ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಹಿಟ್ ಲಿಸ್ಟ್ ನಲ್ಲಿ ಸಲ್ಮಾನ್ ಖಾನ್ ನಂ.1
ಹೊಸದಿಲ್ಲಿ,ಮೇ 23: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಹಿಟ್ಲಿಸ್ಟ್ ನಲ್ಲಿಯ ಅತ್ಯಂತ ಪ್ರಮುಖ ಗುರಿಗಳಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಿಳಿಸಿದೆ.
1998ರಲ್ಲಿ ಬಿಷ್ಣೋಯಿ ಸಮುದಾಯವು ಪವಿತ್ರವೆಂದು ಭಾವಿಸಿರುವ ಕೃಷ್ಣಮೃಗವನ್ನು ಬೇಟೆಯಾಡಿದ್ದಕ್ಕಾಗಿ ಮತ್ತು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಕ್ಕಾಗಿ ಪ್ರತೀಕಾರವಾಗಿ ಸಲ್ಮಾನ್ ಹತ್ಯೆಗೆ ತಾನು ಯೋಜಿಸಿದ್ದೆ ಎಂದು ಬಿಷ್ಣೋಯಿ ಕಳೆದ ಡಿಸೆಂಬರ್ ನಲ್ಲಿ ಎನ್ಐಎ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ತನ್ನ ನಿರ್ದೇಶನದ ಮೇರೆಗೆ ತನ್ನ ಸಹವರ್ತಿ ಸಂಪತ್ ನೆಹ್ರಾ ಸಲ್ಮಾನ್ ರ ಮುಂಬೈ ನಿವಾಸದ ಸಮೀಕ್ಷೆಯನ್ನು ನಡೆಸಿದ್ದ ಎಂದೂ ಬಿಷ್ಣೋಯಿ ತಿಳಿಸಿದ್ದಾನೆ. ನೆಹ್ರಾನನ್ನು ಹರ್ಯಾಣ ಪೊಲೀಸರ ವಿಶೇಷ ಕಾರ್ಯಪಡೆಯು ಬಂಧಿಸಿದೆ ಎಂದು ಎನ್ಡಿಎ ಅನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಈ ವರ್ಷದ ಎಪ್ರಿಲ್ 11ರಂದು ಸಲ್ಮಾನ್ ಗೆ ಇನ್ನೊಂದು ಜೀವ ಬೆದರಿಕೆ ಕರೆ ಬಂದಿತ್ತು ಎಂದು ಮುಂಬೈ ಪೊಲೀಸರು ತಿಳಿಸಿದರು. ಇದಕ್ಕೂ ವಾರಗಳ ಮುನ್ನ ಸಲ್ಮಾನ್ ಗೆ ಬೆದರಿಕೆ ಇ-ಮೇಲ್ ರವಾನಿಸಿದ್ದಕ್ಕಾಗಿ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಸಲ್ಮಾನ್ ಖಾನ್ ಅವರಿಗೆ ಪ್ರಸ್ತುತ ಮುಂಬೈ ಪೊಲೀಸರು ವೈ ಪ್ಲಸ್ ಭದ್ರತೆಯನ್ನು ಒದಗಿಸಿದ್ದಾರೆ. ಅವರಿಗೆ ಬಿಷ್ಣೋಯಿ ಗ್ಯಾಂಗ್ ನಿಂದ ಬೆದರಿಕೆ ಪತ್ರ ಬಂದ ಬಳಿಕ ಮಹಾರಾಷ್ಟ್ರ ಸರಕಾರವು ಈ ಕ್ರಮವನ್ನು ತೆಗೆದುಕೊಂಡಿತ್ತು.
ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಆರೋಪಿಯಾಗಿರುವ ಬಿಷ್ಣೋಯಿಯನ್ನು ಪಂಜಾಬ್ ಪೊಲೀಸರು ಕಳೆದ ವರ್ಷ ಬಂಧಿಸಿದ್ದು,ಪ್ರಸ್ತುತ ದಿಲ್ಲಿಯ ತಿಹಾರ ಜೈಲಿನಲ್ಲಿದ್ದಾನೆ.
ಕೆನಡಾದಲ್ಲಿ ನೆಲೆಸಿರುವ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಮೂಲಕ 2021ರಲ್ಲಿ ತಾನು ಕುಖ್ಯಾತ ಗೋಗಿ ಗ್ಯಾಂಗ್ಗಾಗಿ ಅಮೆರಿಕದಿಂದ ಎರಡು ‘ಝಿಗನಾ’ ಸೆಮಿ ಆಟೋಮ್ಯಾಟಿಕ್ ಪಿಸ್ತೂಲುಗಳನ್ನು ತರಿಸಿದ್ದೆ ಎಂದೂ ಬಿಷ್ಣೋಯಿ ವಿಚಾರಣೆ ಸಂದರ್ಭ ಒಪ್ಪಿಕೊಂಡಿದ್ದಾನೆ. ಎ.15ರಂದು ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಗ್ಯಾಂಗ್ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸೋದರ ಅಷ್ರಫ್ ಹತ್ಯೆಗಳಲ್ಲಿ ಈ ಪಿಸ್ತೂಲುಗಳ ಬಳಕೆಯಾಗಿರಬಹುದು ಎಂದು ಎನ್ಐಎ ಅಧಿಕಾರಿಗಳು ಶಂಕಿಸಿದ್ದಾರೆ.