ವಿವಾದಾತ್ಮಕ ಧಾರ್ಮಿಕ ಉಪನ್ಯಾಸಕ ಧಿರೇಂದ್ರ ಕೃಷ್ಣ ಶಾಸ್ತ್ರಿಗೆ ವೈ ಶ್ರೇಣಿಯ ಭದ್ರತೆ ಒದಗಿಸಿದ ಮಧ್ಯಪ್ರದೇಶ ಸರ್ಕಾರ
ಭೋಪಾಲ್: ಬುಧವಾರ ಬಾಗೇಶ್ವರ್ ಧಾಮ್ನ ಮುಖ್ಯಸ್ಥ ಹಾಗೂ ವಿವಾದಾತ್ಮಕ ಧಾರ್ಮಿಕ ಉಪನ್ಯಾಸಕ ಧಿರೇಂದ್ರ ಕೃಷ್ಣ ಶಾಸ್ತ್ರಿ ಅವರಿಗೆ ಮಧ್ಯಪ್ರದೇಶ ಸರ್ಕಾರವು ವೈ ಶ್ರೇಣಿಯ ಭದ್ರತೆ ಒದಗಿಸಿದೆ ಎಂದು indiatoday.in ವರದಿ ಮಾಡಿದೆ.
ಧಿರೇಂದ್ರ ಶಾಸ್ತ್ರಿ ಅವರ ಇತ್ತೀಚಿನ ಕಾರ್ಯಕ್ರಮಗಳಲ್ಲಿ ಭಾರಿ ಜನಸಂಖ್ಯೆ ಸೇರುತ್ತಿರುವುದನ್ನು ಗಣನೆಗೆ ತೆಗೆದುಕೊಂಡು ಈ ಭದ್ರತೆಯನ್ನು ಒದಗಿಸಲಾಗಿದೆ. ಇತರ ರಾಜ್ಯಗಳಲ್ಲಿ ಧಿರೇಂದ್ರ ಶಾಸ್ತ್ರಿ ಅವರ ಕಾರ್ಯಕ್ರಮಗಳು ಆಯೋಜನೆಗೊಂಡಾಗ ಇದೇ ಬಗೆಯ ಭದ್ರತೆಯನ್ನು ಒದಗಿಸುವಂತೆ ಆಯಾ ರಾಜ್ಯಗಳನ್ನು ಮಧ್ಯಪ್ರದೇಶ ಸರ್ಕಾರ ಆಗ್ರಹಿಸಿದೆ.
ಇತ್ತೀಚಿನ ಧಿರೇಂದ್ರ ಶಾಸ್ತ್ರಿ ಅವರ ಬಿಹಾರ ಭೇಟಿಗೂ ಮುನ್ನ ರಾಜ್ಯ ಗೃಹ ಇಲಾಖೆಯ ವಿಶೇಷ ದಳವು ಉಗ್ರಗಾಮಿ ಸಂಘಟನೆಗಳು ಇಂತಹ ಕಾರ್ಯಕ್ರಮಗಳನ್ನೇ ಗುರಿಯಾಗಿಸಿಕೊಂಡು ಜೀವಹಾನಿ ಹಾಗೂ ಆಸ್ತಿಪಾಸ್ತಿ ನಷ್ಟ ಸೇರಿದಂತೆ ಕಾರ್ಯಕ್ರಮ ನಡೆಯುವ ಆಸುಪಾಸಿನಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸಿ ಹಾನಿಯನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಬಿಹಾರದಲ್ಲಿ ಆಯೋಜನೆಗೊಂಡಿದ್ದ ‘ದಿವ್ಯ ದರ್ಬಾರ್’ ಕಾರ್ಯಕ್ರಮದಲ್ಲಿ ತಮ್ಮ ಹಿಂಬಾಲಕರನ್ನು ಹುಚ್ಚರು ಎಂದು ಕರೆಯುವ ಮೂಲಕ ಧಿರೇಂದ್ರ ಶಾಸ್ತ್ರಿ ವಿವಾದಕ್ಕೆ ಕಾರಣರಾಗಿದ್ದರು. ಇದರೊಂದಿಗೆ ಆ ಕಾರ್ಯಕ್ರಮ ಸ್ಥಳದ ಸಾಮರ್ಥ್ಯವನ್ನೂ ಮೀರಿ ಜನ ಸೇರಿದ್ದರಿಂದ ‘ಆರತಿ’ ಕಾರ್ಯಕ್ರಮವನ್ನು ರದ್ದುಪಡಿಸಿದ್ದರು.
“ಇಲ್ಲಿ ವಿಪರೀತ ಜನಸಂದಣಿ ಇದೆ, ಭಾರಿ ಜನಸಂದಣಿ ಇದೆ.. ಹುಚ್ಚು ಜನರು ಇಲ್ಲಿಗೆ ಆಗಮಿಸಿದ್ದಾರೆ” ಎಂದು ಧಿರೇಂದ್ರ ಶಾಸ್ತ್ರಿ ಜನಸಂದಣಿಯನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದರು.
ಧಿರೇಂದ್ರ ಶಾಸ್ತ್ರಿ ಅವರ ಹೇಳಿಕೆಯನ್ನು ಖಂಡಿಸಿದ್ದ ಬಿಹಾರ ಸಚಿವ ತೇಜ್ ಪ್ರತಾಪ್ ಯಾದವ್, “ಈ ಬಾಬಾ ಬಿಹಾರಿಗಳನ್ನು ನಿಂದಿಸುತ್ತಿದ್ದಾರೆ ಹಾಗೂ ಅವರನ್ನು ಹುಚ್ಚರು ಎಂದು ಕರೆಯುತ್ತಿದ್ದಾರೆ. ದೇಶವನ್ನು ವಿಭಜಿಸಲು ರಾಜಕೀಯ ನಡೆಯುತ್ತಿದೆ” ಎಂದು ಕಿಡಿ ಕಾರಿದ್ದರು.