ದ.ಕ. ಜಿಲ್ಲೆಯಲ್ಲಿ ದಲಿತ ಚಳವಳಿ ಬೌದ್ಧಿಕವಾಗಿ ಇನ್ನೂ ಜೀವಂತ: ಪ್ರೊ. ಮಾಲಗತ್ತಿ
ಅಭಿಭಜಿತ ದಕ್ಷಿಣ ಕನ್ನಡದ ದಲಿತ ಚಿಂತನೆ ಕೃತಿ ಬಿಡುಗಡೆ

ಮಂಗಳೂರು, ಮೇ 21: ದಲಿತ ಚಿಂತನೆಯಂತಹ ದೊಡ್ಡ ಕೃತಿಗಳನ್ನು ಇವತ್ತಿನ ಕಾಲಘಟ್ಟದಲ್ಲಿ ಪ್ರಕಟಿಸುವುದು ಬಹಳ ಕಷ್ಟ. ಆದರೆ ಸರಕಾರದ ಸಹಾಯವಿಲ್ಲದೆ ಸ್ವಯಂ ಆರ್ಥಿಕ ಸಂಗ್ರಹದ ಮೂಲಕ ನೀವು ಪ್ರಕಟಿಸಿರುವುದು ಇದು ನಿಮ್ಮ ಶೃದ್ಧೆ, ಬದ್ಧತೆ, ಆಲೋಚನಾ ಕ್ರಮ ಮತ್ತು ನಿಮ್ಮ ಸಾಮರ್ಥ್ಯವೇನು ಎನ್ನುವುದನ್ನು ತೋರಿಸಿಕೊಟ್ಟಿ ದ್ದೀರಿ. ದ.ಕ. ಜಿಲ್ಲೆಯಲ್ಲಿ ದಲಿತ ಚಳವಳಿ ಬೌದ್ಧಿಕವಾಗಿ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ದಲಿತ ಚಿಂತನೆ ಕೃತಿ ಸಾಕ್ಷಿಯಾಗಿದೆ ಎಂದು ಸಂಸ್ಕೃತಿ ಚಿಂತಕರಾದ ಪ್ರೊ. ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟಿದ್ದಾರೆ.
ಬಲ್ಮಠದ ಸಹೋದಯ ಸಭಾಂಗಣದಲ್ಲಿ ರವಿವಾರ ನಡೆದ ರಮೇಶ್ ಯು ಮತ್ತು ಡಾ.ಸತೀಶ್ ಚಿತ್ರಾಪು ಅವರ ಪ್ರಧಾನ ಸಂಪಾದಕತ್ವದ ಅವಿಭಜಿತ ದಕ್ಷಿಣ ಕನ್ನಡದ ‘ದಲಿತ ಚಿಂತನೆ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ದಲಿತ ಚಿಂತನೆ ಕೃತಿಯಲ್ಲಿ ನಾನು ಗಮನಿಸಿದಂತೆ ಐದು ದಶಕಗಳ ಅವಧಿಯಲ್ಲಿ ದಲಿತ ಚಳವಳಿಯಲ್ಲಿ ಬಂದಿರಬಹುದಾದ ಮಹತ್ವದ ಲೇಖನಗಳಿವೆ. ಅವಿಭಜಿತ ದಕ್ಷಿಣ ಕನ್ನಡ ಒಳಗೊಂಡಂತೆ ಸಮಗ್ರ ಕರ್ನಾಟಕದ ದಲಿತ ಚಳವಳಿಗೆ ಸಂಬಂಧಿಸಿದ ವಿಷಯಗಳು ದಾಖಲೀಕರಣ ಆಗಿದೆ. ಈ ಕೃತಿ ದ.ಕ. ಜಿಲ್ಲೆಯ ಕಡಲ ತೀರದ ದಲಿತತ್ವದ ತೆರೆಗಳ ಬಗ್ಗೆ ಬೆಳಕು ಚೆಲ್ಲಿದೆ. ಹಲವು ಲೇಖಕರು ತಮ್ಮ ಅನುಭವಿದ ಮೂಲಕ ಬರೆದ ಲೇಖನಗಳನ್ನು ಒಳಗೊಂಡಿವೆ. ಸಾಹಿತ್ಯದ ನೆಲೆಯಲ್ಲಿ ಈ ಕೃತಿ ಭಾರತದಲ್ಲೇ ಐತಿಹಾಸಿಕ ಮಹತ್ವದ್ದಾಗಿದೆ ಎಂದು ಬಣ್ಣಿಸಿದರು.
ಯಾವುದೇ ಜಿಲ್ಲೆಯಲ್ಲೂ ಇಂತಹ ಪ್ರಯತ್ನ ನಡೆದಿಲ್ಲ. ಇದೊಂದು ಮಹತ್ವದ ಕೃತಿಯಾಗಿದೆ.ಎಲ್ಲ ಜಿಲ್ಲೆಗಳು ಕೂಡಾ ಈ ಸ್ವರೂಪದ ಪ್ರಾದೇಶಿಕತೆಯನ್ನು ಒಳಗೊಂಡ, ಚಿಂತನಾರ್ಹ ಅನನ್ಯತೆ, ಸಾಂಸ್ಕೃತಿಕತೆ ಏನಿದೆ ಎನ್ನುವುದನ್ನು ಹೇಗೆ ಅಳವಡಿಸಿಕೊಡಬಹುದು ಎಂಬುದಕ್ಕೆ ಈ ಕೃತಿ ಮಾದರಿಯಾಗಿದೆ.
ಬೀದರ್, ಕಲಬುರುಗಿ ಜಿಲ್ಲೆಯವರು ದಲಿತ ಚಿಂತನೆಯ ಕೃತಿ ಹೊರತಂದಿದ್ದಾರೆ. ಆದರೆ ಇಷ್ಟು ದೊಡ್ಡ ಗಾತ್ರದ ಮತ್ತು ಗಂಭೀರವಾದ ಕೃತಿ ರಾಜ್ಯದ ಎಲ್ಲೂ ಪ್ರಕಟವಾಗಿಲ್ಲ. ದ.ಕ.ಜಿಲ್ಲೆ ಬೌದ್ಧಿಕವಾಗಿ ಎಷ್ಟು ಪ್ರಬುದ್ಧವಾಗಿದೆ ಎನ್ನುವುದನ್ನು ಈ ಕೃತಿ ತೋರಿಸಿಕೊಟ್ಟಿದೆಎಂದು ಹೇಳಿದರು.
ದಲಿತರ ಅಭ್ಯುದಯಕ್ಕೆ ಕುದ್ಮುಲ್ ರಂಗರಾವ್ ಸೇರಿದಂತೆ ಹಲವು ಮಂದಿ ಬ್ರಾಹ್ಮಣರು ತನುಮನ ಧನವನ್ನು ಸಮರ್ಪಿಸಿಕೊಂಡಿದ್ದಾರೆ. ಅವರು ನಮಗೆ ಏನೆಲ್ಲ ಮಾಡಿದ್ದಾರೆ ಎನ್ನುವ ಅರಿವು ಇಂದಿನ ಪೀಳಿಗೆಗೆ ಇಲ್ಲದ ಕಾರಣದಿಂದಾಗಿ ಇವತ್ತು ನಮ್ಮಲ್ಲಿ ಸಮಸ್ಯೆ ಇದೆ ಎಂದು ಹೇಳಿದರು.
ವೈಚಾರಿಕ ಸಂಘರ್ಷದಿಂದ ಪರೋಕ್ಷವಾಗಿ ಬೆಳವಣಿಗೆಯಾಗುವುದು ನಿಜ . ಆದರೆ ಇದು ಬೆಳಸುವುದರ ಜೊತೆಗೆ ವಿಘಟನೆಗೆ ಆಸ್ಪದೆ ಮಾಡಿಕೊಡುತ್ತಿದೆ. ಖಾಸಗೀಕರಣ ವ್ಯವಸ್ಥೆ ಜನ ಸಾಮಾನ್ಯರಿಗೆ ಮಾರಕವಾಗಿದೆ. ವಾಣಿಜ್ಯೀಕರಣವು ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತದೆ ಎಂದು ಹೇಳಿದರು.
ನೆಲಮೂಲದ ಚಿಂತನೆಗೆ ನಾವು ಆದ್ಯತೆ ನೀಡಬೇಕಿದೆ. ನೆಲದ ಚಿಂತನೆಯಾಗಿ ಬೆಳೆದು ಬಂದದ್ದೇ ದಲಿತ ಸಾಹಿತ್ಯ. ಇದು ಸೀಮಾತೀತವಾಗಿದೆ. ದಲಿತ ಶಬ್ದವನ್ನು ಬೇರೆ ಬೇರೆ ರೀತಿಯಲ್ಲಿ ವಿಸ್ತಾರ ಮಾಡಲು ಸಾಧ್ಯವಿದೆ.ಅದು ಅವರವರ ಸಾಮರ್ಥ್ಯವನ್ನು ಅವಲಂಭಿಸಿದೆ ಎಂದರು.
ಪುಸ್ತಕದ ವಿಮರ್ಶೆ ಮಾಡಿದ ಬಂಕಾಪುರದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಸುಭಾಷ್ ರಾಜಮನೆ ಅವರು ದಲಿತ ಚಂತನೆ ಕೃತಿಯಲ್ಲಿರುವ ಎಲ್ಲ ಲೇಖನಗಳು ವಿಭಿನ್ನವಾಗಿದೆ. ಕಳೆದ 20 ವರ್ಷಗಳಲ್ಲಿ ಬಂದಿರುವ ಮಹತ್ವದ ಕೃತಿಯಾಗಿದೆ. ಕಾಲಚಕ್ರದ ನೆಲೆಯಿಂದ ಈ ಕೃತಿಗಳನ್ನು ನಾಲ್ಕು ಭಾಗವಾಗಿ ವಿಂಗಡಿಸಬಹುದಾಗಿ. ಮೊದಲನೆಯ ಭಾಗದಲ್ಲಿ ಅಂಬೇಡ್ಕರ್ ಚಿಂತನೆಗಳು-ತಾತ್ವಿಕ ನೆಲೆಗಳು, ಎರಡನೇಯದಾಗಿ ದ.ಕ. ಜಿಲ್ಲೆಯ ಕೊರಗ ಸಮುದಾಯ - ದಲಿತರ ಸಮಸ್ಯೆಗಳು, ಮೂರನೇಯದಾಗಿ ಜಾಗತೀಕರಣ ಮಾರುಕಟ್ಟೆ, ಸವಾಲುಗಳು ಮತ್ತು ನಾಲ್ಕನೇಯದ್ದು ಸಾಹಿತ್ಯ ಲೇಖನಗಳು ಒಳಗೊಂಡಿದೆ ಎಂದರು.
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕ ಪ್ರೊ.ಶಿವರಾಮ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ರಾಬರ್ಟ್ ಜೋಸ್ ಮುಖ್ಯ ಅತಿಥಿಯಾಗಿದ್ದರು.
ಪ್ರಕಾಶಕರಾದ ಕಲ್ಲೂರು ನಾಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಡಾ.ಗಿರಿಯಪ್ಪ ಸ್ವಾಗತಿಸಿದರು, ಕೃತಿಯ ಪ್ರಧಾನ ಸಂಪಾದಕ ರಮೇಶ್ .ಯು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸತೀಶ್ ಚಿತ್ರಾಪು ವಂದಿಸಿದರು. ಡಾ.ಅಶಾಲತಾ ಚೇವಾರ್ ಕಾರ್ಯಕ್ರಮ ನಿರೂಪಿಸಿದರು.







