ಕರ್ನಾಟಕದ ಫಲಿತಾಂಶ ಪರಿಸ್ಥಿತಿಯನ್ನೇ ಬದಲಾಯಿಸಿದೆ: ಶರದ್ ಪವಾರ್
ಮುಂಬೈ, ಮೇ 5: ದೇಶದಲ್ಲಿ ಸಾಮಾಜಿಕ ಹಾಗೂ ಕೋಮು ವಿಭಜನೆಯನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುವ ಶಕ್ತಿಗಳ ವಿರುದ್ಧ ಹೋರಾಡುವುದು ಪ್ರತಿಯೊಬ್ಬರ ಮುಂದಿರುವ ಸವಾಲು ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ರವಿವಾರ ಹೇಳಿದ್ದಾರೆ.
ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನ ಸಭೆ ಚುನಾವಣೆಯ ಫಲಿತಾಂಶ ಪರಿಸ್ಥಿತಿ ಕ್ರಮೇಣ ಬದಲಾಗುತ್ತಿರುವುದನ್ನು ತೋರಿಸಿದೆ ಎಂದು ಮಹಾರಾಷ್ಟ್ರದ ಅಹ್ಮದ್ನಗರ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿದರು.
ದುಡಿಯುವ ವರ್ಗವು ಸದೃಢ ಹಾಗೂ ಒಗ್ಗಟ್ಟು ಪ್ರದರ್ಶಿಸಿದರೆ, ಕರ್ನಾಟಕ ವಿಧಾನ ಸಭೆ ಚುನಾವಣೆಯ ಫಲಿತಾಂಶ ದೇಶದ ಇತರ ಕಡೆಗಳಲ್ಲಿ ಪುನರಾವರ್ತನೆಯಾಗಲು ಸಾಧ್ಯ ಎಂದು ಅವರು ಹೇಳಿದರು.
‘‘ದೇಶವನ್ನು ಆಳುತ್ತಿರುವ ಕೆಲವು ಶಕ್ತಿಗಳು ಸಮಾಜದಲ್ಲಿ ಜಾತಿ ಹಾಗೂ ಧರ್ಮದ ಆಧಾರದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುವ ಮೂಲಕ ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ. ಅವರು ಅಧಿಕಾರವನ್ನು ಜನರ ಕಲ್ಯಾಣಕ್ಕಾಗಿ ಬಳಸುತ್ತಿಲ್ಲ, ಬದಲಾಗಿ ಅವರು ಜನರ ನಡುವೆ ಒಡಕು ಮೂಡಿಸಲು ಬಳಸುತ್ತಾರೆ’’ ಎಂದು ಪವಾರ್ ಅವರು ಆರೋಪಿಸಿದ್ದಾರೆ.
ಈ ಶಕ್ತಿಗಳ ವಿರುದ್ಧ ಹೋರಾಡುವುದು ಅಗತ್ಯ. ಇಲ್ಲದೇ ಇದ್ದರೆ ಸಾಮಾನ್ಯ ಜನರು ನಾಶವಾಗುತ್ತಾರೆ ಎಂದು ಶರದ್ ಪವಾರ್ ಹೇಳಿದರು.