ಕುಂದಾಪುರ: ಸಾಕು ನಾಯಿ ಮೇಲೆ ಚಿರತೆ ದಾಳಿ

ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಮನೆಯಂಗಳಕ್ಕೆ ಬಂದ ಚಿರತೆ ಸಾಕು ನಾಯಿ ಮೇಲೆ ದಾಳಿ ನಡೆಸಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಮಾಲಾಡಿ ನಿವಾಸಿ ಸತೀಶ್ ದೇವಾಡಿಗ ಅವರ ನಿವಾಸದ ಬಳಿ ಮುಂಜಾನೆ 5.30 ರ ವೇಳೆಗೆ ಚಿರತೆ ಬಂದಿದ್ದು ಸಾಕುನಾಯಿ ಹೊತ್ತೊಯ್ಯಲು ಯತ್ನಿಸಿದೆ. ಮನೆಯ ಮಹಿಳೆ ಸಮೀಪದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದು ನಾಯಿ ಬೊಗಳುವ ಶಬ್ದ ಕೇಳಿ ಹೊರಬಂದಾಗ ನಾಯಿ ಬಿಟ್ಟು ಚಿರತೆ ಹಾಡಿಯತ್ತ ಓಡಿ ಮರೆಯಾಗಿದೆ. ಚಿರತೆ ದಾಳಿಯಿಂದ ನಾಯಿ ಕುತ್ತಿಗೆ ಭಾಗಕ್ಕೆ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದೆ.
ಇಲ್ಲಿನ ಮಾಲಾಡಿ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಪಕ್ಕ ಮತ್ತೆ ಚಿರತೆ ಆಗ್ಗಾಗೆ ಪ್ರತ್ಯಕ್ಷವಾಗುತ್ತಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಕಳೆದ ವಾರವಷ್ಟೇ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನಿಟ್ಟಿದೆ. ಮಾಲಾಡಿ ಆಸುಪಾಸಿನಲ್ಲಿ (ಇಲ್ಲಿನ ತೋಪಿನಲ್ಲಿ) ಕಳೆದ 4 ವರ್ಷದಲ್ಲಿ ಈ ತೋಪಿನಲ್ಲಿಟ್ಟ ಬೋನಿಗೆ ಬಿದ್ದ 7 ಚಿರತೆಗಳು ಸೆರೆಯಾಗಿದೆ.
Next Story