ಎಂಜಿಎಂನಲ್ಲಿ 1992ರ ಪ್ರಾಕ್ತನ ಕಲಾ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಉಡುಪಿ, ಮೇ 29: ಉಡುಪಿ ಮಹಾತ್ಮಗಾಂಧಿ ಸ್ಮಾರಕ ಕಾಲೇಜಿನ 1992ನೇ ಸಾಲಿನ ಕಲಾ ವಿದ್ಯಾರ್ಥಿಗಳು ಮೂವತ್ತೊಂದು ವರುಷಗಳ ಅನಂತರ ಒಂದುಗೂಡಿದ ಪುನರ್ ಸ್ನೇಹ ಸಮ್ಮಿಲನ ಸಮಾವೇಶ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಿತು.
ಸಭಾ ವೇದಿಕೆಯಲ್ಲಿ ಗುರುವಂದನ ಕಾರ್ಯಕ್ರಮ ನಡೆಯಿತು. ನಿವೃತ್ತ ಹಿರಿಯ ಆಂಗ್ಲ ಪ್ರಾಧ್ಯಾಪಕರಾದ ಪ್ರೊ.ಎನ್.ಟಿ.ಭಟ್ಟರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮಿನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಸ್ಯಾಮ್ ಡೇನಿಯಲ್, ನಿವೃತ್ತ ಆಂಗ್ಲ ಭಾಷಾ ಪ್ರಾಧ್ಯಾಪಕಿ ಪ್ರೊ.ಪುಷ್ಪಲತಾ ಸಾಂತ್ಯಾರ, ನಿವೃತ್ತ ಪ್ರಾಂಶುಪಾಲೆ ಪ್ರೊ.ಸಂಧ್ಯಾ ನಂಬಿಯಾರ್, ನಿವೃತ್ತ ಹಿಂದಿ ಪ್ರಾಧ್ಯಾಪಕ ಡಾ.ಎಸ್.ಆರ್.ಶೇಟ್, ನಿವೃತ್ತ ಗ್ರಂಥಪಾಲಕ ಎಸ್.ಬಾಲು, ನಿವೃತ್ತ ರಾಜ್ಯ ಶಾಸ್ತ್ರ ಪ್ರಾಧ್ಯಾಪಕ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಪ್ರೊ.ರೋಹಿತ್ ಅಮೀನ್, ದೈಹಿಕ ನಿರ್ದೇಶಕಿ ಜಯಶ್ರೀ ನಾಯಕ್, ನಿವೃತ್ತ ಹಿಂದಿ ಪ್ರಾಧ್ಯಾಪಕಿ ಇಂದುಮತಿ, ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಚೆನ್ನ ಪೂಜಾರಿ, ಗೃಹ ವಿಜ್ಞಾನ ಪ್ರಾಧ್ಯಾಪಕಿ ಪೂರ್ಣಿಮಾ ಅಡಿಗ ಇವರುಗಳಿಗೆ ಅವರ ವಿದ್ಯಾರ್ಥಿಗಳಿಂದ ಗುರುವಂದನ ಸಂಮಾನ ನಡೆಯಿತು.
ಸಂಮಾನ ವೇದಿಕೆಯಲ್ಲಿ ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ಪದವಿ ಕಾಲೇಜಿನ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕಿ ಡಾ.ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳಾದ ವಿಶ್ವನಾಥ್ ಶ್ಯಾನುಭಾಗ್, ಗಾಯತ್ರಿ ಕಾರ್ಯಕ್ರಮ ಸಂಯೋಜಿಸಿದರು. ಡಾ.ಅರ್ಚನಾ ಕಾರ್ಯಕ್ರಮ ನಿರೂಪಿ ಸಿದರು. ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು.