ಶಿಕ್ಷಣ ತಜ್ಞ ಆಗಾ ಸುಲ್ತಾನ್ ಮುರ್ತುಝಾಗೆ ಒಲಿಯಲಿದೆಯೆ ವಿಧಾನಪರಿಷತ್ ಸದಸ್ಯತ್ವ?
ಶಿಯಾ ಪಂಗಡಕ್ಕೆ ಮನ್ನಣೆ ಸಾಧ್ಯತೆ

ಬೆಂಗಳೂರು: ಕಳೆದ ಮೂರುವರೆ ದಶಕಗಳಿಂದ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿರುವ ಶಿಕ್ಷಣ ತಜ್ಞ, ಶಿಯಾ ಮುಸ್ಲಿಮ್ ನಾಯಕ ಆಗಾ ಸುಲ್ತಾನ್ ಮುರ್ತುಝಾ ಅವರಿಗೆ ವಿಧಾನಪರಿಷತ್ ಸದಸ್ಯತ್ವ ಸಿಗುವ ಸಾಧ್ಯತೆಗಳು ಹೆಚ್ಚಾಗಿದೆ. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಈ ಬಾರಿ ನಿರ್ಲಕ್ಷಿತ ಶಿಯಾ ಪಂಗಡಕ್ಕೆ ಮನ್ನಣೆ ನೀಡಲಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಶಿಯಾ ಮುಸ್ಲಿಮ್ ಪಂಗಡದಲ್ಲಿ ತನ್ನ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಂದಾಗಿ ಗುರುತಿಸಿಕೊಂಡಿರುವ ಆಗಾ ಸುಲ್ತಾನ್ ಅವರಿಗೆ ಶಿಕ್ಷಣ ಕ್ಷೇತ್ರ, ಸಾಮಾಜಿಕ ಕ್ಷೇತ್ರದಿಂದ ವಿಧಾನಪರಿಷತ್ಗೆ ನಾಮ ನಿರ್ದೇಶನ ಅಥವಾ ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯಲಿರುವ ಚುನಾವಣೆಯಲ್ಲಿ ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ವಿಧಾನಪರಿಷತ್ತಿನಲ್ಲಿ ಖಾಲಿಯಿರುವ ಎಂಟು ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ವಿಧಾನಸಭೆಯಿಂದ ಚುನಾಯಿಸಬಹುದು. ಸರಕಾರದಿಂದ ಶಿಕ್ಷಣ, ಸಾಮಾಜಿಕ ಸೇವೆ, ಸಾಹಿತ್ಯ ಮತ್ತು ಕಲೆ ಈ ಕ್ಷೇತ್ರಗಳಿಂದ ಮೂವರು ಸದಸ್ಯರನ್ನು ನಾಮ ನಿರ್ದೇಶನ ಮಾಡಬಹುದಾಗಿದೆ. ಇನ್ನುಳಿದಂತೆ ಎರಡು ಸ್ಥಾನಗಳು ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಬೇಕಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ನ ಸದಸ್ಯರಾಗಿ ಎರಡು ಅವಧಿ(1996-2002)ಗೆ ಸೇವೆ ಸಲ್ಲಿಸಿರುವ ಆಗಾ ಸುಲ್ತಾನ್, ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯ(1998-2001 ಹಾಗೂ 2007-2010)ರವರೆಗೆ ಸೇವೆ ಸಲ್ಲಿಸಿದ್ದಾರೆ. 2004 ರಿಂದ 2006ರವೆರಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ನೈಋತ್ಯ ವಲಯ ಸಮಿತಿಯ ಸದಸ್ಯ ಹಾಗೂ ಭಾರತದ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಂಸ್ಥೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಆಗಾ ಸುಲ್ತಾನ್, 80ರ ದಶಕದಿಂದಲೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. 1977ರಲ್ಲಿ ಜಯಮಹಲ್ ಯೂತ್ ಕ್ಲಬ್ ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ನಾಲ್ಕು ವರ್ಷ ಕಾರ್ಯನಿರ್ವಹಿಸಿದ್ದಾರೆ. ಯೂನಿಟಿ ಎಜುಕೇಷನ್ ಸೊಸೈಟಿ, ಇಮಾಮಿಯಾ ಇಂಗ್ಲಿಷ್ ಹೈಸ್ಕೂಲ್, ಪದವಿ ಪೂರ್ವ ಕಾಲೇಜು, ಎಂ.ಎ.ರಝಾ ಪ್ರಥಮ ದರ್ಜೆ ಕಾಲೇಜು ಆರಂಭಿಸಿ ಶೈಕ್ಷಣಿಕ ಕ್ರಾಂತಿಯನ್ನೆ ಮಾಡಿದರು.
ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಕ್ರಿಯ ಸದಸ್ಯರಾಗಿರುವ ಆಗಾ ಸುಲ್ತಾನ್, ತಮ್ಮ ಕಾರ್ಯಶೈಲಿಯಿಂದ ಜನಜನಿತರಾದವರು. ರಾಜ್ಯದ ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂ ಖಾನ್ ಅವರು ಇವರ ಕಾರ್ಯವನ್ನು ಮೆಚ್ಚಿ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯಕಾರಿ ಕೌನ್ಸಿಲ್ ಸದಸ್ಯರನ್ನಾಗಿ ನೇಮಕ ಮಾಡಿದ್ದರು.
2001ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಹಾಗೂ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್, ಎರಡನೆ ಅವಧಿಗೆ ಇವರನ್ನು ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರನ್ನಾಗಿ ಮಾಡಿದರು.
ಆಗಾ ಸುಲ್ತಾನ್ ಅವರು ಕೆಪಿಸಿಸಿ ವಕ್ತಾರ, ಶಿಷ್ಟಾಚಾರ ಸಮಿತಿಯ ಸದಸ್ಯ, ಅಲ್ಪಸಂಖ್ಯಾರ ಘಟಕದ ಉಪಾಧ್ಯಕ್ಷ, ಪಕ್ಷದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ, ಚುನಾವಣಾ ಪ್ರಣಾಳಿಕೆ ಸಮಿತಿ ಸದಸ್ಯ, ಮಾಧ್ಯಮ ಹಾಗೂ ಪ್ರಚಾರ ಸಮಿತಿ ಸದಸ್ಯ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ವೇಳೆ ವಿವಿಧ ಕ್ಷೇತ್ರಗಳ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೆಪಿಸಿಸಿ ವೈದ್ಯರ ಘಟಕದ ಮೂಲಕ ಆರಂಭಿಸಿದ ಆರೋಗ್ಯ ಹಸ್ತ ಕಾರ್ಯಕ್ರಮದ ಸಂಚಾಲಕರಾಗಿಯೂ ಆಗಾ ಸುಲ್ತಾನ್ ಕಾರ್ಯ ನಿರ್ವಹಿಸಿದ್ದಾರೆ.
'ಹುಸೇನ್ ಡೇ' ಎಂಬ ಕಾರ್ಯಕ್ರಮದ ಮೂಲಕ ಇಡೀ ಜಗತ್ತಿನಲ್ಲಿ ಆಗಾ ಸುಲ್ತಾನ್ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ತಾವು ಹಾಗೂ ತಮ್ಮ ಕುಟುಂಬ ಸದಸ್ಯರು ಸೇರಿಕೊಂಡು 'ಹೂ ಇಸ್ ಹುಸೇನ್' ಎಂಬ ಸಾಮಾಜಿಕ ಸೇವಾ ಸಂಸ್ಥೆಯ ಮೂಲಕ ಬಡವರಿಗೆ ಆರೋಗ್ಯ, ಶೈಕ್ಷಣಿಕ ನೆರವು ಒದಗಿಸುತ್ತಿದ್ದಾರೆ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಶಿಯಾ ಪಂಗಡದ ಹಾಲಿ ಶಾಸಕ, ವಿಧಾನಪರಿಷತ್ ಸದಸ್ಯ ಅಥವಾ ಲೋಕಸಭಾ ಸದಸ್ಯ ಇಲ್ಲ. ಸಾಮಾಜಿಕ ನ್ಯಾಯದ ಪರವಾಗಿರುವ ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಈ ಬಾರಿ ಶಿಯಾ ಪಂಗಡಕ್ಕೆ ಆದ್ಯತೆ ನೀಡುವ ಮೂಲಕ ನೈಜ ಅರ್ಥದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತು ಹಿಡಿಯುತ್ತಾರೆ ಎಂಬ ಬಲವಾದ ವಿಶ್ವಾಸವಿದೆ.
ಆಗಾ ಸುಲ್ತಾನ್ ಮುರ್ತುಝಾ, ಶಿಕ್ಷಣ ತಜ್ಞ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ