ಉಡುಪಿ: ತಂಡದಿಂದ ಯುವಕನಿಗೆ ಚೂರಿ ಇರಿದು ಕೊಲೆಗೆ ಯತ್ನ; ಪ್ರಕರಣ ದಾಖಲು

ಉಡುಪಿ: ತಂಡವೊಂದು ಯುವಕನೋರ್ವನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ ನಡೆಸಿರುವ ಘಟನೆ ಮೇ 21ರಂದು ರಾತ್ರಿ ಉಡುಪಿ ಪುತ್ತೂರು ಬಬ್ಬುಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಪುತ್ತೂರು ಗ್ರಾಮದ ಕೊಳಂಬೆ ಶಾಂತಿನಗರದ ಉಮೇಶ್ ಮೆಂಡನ್ ಎಂಬವರ ಮಗ ಶರತ್ ಎಂಬವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಕೆಲಸದ ಹುಡುಗ ಚರಣ್ ಎಂಬಾತನೊಂದಿಗೆ ಬೈಕ್ನಲ್ಲಿ ಹೋಗುತ್ತಿರುವಾಗ ಬೈಕಿನಲ್ಲಿ ಬಂದ ನಾಗರಾಜ್, ಕಾರ್ತಿಕ್, ದೇಶರಾಜು ಮತ್ತು ಇತರರು ಶರತ್ನನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿದರು. ಬಳಿಕ ಕೊಲ್ಲುವ ಉದ್ದೇಶದಿಂದ ಅವರು ತಂದಿದ್ದ ಚೂರಿಗಳಿಂದ ಏಕಾಏಕಿ ಶರತ್ ರನ್ನು ತಿವಿದು ಗಾಯಗೊಳಿಸಿದರು ಎಂದು ದೂರಲಾಗಿದೆ.
ಸುಮಾರು 15 ದಿನಗಳ ಹಿಂದೆ ಆರೋಪಿಗಳು ಶರತ್ನ ತಮ್ಮ ದೀಪಕ್ ಎಂಬವರಿಗೆ ಹಲ್ಲೆ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಶರತ್ ಆರೋಪಿಗಳಿಗೆ ಗದರಿಸಿರುವುದೇ ಈ ಕೃತ್ಯಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





