ಬಿಜೆಪಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು 'ಗ್ಯಾರಂಟಿ' ಜಾರಿಗೆ ಆತುರ ಮಾಡುತ್ತಿದೆ: ಸಚಿವ ಡಾ.ಮಹದೇವಪ್ಪ

ಮೈಸೂರು, ಮೇ 30: ಬಿಜೆಪಿಯವರು ತಮ್ಮ ಆಡಳಿತದ ವೈಫಲ್ಯ ಮುಚ್ಷಿಕೊಳ್ಳಲು, ಜನರು ಅವರ ಮೇಲೆ ತಿರುಗಿಬಿದ್ದಿದ್ದನ್ನು ಬೇರೆಡೆಗೆ ತಿರುಗಿಸಲು ಜನರ ವಿಶ್ವಾಸ ಗಳಿಸಿ ಗೆದ್ದಿರುವ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಇಷ್ಟೊಂದು ಆತುರವಾಗಿ 'ಕಾಂಗ್ರೆಸ್ ಗ್ಯಾರಂಟಿ' ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಅವರಿಂದು ನಗರದ ಪುರಭವನದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಬಿಜೆಪಿ ಅಥವಾ ಇತರ ಯಾವುದೇ ರಾಜಕೀಯ ಪಕ್ಷಗಳಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಎಂದು ಗಡುವ ವಿಧಿಸುವ ನೈತಿಕತೆಯೂ ಇಲ್ಲ, ಅಧಿಕಾರವೂ ಇಲ್ಲ. ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷವಾಗಿ ಪ್ರಶ್ನೆಯನ್ನಷ್ಟೇ ಮಾಡಬಹುದು ಎಂದು ತಿರುಗೇಟು ನೀಡಿದರು.
ಬಿಜೆಪಿಯವರ ಆಡಳಿತ ವೈಪಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸಲು ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಆತುರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪ್ರಾರಂಭದಲ್ಲಿ ಅವರ ಮುಖ ಮುಚ್ಚಿಕೊಳ್ಳಲು ನಮ್ಮ ಮುಖಕ್ಕೆ ಎಂಜಲು ಹೊರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಆಡಳಿತ ವಿರೋಧಿ ಅಲೆ ಭ್ರಷ್ಟಾಚಾರವನ್ನು ಕಾಂಗ್ರೆಸ್ ವಿರೋಧಪಕ್ಷವಾಗಿ ಜನರಿಗೆ ಬಿಂಬಿಸಲು ಯಶಸ್ವಿಯಾಯಿತು. ಜೊತೆಗೆ ನಾವು ಬಂದರೆ ಸಂಕಷ್ಟದ ಬದುಕಿಗೆ ಏನು ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವು. ಜೊತೆಗೆ ಐದು ಗ್ಯಾರಂಟಿ ಕೊಟ್ಟಿದ್ದೇವೆ. ಮೊದಲು ಬದುಕಲು ಕಷ್ಟ ಇರುವ ಜನರಿಗೆ ಬದುಕುವ ವಾತಾವರಣ ನಿರ್ಮಾಣ ಮಾಡವುದು ಕಾಂಗ್ರೆಸ್ ಉದ್ದೇಶ. ಆಕ್ಸಿನ್ ಇದ್ದರೆ ಬದುಕು ಎನ್ನುವ ಮಟ್ಟಕ್ಕೆ ಬಿಜೆಪಿಯವರು ತಳ್ಳಿಬಿಟ್ಟಿದ್ದರು. ನಾವು ಆಕ್ಸಿಜನ್ ನೀಡಿ ಬದುಕಿಸಲು ಮುಂದಾಗಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭ ಸಚಿವರು ಬಸವೇಶ್ವರ ವೃತ್ತಕ್ಕೆ ತೆರಳಿ ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೂ ಪುಷ್ಪಾರ್ಚನೆ ಮಾಡಿದರು.
ದೇಶದ ಜನರಿಗೆ 15 ಲಕ್ಷ ಕೊಡುತ್ತೇವೆ ಎಂದು ಹೇಳಿರಲಿಲ್ಲ ಎಂದು ಬಿಜೆಪಿಯವರು ಯಾವ ಬಾಯಲ್ಲಿ ಹೇಳುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಿಡಿಕಾರಿದರು.
15 ಲಕ್ಷ ರೂ. ಕೊಡುತ್ತೇವೆ ಎಂಬ ಗ್ಯಾರಂಟಿಯನ್ನು ಜನರಿಗೆ ನೀಡಿರಲಿಲ್ಲ ಎಂಬ ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆಗೆ ಗರಂ ಆದ ಮಹದೇವಪ್ಪ, ನಾವು 15 ಲಕ್ಷ ರೂ. ಕೊಡುವುದಿಲ್ಲ ಎಂದು ದೇಶಕ್ಕೆ ಹೇಳಬೇಕು, ಇವರ ಚುನಾವಣಾ ಪ್ರಣಾಳಿಕೆಯಲ್ಲಿ ವಿದೇಶದಿಂದ ಕಪ್ಪು ಹಣ ತಂದು ಜನರ ಖಾತೆಗೆ 15 ಲಕ್ಷ ರೂ. ಕೊಡುತ್ತೇವೆ ಎಂದು ಹೇಳಿರಲಿಲ್ಲವೆ? ಬಿಜೆಪಿ ನಾಯಕರುಗಳ ಟಿ.ವಿ. ಮಾಧ್ಯಮ ಪತ್ರಿಕೆಗಳ ಹೇಳಿಕೆಯನ್ನು ತೆಗೆದು ನೋಡಲಿ. ನಾವು 15 ಲಕ್ಷ ಕೊಡುತ್ತೇವೆ ಎಂದು ಹೇಳಿರಲಿಲ್ಲ ಎಂದು ಯಾವ ಬಾಯಲ್ಲಿ ಹೇಳುತ್ತೀರಿ ಎಂದು ಬಪ್ರಶ್ನಿಸಿದರು.
ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಬಿಜೆಪಿಯವರು ಚರಿತ್ರೆಯನ್ನೆ ತಿರುಚಿದ್ದರು. ನಾವು ವಿರೋಧ ಪಕ್ಷದಲ್ಲಿ ಇದ್ದಾಗಲೂ ಇದಕ್ಕೆ ವಿರೋಧ ಮಾಡಿದ್ದೆವು. ಈಗ ಯಾವುದನ್ನು ತಿರುಚಿದ್ದಾರೆ ಅದನ್ನು ಸರಿ ಮಾಡುವ ಕೆಲಸವನ್ನು ಮಾಡುತ್ತೇವೆ. ಅಂಬೇಡ್ಕರ್, ಬಸವಣ್ಣ, ಕುವೆಂಪು, ನಾರಾಯಣಗುರು ಚರಿತ್ರೆಯನ್ನೆ ಸರಿಯಿಲ್ಲ ಎಂದು ಬಿಜೆಪಿಯವರು ಹೇಳಿದ್ದರು ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಯಾವುದೇ ಟಾರ್ಗೆಟ್ ಇಟ್ಟುಕೊಂಡಿಲ್ಲ, ನಮ್ಮ ಗುರಿ ರಾಜ್ಯದ 28 ಲೋಕಸಭಾ ಕ್ಷೇತ್ರವನ್ನು ಗೆಲ್ಲುವುದೆ ಆಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.