಾಹ್ಮಣರೊಂದಿಗೆ ಅಪರೂಪಕ್ಕೆಂಬಂತೆ ಓರ್ವ ಸೇರ್ವೆಗಾರ ಅಭ್ಯಥಿಗೆ (ಲಕ್ಷ್ಮೀನಾರಾಯಣ) ಸಹ ಶಾಸಕರಾಗಿ ಹೆಸರು ನೊಂದಾಯಿಸುವ ಅವಕಾಶ ಪಡೆದಿದ್ದಾರೆ. ಇಲ್ಲಿ ಬಂಟರು (6), ಬ್ರಾಹ್ಮಣರು (4), ಬಿಲ್ಲವರು (4) ಹಾಗೂ 2013ರಲ್ಲಿ ಲಕ್ಷ್ಮೀನಾರಾಯಣ ಜಯಪಡೆದ ಅಭ್ಯರ್ಥಿಗಳು.
ಕಾರ್ಕಳ: ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ ಕಾರ್ಕಳ ಕ್ಷೇತ್ರದಲ್ಲಿ ಸೋಷಿಯಲ್ ಇಂಜಿನಿಯರಿಂಗ್ ಹೆಚ್ಚು ಪ್ರಾಯೋಗಿಕವಾಗಿ ಜಾರಿ ಗೊಂಡಿದೆ. ಇಲ್ಲಿ ಮೊದಲ ನಾಲ್ಕು ಚುನಾವಣೆಗಳಲ್ಲಿ ಬಂಟರು ಜಯ ಗಳಿಸಿದ ಬಳಿಕ, ರಾಜ್ಯದ ಮುಖ್ಯಮಂತ್ರಿ ಸ್ಥಾನದವರೆಗೂ ಬೆಳೆದುನಿಂತ ಮೊಯ್ಲಿ ಸಮುದಾಯದ ಎಂ.ವೀರಪ್ಪ ಮೊಯ್ಲಿ ಸತತ ಆರು ಬಾರಿ ಅಭ್ಯರ್ಥಿಯಾಗಿ ಆಯ್ಕೆಯಾದರು.
ಇದು ಬಿಟ್ಟರೆ ಭಂಡಾರಿ ಸಮುದಾಯದ ಗೋಪಾಲ ಭಂಡಾರಿ ಸಹ ಎರಡು ಸಲ ಇಲ್ಲಿಂದ ಶಾಸಕರಾಗಿ ಆಯ್ಕೆ ಯಾಗಿದ್ದಾರೆ. ಈ ಬಾರಿ ಜಯ ಗಳಿಸಿದ ಸುನಿಲ್ಕುಮಾರ್ ಅವರು ಬಿಲ್ಲವರಿಗೆ ಮೂರನೇ ಜಯವನ್ನು ತಂದು ಕೊಟ್ಟಿದ್ದಾರೆ.
ಇವು ಜಿಲ್ಲೆಯಲ್ಲಿ ಈವರೆಗಿನ ರಾಜಕೀಯ ಪ್ರಾಬಲ್ಯದ ಕಿರುನೋಟ. ಮೂರ್ನಾಲ್ಕು ಸಮುದಾಯಗಳನ್ನು ಹೊರತು ಪಡಿಸಿ ಜಿಲ್ಲೆಯಲ್ಲಿರುವ ದಲಿತರು ಸೇರಿದಂತೆ ನೂರಾರು ಸಣ್ಣಪುಟ್ಟ, ದುರ್ಬಲ ಸಮುದಾಯಗಳಿಗೆ ಇಲ್ಲಿ ಯಾವತ್ತೂ ಪ್ರಾಶಸ್ತ್ಯ ದೊರಕಿದ್ದೇ ಇಲ್ಲ. ಇದಕ್ಕೆ ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಯಾವುದೂ ಅಪವಾದವಲ್ಲ. ದ್ವನಿ ಇಲ್ಲದ ಈ ಸಮುದಾಯಗಳು ಒಗ್ಗಟ್ಟಾಗಿ ತಮ್ಮ ಹಕ್ಕನ್ನು ಪ್ರಬಲವಾಗಿ ಪ್ರತಿಪಾದಿಸುವವರೆಗೆ ಇದು ಇದೇ ರೀತಿ ಮುಂದುವರಿಯಲಿದೆ. ಇಲ್ಲದಿದ್ದರೆ ರಾಷ್ಟ್ರೀಯ ಪಕ್ಷಗಳು ಸೇಫ್ ರೆನ್ನಿಂದ ಸದ್ಯಕ್ಕೆ ಹೊರಬರುವ ಯಾವುದೇ ಲಕ್ಷಣಗಳಿಲ್ಲ.







