'ದಿ ಕೇರಳ ಸ್ಟೋರಿ' ನಿಷೇಧಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ
ಬೆಂಗಳೂರು : ಇಸ್ಲಾಂ ಧರ್ಮವನ್ನು ತೇಜೋವಧೆ ಮಾಡುವ ಹುನ್ನಾರವಿರುವ ದಿ ಕೇರಳ ಸ್ಟೋರಿ ಚಲನಚಿತ್ರವನ್ನು ಕರ್ನಾಟಕ ರಾಜ್ಯದಲ್ಲಿ ಪ್ರದರ್ಶನಕ್ಕೆ ಕೂಡಲೇ ನಿಷೇಧ ಮಾಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಅವರು,ದಿ ಕೇರಳ ಸ್ಟೋರಿ ಚಿತ್ರದ ಪ್ರದರ್ಶನ ಮುಂದುವರಿದರೆ ರಾಜ್ಯದಲ್ಲಿ ಅಹಿತಕರ ಘಟನೆ ಆಗುವ ಸಂಭವ ಇದೆ. ಈ ಚಲನ ಚಿತ್ರ ವನ್ನು ಕೋಮು ಧ್ರುವೀಕರಣಕ್ಕೆ ಬಳಸಲಾಗುತ್ತಿದೆ. ರಾಜ್ಯದ ಕೆಲವೊಂದು ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಸಿನಿಮಾವನ್ನು ತೋರಿಸುವ ನಿರ್ಧಾರ ಮಕ್ಕಳಲ್ಲಿ ಕೋಮುವಾದ ತುಂಬುವ ಹುನ್ನಾರವಾಗಿದೆ. ಇದು ಅತ್ಯಂತ ಖಂಡನೀಯವಾಗಿದ್ದು, ರಾಜ್ಯ ಸರಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಿವಾದಾತ್ಮಕ ಹಾಗೂ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿರುವ ಈ ಚಲನಚಿತ್ರ ವೀಕ್ಷಣೆಗೆ ಕೋಮುವಾದಿ ಶಕ್ತಿಗಳು ಪ್ರಚೋದನೆ ನೀಡುತ್ತಿವೆ. ಶಾಂತಿಯುತವಾಗಿರುವ ಸಮಾಜದಲ್ಲಿ ಅಶಾಂತಿ ಬಿತ್ತಿ ಕೋಮು ಗಲಭೆಗಳನ್ನು ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಕೂಡಲೇ ರಾಜ್ಯ ಸರಕಾರ ಇತ್ತ ಗಮನ ಹರಿಸಿ ದಿ ಕೇರಳ ಸ್ಟೋರಿ ವಿವಾದಾತ್ಮಕ ಚಲನಚಿತ್ರ ಪ್ರದರ್ಶನ ನಿಷೇಧಿಸಬೇಕೆಂದು ಪುನರುಚ್ಚರಿಸಿದರು.