ಶಿವಮೊಗ್ಗ: ತಡವಾಗಿ ತಲುಪಿದ ರೈಲು; ರೋಸಿ ಹೋದ ಪ್ರಯಾಣಿಕರು

ಶಿವಮೊಗ್ಗ: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮಧ್ಯ ರಾತ್ರಿ ತಲುಪಿರುವ ಘಟನೆ ಮಂಗಳವಾರ ನಡೆದಿದೆ.
ಮೂರೂವರೆ ಗಂಟೆ ತಡವಾಗಿ ತಲುಪಿದ್ದು ಪ್ರಯಾಣಿಕರು ರೋಸಿ ಹೋಗಿದ್ದರು. ಅರಸೀಕೆರೆ, ಕಡೂರು, ಬೀರೂರು ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ರೈಲು ನಿಲ್ಲಿಸಲಾಗಿತ್ತು. ಪ್ರಯಾಣಿಕರಿಗೆ ತಡವಾಗಿದ್ದಕ್ಕೆ ಕಾರಣವೂ ತಿಳಿದಿಲ್ಲ.
ಬೆಂಗಳೂರಿನಿಂದ ಸಂಜೆ 5.15ಕ್ಕೆ ಹೊರಡುವ ರೈಲು ರಾತ್ರಿ 9.40ಕ್ಕೆ ಶಿವಮೊಗ್ಗ ನಿಲ್ದಾಣ ತಲುಪುತ್ತದೆ. ಆದರೆ ಮಂಗಳವಾರ ರಾತ್ರಿ ಮೂರೂವರೆ ಗಂಟೆ ತಡವಾಗಿ ಶಿವಮೊಗ್ಗ ನಿಲ್ದಾಣಕ್ಕೆ ಬಂದಿದೆ.
ಜನ ಶತಾಬ್ದಿ ರೈಲು ನಿಗದಿಯಂತೆ 5.15ಕ್ಕೆ ಬೆಂಗಳೂರಿನಿಂದ ಹೊರಟಿದೆ. ಆದರೆ ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಸುಮಾರು 37 ನಿಮಿಷ ರೈಲು ನಿಲ್ಲಿಸಲಾಗಿತ್ತು. ಕಡೂರು ನಿಲ್ದಾಣದಲ್ಲಿ 52 ನಿಮಿಷ, ಬೀರೂರಿನಲ್ಲಿ ಸುಮಾರು ಗಂಟೆಗಟ್ಟಲೆ ನಿಲುಗಡೆ ನೀಡಲಾಗಿತ್ತು. ರಾತ್ರಿ 11.56ಕ್ಕೆ ರೈಲು ತರೀಕೆರೆ ತಲುಪಿದೆ. ಮಧ್ಯರಾತ್ರಿ 12.41ಕ್ಕೆ ಭದ್ರಾವತಿ, ರಾತ್ರಿ 1.04ಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ತಲುಪಿದೆ.