ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿಸ್ತರಿಸಲು ಎಸ್ ಎಫ್ ಐ ಆಗ್ರಹ

ಬೆಂಗಳೂರು: ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ನ್ನು ನೀಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಂಘಟನೆಯು ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಆದರೆ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಈ ಬೇಡಿಕೆಯನ್ನು ಈಡೇರಿಸದೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ಬಿಡುಗಡೆಗೊಳಿಸಿರುವ ಎಸ್ ಎಫ್ ಐ, ಕರ್ನಾಟಕ ರಾಜ್ಯ ಸರ್ಕಾರ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಪಾಸ್ನ್ನು ಮತ್ತು ಇತರರಿಗೆ ರಿಯಾಯಿತಿ ದರದಲ್ಲಿ ಬಸ್ಪಾಸ್ ನೀಡುವ ತಿರ್ಮಾನವನ್ನು ಮಾಡಿ ಈಗಾಗಲೇ ನೀಡುತ್ತಿದೆ. ಇದು ಸ್ವಾಗತಾರ್ಹ. ಆದರೆ ಇತರೆ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸುವಂತಹ ಕೆಲಸವು ಇದಾಗುತ್ತದೆ. ಆದ್ದರಿಂದ ಈ ಹಿಂದಿನ ಸರ್ಕಾರದ ನಡೆಯನ್ನು ನಿಲ್ಲಿಸಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವಿತರಣೆಗೆ ಈಗಿನ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದೆ.
ರಾಜ್ಯದಲ್ಲಿ ಈಗಾಗಲೇ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ವಿದ್ಯಾರ್ಥಿಗಳು ಪ್ರಸಕ್ತ ವರ್ಷ ಶಾಲಾ-ಕಾಲೇಜುಗಳಲ್ಲಿ ಅನಧಿಕೃತ ಶುಲ್ಕ ಏರಿಕೆ, ಕೋವಿಡ್ ನಂತರದ ಆರ್ಥಿಕ ಸಂಕಷ್ಟ ಮತ್ತು ಬೆಲೆ ಏರಿಕೆಗಳಿಂದ ರೈತ, ಕೃಷಿ-ಕೂಲಿಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುವುದರ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನು ಮೂಟಕುಗೊಳಿಸಿ ಕೂಲಿ ಕೆಲಸ ಅರಸಿ ದೊಡ್ಡ ದೊಡ್ಡ ನಗರ ಪ್ರದೇಶಗಳತ್ತ ಹೋಗುವಂತಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದರೆ ಹೆಚ್ಚು ಅನುಕೂಲ ಆಗುತ್ತದೆ. ಯಾವುದೇ ಸರ್ಕಾರ ಆದರೂ ಕೂಡಾ ವಿದ್ಯಾರ್ಥಿ ಸಮುದಾಯದ ಮಧ್ಯೆ ತಾರತಮ್ಯ ಹುಟ್ಟು ಹಾಕುವ ಪ್ರವೃತ್ತಿಯನ್ನು ಮಾಡದೆ ವಿದ್ಯಾರ್ಥಿ ಸಮುದಾಯಕ್ಕೆ ದೂರಕಬೇಕಾದ ಎಲ್ಲಾ ಸೌಲಭ್ಯಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನವಾಗಿ ದೂರಕುವಂತೆ ಮಾಡಬೇಕು ಒತ್ತಾಯಿಸಿದೆ.
ರಾಜ್ಯದಲ್ಲಿ ಬಸ್ ಪಾಸ್ ಪ್ರಯಾಣದರ ಇತರೆ ರಾಜ್ಯಗಳಿಗಿಂತ ದುಬಾರಿಯಾಗಿದೆ. ಜೊತೆಗೆ ಅನೇಕ ಹಳ್ಳಿಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯವು ಇಲ್ಲ ಇದನ್ನು ಸರಿಪಡಿಸಲು ಮುಂದಾಗಬೇಕು ಹಾಗೂ ಬಸ್ ಪಾಸ್ ದೂರದ ಮಿತಿಯನ್ನು 60ಕೀ ಮೀ ಗೆ ಬದಲಾಗಿ 100 ಕೀ ಮಿ ವ್ಯಾಪ್ತಿಗೆ ಹೆಚ್ಚಿಸಬೇಕು. ಒಂದು ವೇಳೆ ರಾಜ್ಯ ಸರ್ಕಾರ ಉಚಿತ ಬಸ್ ಪಾಸ್ ಬೇಡಿಕೆಯನ್ನು ಈಡೇರಿಸದಿದ್ದರೆ ರಾಜ್ಯದಾದ್ಯಂತ ಎಸ್ ಎಫ್ ಐ ನೇತೃತ್ವದಲ್ಲಿ ವಿದ್ಯಾರ್ಥಿಗಳೊಂದಿಗೆ ಹೋರಾಟ ಮಾಡಿ ಸಾಮೂಹಿಕವಾಗಿ ಬಸ್ ಹತ್ತಿ ಟಿಕೆಟ್ ಪಡೆಯದೇ ಪ್ರಯಾಣ ಮಾಡುವ ವಿನೂತನ ಹೋರಾಟವನ್ನು ಮಾಡಬೇಕಾಗುತ್ತದೆಂದು ಪ್ರಕಟನೆಯಲ್ಲಿ ಸರ್ಕಾರವನ್ನು ಎಚ್ಚರಿಸಿದೆ.