ಒಡಿಶಾದಲ್ಲಿ ರೈಲು ಅಪಘಾತ: ಮೃತರ ಸಂಖ್ಯೆ 261ಕ್ಕೇರಿಕೆ; 900 ಕ್ಕೂ ಹೆಚ್ಚು ಮಂದಿಗೆ ಗಾಯ

ಬಾಲಾಸೋರ್(ಒಡಿಶಾ): ಒಡಿಶಾದ ಬಾಲಾಸೋರ್ ನಲ್ಲಿ ಮೂರು ರೈಲುಗಳ ನಡುವೆ ನಡೆದಿರುವ ಅಪಘಾತದಲ್ಲಿ ಸಾವನ್ನಪ್ಪಿರುವ ಸಂಖ್ಯೆ 261ಕ್ಕೆ ಏರಿದೆ ಎಂದು ಆಗ್ನೇಯ ರೈಲ್ವೇಸ್ ಶನಿವಾರ ತಿಳಿಸಿದೆ.
ಗಾಯಗೊಂಡಿರುವ ಪ್ರಯಾಣಿಕರುಗಳನ್ನು ರಾಜ್ಯದ ಗೋಪಾಲಪುರ, ಖಾಂತಪಾರಾ, ಬಾಲಾಸೋರ್, ಭದ್ರಕ್ ಹಾಗೂ ಸೊರೊ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.
ಈ ಭಯಾನಕ ಘಟನೆಯಲ್ಲಿ 900ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಡೀ ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಶಾಲಿಮರ್-ಚೆನ್ನೈ ಕೋರಮಂಡಲ ಎಕ್ಸ್ಪ್ರೆಸ್ ರೈಲಿನ 10 ರಿಂದ 12 ಬೋಗಿಗಳು ಹಳಿತಪ್ಪಿ, ಎದುರಿನ ಹಳಿಗೆ ಬಿದ್ದು ದುರಂತ ಸಂಭವಿಸಿದೆ. ಇದೇ ವೇಳೆ ಬೆಂಗಳೂರು- ಹೌರಾ ಸೂಪರ್ಫಾಸ್ಟ್ ರೈಲು ಹಳಿ ತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಈ ರೈಲಿನ ಮೂರು- ನಾಲ್ಕು ಬೋಗಿಗಳೂ ಹಳಿ ತಪ್ಪಿದವು. ಗೂಡ್ಸ್ ರೈಲು ಕೂಡಾ ಈ ದುರಂತದಲ್ಲಿ ಅಪಘಾತಕ್ಕೀಡಾಗಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವುದಾಗಿ ಶನಿವಾರ ಘೋಷಿಸಿದ್ದಾರೆ.
"ಈ ದುರಂತ ದುರದೃಷ್ಟಕ ಹಾಗೂ ತಕ್ಷಣವೇ ಪರಿಹಾರ ಕಾರ್ಯ ಆರಂಭವಾಗಿದೆ. ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ಮತ್ತು ಸಣ್ಣ ಪುಟ್ಟ ಗಾಯಗಳಾದವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಇಲಾಖೆ ಈಗಾಗಲೇ ಘೋಷಿಸಿದೆ" ಎಂದು ಅವರು ವಿವರಿಸಿದ್ದಾರೆ.
ಶುಕ್ರವಾರ ಮುಸ್ಸಂಜೆ ವೇಳೆಗೆ ನಡೆದ ಘಟನೆಯಲ್ಲಿ 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿವರಿಸಿದ್ದಾರೆ. ಈ ಭಯಾನಕ ಘಟನೆ ಹಿನ್ನೆಲೆಯಲ್ಲಿ ಶನಿವಾರ ರಾಜ್ಯದಲ್ಲಿ ಒಂದು ದಿನದ ಶೋಕಾಚರಣೆಯನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. ರಾಜ್ಯ ದಿನಾಚರಣೆಯ ಎಲ್ಲ ಸಮಾರಂಭಗಳನ್ನು ರದ್ದುಪಡಿಸಲಾಗಿದೆ.