ಉತ್ತರ ಕೇರಳವು ʻಉಗ್ರ ಜಾಲದ ತಾಣವಾಗಿದೆʼ: ದಿ ಕೇರಳ ಸ್ಟೋರಿ ನಿರ್ದೇಶಕ ಸುದಿಪ್ತೊ ಸೇನ್
ಹೊಸದಿಲ್ಲಿ: ಕೇರಳದ ಉತ್ತರ ಭಾಗವು ʻಉಗ್ರ ಜಾಲದ ತಾಣವಾಗಿದೆʼ ಎಂದು ವಿವಾದಿತ ಚಲನಚಿತ್ರ ʼ ದಿ ಕೇರಳ ಸ್ಟೋರಿʼ ನಿರ್ದೇಶಕ ಸುದಿಪ್ತೊ ಸೇನ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು “ಎರಡು ಕೇರಳಗಳಿವೆ. ಒಂದು ಪೋಸ್ಟ್ ಕಾರ್ಡ್ನಂತೆ- ಹಿನ್ನೀರು, ಸುಂದರ ಪ್ರಕೃತಿ, ಕಳರಿಪಯಟ್ಟು, ನೃತ್ಯ, ಸಮರ ಕಲೆಗಳು, ಆನೆಗಳು ಇತ್ಯಾದಿ. ಇಡೀ ಜಗತ್ತಿಗೆ ತಿಳಿದಿರುವ ಕೇರಳ ಇದು. ಇನ್ನೊಂದು ಕೇರಳ ಇದೆ. ಮಂಗಳೂರು ಸಹಿತ ದಕ್ಷಿಣ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಮಲಪ್ಪುರ, ಕಾಸರಗೋಡು, ಕೊಝಿಕ್ಕೋಡು. ಇದು ಉಗ್ರ ಚಟುವಟಿಕೆಯ ತಾಣ,” ಎಂದು ಅವರು ಹೇಳಿದರು.
ಕೇರಳದ 32000 ಮಹಿಳೆಯರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೈದು ಐಸಿಸ್ಗೆ ಸೇರಿಸಲಾಗಿದೆ ಎಂದು ಚಿತ್ರದಲ್ಲಿ ತಿಳಿಸಲಾಗಿರುವ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಹೇಳಿದರು.
“ಕೇರಳ ರಾಜ್ಯವು ದೇಶದಲ್ಲಿಯೇ ಗರಿಷ್ಠ ಸಾಕ್ಷರತೆ ಹೊಂದಿರುವ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ, ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ನಿರ್ವಹಣೆ ತೋರಿರುವ ಹೊರತಾಗಿಯೂ ಹಲವಾರು ವಿಷಯಗಳು ʻಚಾಪೆಯಡಿʼ ನಡೆಯುತ್ತಿವೆ. ನಮ್ಮೊಂದಿಗೆ ಚರ್ಚಿಸುವ ಅಥವಾ ನಮ್ಮನ್ನು ಅಪಹಾಸ್ಯ ಮಾಡುವ ಬದಲು, ನಿಮ್ಮ ಮನಸ್ಸಿನಲ್ಲಿ ನಾವು ಪ್ರಶ್ನೆಗಳನ್ನು ಮೂಡಿಸಿದ್ದರೆ, ಕಾಸರಗೋಡಿನಿಂದ ಕೊಝಿಕ್ಕೋಡಿನ ತನಕ ಹೋಗಿ ವರದಿ ಮಾಡಿ. ಆಗ ನಿಮಗೆ ಸತ್ಯ ತಿಳಿಯುತ್ತದೆ,” ಎಂದು ಸೇನ್ ಹೇಳಿದರು.