ಸುರತ್ಕಲ್ ಟೋಲ್ ರದ್ದುಗೊಂಡರೂ ಬಸ್ ಪ್ರಯಾಣಿಕರಿಂದ ವಸೂಲಿ ತಪ್ಪಿಲ್ಲ ...
ಟೋಲ್ ಗೇಟ್ ವಿರುದ್ಧದ ಹೋರಾಟ ಸಮಿತಿಯ ಮುಖಂಡ ಬಿ.ಕೆ.ಇಮ್ತಿಯಾಜ್ ಆರೋಪ

ಮಂಗಳೂರು,ಜೂ.1: ಸುರತ್ಕಲ್ ಟೋಲ್ ಗೇಟ್ ಮುಚ್ಚಿ ಇಂದಿಗೆ 6 ತಿಂಗಳಾದರೂ ಟೋಲ್ ಹೆಸರಲ್ಲಿ ಪ್ರಯಾಣಿಕರಿಂದ ಪ್ರತಿ ಟಿಕೇಟಿನ ಮೇಲೆ 5 ರೂ ಹೆಚ್ಚುವರಿಯಾಗಿ ಪಡೆಯುತ್ತಿದ್ದ ಹಣವನ್ನು ಖಾಸಗಿ ಬಸ್ ಅಪರೇಟರುಗಳು ಇನ್ನೂ ವಸೂಲು ಮಾಡುತ್ತಿದ್ದಾರೆ ಎಂದು ಟೋಲ್ ಗೇಟ್ ವಿರುದ್ಧದ ಹೋರಾಟ ಸಮಿತಿಯ ಮುಖಂಡ ಬಿ.ಕೆ.ಇಮ್ತಿಯಾಜ್ ಆಗ್ರಹಿಸಿದ್ದಾರೆ.
ಕಳೆದ 6 ತಿಂಗಳಿಂದ ಪ್ರಯಾಣಿಕರ ಜೇಬಿನಿಂದ ಸುಲಿಗೆ ಮಾಡಿದ ಹಣದ ಲೆಕ್ಕ ಇದೆಯಾ? ಜನರ ಹೋರಾಟದಿಂದ ಟೋಲ್ ಗೇಟ್ ಬಂದ್ ಆಗಿರೋದು ಇದರ ಪ್ರಯೋಜನ ಬಸ್ಸಲ್ಲಿ ಹೋಗುವ ಸಾಮಾನ್ಯ ಜನರಿಗೂ ಸಿಗಬೇಕು. ಟೋಲ್ ಮುಚ್ಚಿದ ಕೂಡಲೇ ಬಸ್ ದರ ಇಳಿಸಲು ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯನ್ನು ಒತ್ತಾಯ ಮಾಡಿದ್ದೆವು. ಆದರೆ 6 ತಿಂಗಳಾದರೂ ಸಾರಿಗೆ ಪ್ರಾಧಿಕಾರದ ಸಭೆ ನಡೆದಿಲ್ಲ. ಬಸ್ ದರನೂ ಇಳಿದಿಲ್ಲ. ರಾಜ್ಯ ಸರಕಾರ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಪ್ರಯಾಣದ ಕೊಡುಗೆ ನೀಡಿದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಆಡಳಿತದಲ್ಲಿದ್ದಾಗಲೇ ಈ ಬಗ್ಗೆ ಏನೂ ಮಾಡದ ಪ್ರತಿಪಕ್ಷ ಬಿಜೆಪಿ ಟೋಲ್ ಲೂಟಿಯ ಪರವಾಗಿಯೇ ಇಂದಿಗೂ ಇದೆ. ಹಾಗಾಗಿ ಪ್ರತಿಪಕ್ಷ ಬಿಜೆಪಿಯಿಂದ ನಿರೀಕ್ಷೆ ಮಾಡಿದರೆ ಮೂರ್ಖತನವಾದೀತು ಎಂದು ಹೇಳಿದ್ದಾರೆ.
ಇದೀಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕ ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿಯ ಜೊತೆಯಲ್ಲಿ ಟೋಲ್ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿತ್ತು. ಟೋಲ್ ತೆರವಿನ ಲಾಭವನ್ನು ಸಾಮಾನ್ಯ ಪ್ರಯಾಣಿಕರಿಗೆ ದೊರಕಿಸಿಕೊಡುವ ಜವಾಬ್ದಾರಿಯನ್ನು ಜಿಲ್ಲಾ ಕಾಂಗ್ರೆಸ್ ವಹಿಸಬೇಕು.+
ಆ ಮೂಲಕ ಟೋಲ್ ಹೋರಾಟದಲ್ಲಿ ಕಾಂಗ್ರೆಸ್ಸಿಗೆ ನೈಜ ಬದ್ಧತೆ ಇತ್ತು ಎಂಬುದನ್ನು ತೋರಿಸಬೇಕು. ಇದಕ್ಕೂ ಹೋರಾಟವೇ ಮಾಡಬೇಕೆಂದಾದರೆ ಜಿಲ್ಲೆಯ ಜನರಿಗೆ ಬದಲಾವಣೆಯ ಹಿಡುವಳಿ ಶೂನ್ಯ ಎಂದೇ ಭಾವಿಸಿ ಹೋರಾಟವನ್ನೇ ಮುಂದುವರಿಸುತ್ತೇವೆ ಎಂದು ಬಿ.ಕೆ ಇಮ್ತಿಯಾಝ್ ತಿಳಿಸಿದ್ದಾರೆ.