ವಿಬಿಸಿಎಲ್ : ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ
ಬೆಂಗಳೂರಿನ ಕ್ರೈಸ್ಟ್ ವಿವಿ ಕಾನೂನು ಕಾಲೇಜು ತಂಡ ಚಾಂಪಿಯನ್

ಉಡುಪಿ : ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ತಮ್ಮನ್ನು ನಿರಂತರ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿ ಕೊಳ್ಳಬೇಕು. ಮತ್ತು ಯಾವುದಾದರೂ ಒಂದು ವಿಷಯದಲ್ಲಿ ಪರಿಣಿತಿ ಪಡೆದು ವೃತ್ತಿಯಲ್ಲಿ ಪ್ರಾಮಾಣಿಕತೆ, ಸಮಗ್ರತೆ ಹಾಗೂ ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದ್ದಾರೆ.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ನ್ಯಾಯವಾದಿ ಪಿ.ಶಿವಾಜಿ ಶೆಟ್ಟಿ ಸ್ಮರಣಾರ್ಥ 7ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಸಮಾಜದಲ್ಲಿರುವ ವಿವಿಧ ವಿಷಯಗಳು ಹಾಗೂ ಸಮಸ್ಯೆಗಳನ್ನು ವಿಭಿನ್ನ ದೃಷ್ಟಿಕೋನಗಳಲ್ಲಿ ನೋಡುವಂತಹ ಸಾಮರ್ಥ್ಯವನ್ನು ವಿದ್ಯಾರ್ಥಿ ವಕೀಲರು ಬೆಳೆಸಿಕೊಳ್ಳಬೇಕೆಂದು ನ್ಯಾ.ಇಂದಿರೇಶ್ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಸಿ.ಎಂ.ಅರ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥರಾದ ಪ್ರೊ.(ಡಾ.)ಟಿ.ಆರ್.ಸುಬ್ರಮಣ್ಯ ಮಾತನಾಡಿ, ನಾನಿ ಪಾಲ್ಕಿವಾಲ, ಎಂ.ಸಿ. ಚಾಗ್ಲಾ ಹಾಗೂ ಎಚ್.ಎಂ. ಶೀರವಾಯಿಯಂಥಹ ಮಹಾನ್ ವ್ಯಕ್ತಿಗಳ ವೃತ್ತಿ ಬದುಕಿನ ಅಧ್ಯಯನ ಕಾನೂನು ವಿದ್ಯಾರ್ಥಿಗಳಿಗೆ ದಾರಿದೀಪ ಎಂದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ಸರಕಾರ ಕೇಂದ್ರದ ಮುಖ್ಯಸ್ಥ ಪ್ರೊ.(ಡಾ.) ಸಿ.ಎಸ್. ಪಾಟೀಲ್ ಅವರು ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವಾದ ಕೌಶಲ್ಯ, ವಿಶ್ಲೇಷಣಾತ್ಮಕ ಸಾಮರ್ಥ್ಯ ಹಾಗೂ ಕಷ್ಟ ಪಟ್ಟು ಕೆಲಸ ಮಾಡುವ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದರು.
ಸ್ಪರ್ಧಾ ವಿಜೇತರು: ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ಶಾಲೆಯ ಅನಿರುದ್ದ್ ಹೆಚ್, ಸುನಿಧಿ ಎಸ್ ಹೆಗ್ಡೆ, ದಿಯಾ ಆಂಜನೇಯಲು ಹಾಗೂ ದೇವಾನಂದರನ್ನು ಒಳಗೊಂಡ ತಂಡ ಅಗ್ರಪ್ರಶಸ್ತಿ ಯನ್ನು ಗೆದ್ದುಕೊಂಡಿತು.
ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯ ನಿಕಿಲ್ ರಾಥೋಡ್, ರಮ್ಯ ಹೆಗ್ಡೆ, ರೋಷ್ಟಿತ್ ಶೆಟ್ಟಿ ಅವರನ್ನು ಒಳಗೊಂಡ ತಂಡ ದ್ವಿತೀಯ ಸ್ಥಾನ ಪಡೆಯಿತು.
ಸ್ಪರ್ಧಾಕೂಟದ ಅತ್ಯುತ್ತಮ ವಕೀಲೆಗಿರುವ ಬಹುಮಾನವನ್ನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ಶಾಲೆಯ ವಿದ್ಯಾರ್ಥಿನಿ ಸುನಿಧಿ ಎಸ್.ಹೆಗ್ಡೆ, ಅತ್ಯುತ್ತಮ ವಕೀಲರಿಗಿರುವ ಬಹುಮಾನವನ್ನು ಸಿ.ಎಂ.ಆರ್ ಕಾನೂನು ಶಾಲೆಯ ಗೌರವ ಶಶಿಥಲ್, ತೀರ್ಪು ಬರವಣಿಗೆ ಸ್ಪರ್ಧೆಯಲ್ಲಿ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯ ಕಾನೂನು ಶಾಲೆಯ ಅನಿರುದ್ದ್ ಪ್ರಥಮ ಸ್ಥಾನ ಹಾಗೂ ತುಮಿಳುನಾಡು ಅಂಬೇಡ್ಕರ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನಾದಿರಾ ಬಾನು ದ್ವಿತೀಯ ಬಹುಮಾನ ಗೆದ್ದುಕೊಂಡರು. ಉತ್ತಮ ಸ್ಮಾರಕ ಬಹುಮಾನ ಬೆಂಗಳೂರಿನ ಕೆ.ಎಲ್.ಇ ಕಾನೂನು ಕಾಲೇಜಿಗೆ ದೊರಕಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ನಿರ್ದೇಶಕಿ ಪ್ರೊ.(ಡಾ.) ನಿರ್ಮಲಾ ಕುಮಾರಿ ಕೆ. ವಹಿಸಿದ್ದರು. ಪ್ರಾಂಶುಪಾಲ ಪ್ರೊ. ರಘನಾಥ್ ಕೆ.ಎಸ್ ಸ್ವಾಗತಿಸಿ, ಡಾ.ಜಯಮೋಲ್ ಪಿ.ಎಸ್ ವಂದಿಸಿದರು. ಕಾರ್ಯಕ್ರಮದ ಸಂಯೊಜಕಿ ಸುರೇಖಾ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.