1981ರಲ್ಲಿ 10 ಮಂದಿ ದಲಿತರ ಹತ್ಯೆ ಪ್ರಕರಣ: 90 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಫಿರೋಝಾಬಾದ್: 1981ರಲ್ಲಿ ಹತ್ತು ದಲಿತರನ್ನು ಹತ್ಯೆಗೈದ 90 ವರ್ಷದ ವ್ಯಕ್ತಿಯೊಬ್ಬನನ್ನು ಫಿರೋಝಾಬಾದ್ ಜಿಲ್ಲಾ ನ್ಯಾಯಾಲಯ ಗುರುವಾರ ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.
ದೋಷಿ ಗಂಗಾ ದಯಾಳ್ಗೆ 55,000 ರೂ. ದಂಡವನ್ನು ನೀಡುವಂತೆ ತಿಳಿಸಲಾಗಿದೆ.
42 ವರ್ಷಗಳ ಹಿಂದೆ ನಡೆದ ಈ ಹತ್ಯೆ ಘಟನೆಯು ದೇಶಾದ್ಯಂತ ಆಘಾತವನ್ನುಂಟು ಮಾಡಿತ್ತು.
ದಂಡ ಪಾವತಿಸಲು ತಪ್ಪಿದಲ್ಲಿ ಆರೋಪಿ 13 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
1981ರಲ್ಲಿ ಸದುಪುರ ಗ್ರಾಮದಲ್ಲಿ ಹಿಂಸಾಚಾರ ನಡೆದಿದ್ದು, 10 ಮಂದಿ ನಿರ್ದಯವಾಗಿ ಸಾವನ್ನಪ್ಪಿ 2 ಮಂದಿ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.ತನಿಖೆಯಲ್ಲಿ 10 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಐಪಿಸಿಯ ಸೆಕ್ಷನ್ 302 ಹಾಗೂ 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸರಕಾರಿ ವಕೀಲ ರಾಜೀವ್ ಉಪಾಧ್ಯಾಯ ಹೇಳಿದ್ದಾರೆ.
ಆರಂಭದಲ್ಲಿ, ಪ್ರಕರಣವು ಮೈನ್ಪುರಿಯಲ್ಲಿ ವಿಚಾರಣೆಗೆ ಹೋಯಿತು ನಂತರ, ಫಿರೋಝಾಬಾದ್ ಅನ್ನು ಪ್ರತ್ಯೇಕ ಜಿಲ್ಲೆಯಾಗಿ ರಚನೆ ಮಾಡಿದ ನಂತರ ಪ್ರಕರಣವನ್ನು ಫಿರೋಝಾಬಾದ್ನ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು ಎಂದು ವಕೀಲ ಉಪಾಧ್ಯಾಯ ಹೇಳಿದರು.
''ಹೈಕೋರ್ಟ್ ಆದೇಶದ ಮೇರೆಗೆ ಫಿರೋಝಾಬಾದ್ ಜಿಲ್ಲೆ ರಚನೆಯಾದ ನಂತರ ಪ್ರಕರಣವನ್ನು ಫಿರೋಝಾಬಾದ್ಗೆ ವರ್ಗಾಯಿಸಲಾಯಿತು. ಜೀವಂತವಾಗಿರುವ ಏಕೈಕ ಆರೋಪಿ ಗಂಗಾ ಸಹಾಯ್ಗೆ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 55,000 ರೂ. ದಂಡ ವಿಧಿಸಿತು ಈ ನಿರ್ಧಾರ ಇಡೀ ದೇಶಕ್ಕೆ ಸಂದೇಶ ರವಾನಿಸಲಿದೆ'' ಎಂದು ವಕೀಲರು ಹೇಳಿದ್ದಾರೆ.