ದಿಲ್ಲಿ ಅಧಿಕಾರಶಾಹಿ ಮೇಲೆ ನಿಯಂತ್ರಣ: ಸುಪ್ರೀಂ ಆದೇಶವನ್ನು ನಿಷ್ಫಲಗೊಳಿಸಲು ಸುಗ್ರೀವಾಜ್ಞೆ ಹೊರಡಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ದಿಲ್ಲಿ ಸರಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಯನ್ನು ನಿರ್ವಹಿಸುವ ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರದ ರಚನೆಗಾಗಿ ಕೇಂದ್ರ ಸರಕಾರವು ಶುಕ್ರವಾರ ತಡರಾತ್ರಿ ಸುಗ್ರೀವಾಜ್ಞೆಯನ್ನು ಹೊರಡಿಸಿದೆ.
ಸರಕಾರದ ಈ ಕ್ರಮವು ಹಿರಿಯ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗಳಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರದ ಅಧಿಕಾರವನ್ನು ದಿಲ್ಲಿಯ ಲೆಫ್ಟಿನಂಟ್ ಗವರ್ನರ್ಗೆ ನೀಡುತ್ತದೆ ಮತ್ತು ದಿಲ್ಲಿ ಸರಕಾರಕ್ಕೆ ಅಧಿಕಾರವನ್ನು ನೀಡಿರುವ ಸರ್ವೋಚ್ಚ ನ್ಯಾಯಾಲಯದ ಕಳೆದ ವಾರದ ಆದೇಶವನ್ನು ನಿಷ್ಕ್ರಿಯಗೊಳಿಸುತ್ತದೆ.
ಸಂಸತ್ತು ಅಧಿವೇಶನದಲ್ಲಿ ಇಲ್ಲದಿದ್ದಾಗ ಕಾನೂನುಗಳನ್ನು ರೂಪಿಸಲು ಕೇಂದ್ರ ಸಂಪುಟದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಸುಗ್ರೀವಾಜ್ಞೆಯನ್ನು ಹೊರಡಿಸುತ್ತಾರೆ ಮತ್ತು ಆರು ತಿಂಗಳುಗಳಲ್ಲಿ ಸಂಸತ್ತು ಸುಗ್ರೀವಾಜ್ಞೆಯನ್ನು ಅನುಮೋದಿಸದಿದ್ದರೆ ಅದು ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ.
ದಿಲ್ಲಿ ಮುಖ್ಯಮಂತ್ರಿಗಳ ನೇತೃತ್ವದ ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರವು ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಗೃಹ ಕಾರ್ಯದರ್ಶಿಯನ್ನು ಸದಸ್ಯರನ್ನಾಗಿ ಹೊಂದಿರುತ್ತದೆ. ಪ್ರಾಧಿಕಾರದ ಎಲ್ಲ ನಿರ್ಧಾರಗಳನ್ನು ಹಾಜರಿರುವ ಮತ್ತು ಮತದಾನ ಮಾಡುವ ಸದಸ್ಯರ ಮತಗಳ ಬಹುಮತದಿಂದ ಅಂಗೀಕರಿಸಲಾಗುತ್ತದೆ ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದ್ದು,ಕೇಂದ್ರದಿಂದ ನೇಮಕಗೊಂಡಿರುವ ಈ ಇಬ್ಬರು ಅಧಿಕಾರಿಗಳ ಉಪಸ್ಥಿತಿಯು ನಿರ್ಣಾಯಕವಾಗಿದೆ.
ಪ್ರಾಧಿಕಾರದ ಶಿಫಾರಸನ್ನು ಮರುಪರಿಶೀಲನೆಗೆ ಮರಳಿಸುವ ಅಧಿಕಾರವನ್ನು ಲೆಫ್ಟಿನಂಟ್ ಗವರ್ನರ್ ಹೊಂದಿರುತ್ತಾರೆ ಮತ್ತು ಭಿನ್ನಾಭಿಪ್ರಾಯಗಳಿದ್ದರೆ ಲೆಫ್ಟಿನಂಟ್ ಗವರ್ನರ್ ನಿರ್ಧಾರವು ಅಂತಿಮವಾಗಿರುತ್ತದೆ ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ.
ಸಾರ್ವಜನಿಕ ಸುವ್ಯವಸ್ಥೆ,ಪೊಲೀಸ್ ಮತ್ತು ಭೂ ಇಲಾಖೆಗಳನ್ನು ಹೊರತುಪಡಿಸಿ ಹಿರಿಯ ಅಧಿಕಾರಿಗಳ ಮೇಲೆ ದಿಲ್ಲಿ ಸರಕಾರವು ಶಾಸಕಾಂಗ ಅಧಿಕಾರವನ್ನು ಹೊಂದಿದೆ ಎಂದು ಮೇ 11ರಂದು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದ ಕೆಲವೇ ದಿನಗಳ ಬಳಿಕ ಈ ಸುಗ್ರೀವಾಜ್ಞೆ ಹೊರಬಿದ್ದಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸರಕಾರದ ಕಾರ್ಯಕಾರಿ ಅಧಿಕಾರಗಳ ವ್ಯಾಪ್ತಿ ಮತ್ತು ಆಡಳಿತಾತ್ಮಕ ಸೇವೆಗಳ ಮೇಲೆ ಅದರ ನಿಯಂತ್ರಣ ಕುರಿತು ಕೇಂದ್ರ ಮತ್ತು ದಿಲ್ಲಿ ಸರಕಾರದ ನಡುವಿನ ವಿವಾದದ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಾಧೀಶರ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ನಡೆಸಿತ್ತು.
ಈ ನಡುವೆ,ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರವು ಶನಿವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ.