ಅದಾನಿ ಗುಂಪಿನ ವಿರುದ್ಧದ ತನಿಖೆಗೆ ಜೆಪಿಸಿಯೇ ಸೂಕ್ತ: ಕಾಂಗ್ರೆಸ್ ಪುನರುಚ್ಚಾರ
ಹೊಸದಿಲ್ಲಿ, ಮೇ 22: ಅದಾನಿ ಗುಂಪಿನ ವ್ಯವಹಾರಗಳ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನೇಮಿತ ಪರಿಣತ ಸಮಿತಿ ಮತ್ತು ಭಾರತೀಯ ಶೇರು ವಿನಿಮಯ ಮಂಡಳಿ (ಸೆಬಿ) ಸ್ಥಗಿತಗೊಂಡಿವೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ. ಈ ವಿಷಯದಲ್ಲಿ ಸತ್ಯವನ್ನು ಹೊರಗೆಡವಲು ಜಂಟಿ ಸಂಸದೀಯ ತನಿಖೆ (ಜೆಪಿಸಿ)ಗೆ ಮಾತ್ರ ಸಾಧ್ಯ ಎನ್ನುವುದನ್ನು ಅದು ಪುನರುಚ್ಚರಿಸಿದೆ.
ಅದಾನಿ ಗುಂಪಿನ ಕಂಪೆನಿಗಳು ತಮ್ಮ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿಕೊಂಡಿವೆ ಎಂಬ ಆರೋಪಗಳಿಗೆ ಪುರಾವೆ ಸಿಕ್ಕಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ನೇಮಿತ ಪರಿಣತ ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ. ಅದೇ ವೇಳೆ, ಕಾನೂನು ಉಲ್ಲಂಘಿಸಿ ವಿದೇಶಿ ಕಂಪೆನಿಗಳಿಂದ ಭಾರತಕ್ಕೆ ಹಣ ಸಾಗಿಸಲಾಗಿದೆ ಎಂಬ ಆರೋಪಗಳ ಬಗ್ಗೆ ಪ್ರತ್ಯೇಕ ತನಿಖೆ ನಡೆಸಿರುವ ಸೆಬಿ ‘‘ಶೂನ್ಯ ಸಂಪಾದನೆ’’ ಮಾಡಿದೆ!
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮಾಧ್ಯಮ ವರದಿಯೊಂದನ್ನು ಲಗತ್ತಿಸಿದ್ದಾರೆ. ಅದಾನಿ ಗುಂಪಿಗೆ ಸೇರಿದ ಕಂಪೆನಿ ಅದಾನಿ ಪವರ್ 2013ರ ಕಂಪೆನಿಗಳ ಕಾಯ್ದೆಯ ವಿಧಿಗಳನ್ನು ಉಲ್ಲಂಘಿಸಿದೆ; ಅದು ರಿಲೇಟಡ್ ಪಾರ್ಟಿ ಗುತ್ತಿಗೆಗಳು ಮತ್ತು ವ್ಯವಹಾರಗಳನ್ನು ಗುತ್ತಿಗೆಗಳ ರಿಜಿಸ್ಟರ್ನಲ್ಲಿ ನಮೂದಿಸಿಲ್ಲ ಎಂಬುದಾಗಿ ಈ ತಿಂಗಳ ಆದಿ ಭಾಗದಲ್ಲಿ ನೀಡಿದ ತೀರ್ಪಿನಲ್ಲಿ ಗುಜರಾತ್ನ ಕಂಪೆನಿ ರಿಜಿಸ್ಟ್ರಾರ್ ಹೇಳಿದ್ದಾರೆ ಎಂಬುದಾಗಿ ವರದಿ ತಿಳಿಸಿದೆ.
‘‘ಸುಪ್ರೀಂ ಕೋರ್ಟ್ ನೇಮಿತ ಪರಿಣತ ಸಮಿತಿಯ ವರದಿಯು ‘ಕ್ಲೀನ್ ಚಿಟ್’ ಎಂಬುದಾಗಿ ಮೊದಾನಿ (ಮೋದಿ+ಅದಾನಿ) ಬ್ರಿಗೇಡ್ ಹೇಳಿಕೊಳ್ಳುತ್ತಿದೆ. ಆದರೆ, ಅದು ಕ್ಲೀನ್ ಚಿಟ್ ಅಲ್ಲ. ಕಡಿಮೆ ಮೊತ್ತದ ಹೂಡಿಕೆಯ ಶೇರುದಾರರನ್ನು ವಂಚಿಸಿ ಮಾಲೀಕರನ್ನು ಅಕ್ರಮವಾಗಿ ಶ್ರೀಮಂತರನ್ನಾಗಿ ಮಾಡುವ ಉದ್ದೇಶದ ರಿಲೇಟಡ್ ಪಾರ್ಟಿ ವ್ಯವಹಾರಗಳಲ್ಲಿ ಅದಾನಿ ಗುಂಪು ತೊಡಗಿಸಿಕೊಂಡಿರುವುದಕ್ಕೆ ಹೆಚ್ಚಿನ ಪುರಾವೆಗಳು ಹೊರಬರುತ್ತಿವೆ’’ ಎಂದು ರಮೇಶ್ ಹೇಳಿದರು.
‘‘ರಿಲೇಟಡ್ ಪಾರ್ಟಿ ಗುತ್ತಿಗೆಗಳು ಮತ್ತು ವ್ಯವಹಾರಗಳನ್ನು ಅಡಗಿಸಿಡುವ ಮೂಲಕ ಅದಾನಿ ಪವರ್ 2013ರ ಕಂಪೆನಿಗಳ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಗುಜರಾತ್ನಲ್ಲಿ ಕಂಪೆನಿಗಳ ರಿಜಿಸ್ಟ್ರಾರ್ ಇತ್ತೀಚೆಗೆ ತೀರ್ಪು ನೀಡಿದ್ದಾರೆ. ಅದು ಗೌತಮ್ ಅದಾನಿ, ರಾಜೇಶ್ ಅದಾನಿ ಮತ್ತು ವಿನೀತ್ ಜೈನ್ಗೆ ದಂಡಗಳನ್ನೂ ವಿಧಿಸಿದೆ’’ ಎಂದು ಅವರು ಹೇಳಿದರು.
‘‘ಅದಾನಿ ಗುಂಪುಗಳ ವ್ಯವಹಾರದ ತನಿಖೆಯನ್ನು ಹೇಗೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಸಮಿತಿಗಾಗಲಿ, ಸೆಬಿಗಾಗಲಿ ತಿಳಿದಿಲ್ಲ. ಅದಕ್ಕಾಗಿಯೇ ‘ಮೊದಾನಿ ಮಹಾ ಹಗರಣ’ವನ್ನು ಬಹಿರಂಗಪಡಿಸಲು ಜೆಪಿಸಿ ತನಿಖೆಯ ಅಗತ್ಯವಿದೆ ಎಂದು ನಾವು ಹೇಳುತ್ತಿರುವುದು’’ ಎಂದು ರಮೇಶ್ ಹೇಳಿದರು.
ಆರೋಪಗಳು ‘‘ಆಧಾರರಹಿತ’’ ಎಂಬುದಾಗಿ ಅದಾನಿ ಗುಂಪು ಹೇಳಿದೆ.