ಬೆಂಗಳೂರು: ಪತ್ನಿಯನ್ನು ಕೊಲೆಗೈದು ಕಥೆ ಕಟ್ಟಿದ್ದ ಪತಿ ಬಂಧನ

ಬೆಂಗಳೂರು, ಜೂ.3: ಪತ್ನಿಯನ್ನು ಕೊಲೆಗೈದು, ಬಳಿಕ ಆಸ್ಪತ್ರೆಗೆ ಕರೆ ತಂದು ‘ಆಕೆ ಮಾತನಾಡುತ್ತಿಲ್ಲ’ ಎಂದು ಕಥೆ ಕಟ್ಟಿದ್ದ ಪತಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶರತ್ ಎಂದು ಗುರುತಿಸಲಾಗಿದೆ. ಪ್ರಿಯಾ (19) ಕೊಲೆಯಾದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂ.1ರಂದು ಯಶವಂತಪುರದ ಖಾಸಗಿ ಆಸ್ಪತ್ರೆಗೆ ಪತ್ನಿಯ ಮೃತದೇಹದೊಂದಿಗೆ ಬಂದಿದ್ದ ಆರೋಪಿ ಶರತ್ ‘ತನ್ನ ಪತ್ನಿ ಮಾತನಾಡುತ್ತಿಲ್ಲ’ ಎಂದು ಆಸ್ಪತ್ರೆಯಲ್ಲಿ ಗೋಳಾಡುತ್ತಿದ್ದ. ಈ ಬಗ್ಗೆ ವೈದ್ಯರು ಪರಿಶೀಲನೆ ನಡೆಸಿದಾಗ ಆಕೆ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಪತ್ನಿ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ ಬಳಿಕವೂ ಆರೋಪಿ ಶರತ್ ಜೋರಾಗಿ ಗೋಳಾಡತೊಡಗಿದ್ದಾನೆ. ಈ ಸಂಬಂಧ ಆಸ್ಪತ್ರೆ ಸಿಬ್ಬಂದಿ ಅನುಮಾನಾಸ್ಪದ ಸಾವು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಮೃತ ಪ್ರಿಯಾಳ ತಾಯಿ ನೀಡಿದ ದೂರಿನನ್ವಯ ಯಶವಂತಪುರ ಠಾಣಾ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆಗೆ ಮುಂದಾಗಿದ್ದರು.
ಆರೋಪಿ ಶರತ್ಗೆ ಪ್ರಿಯಾ ಎರಡನೇ ಹೆಂಡತಿ. ಮದುವೆಯಾಗಿ ಮೊದಲ ಹೆಂಡತಿ ಇದ್ದರೂ ಶರತ್ ಎರಡನೇ ಮದುವೆಯಾಗಿದ್ದ. ಅಲ್ಲದೆ ಆರೋಪಿ ಶರತ್ ಪತ್ನಿ ಪ್ರಿಯಾಳೊಂದಿಗೆ ಯಶವಂತಪುರದ ಸಂಜಯ್ ಗಾಂಧಿ ನಗರದಲ್ಲಿ ವಾಸವಿದ್ದರು. ಇನ್ನು ಪ್ರಿಯಾ ಹಾಗೂ ಶರತ್ ನಡುವೆ ಎರಡು ಮದುವೆ ವಿಚಾರಕ್ಕೆ ಕೆಲ ದಿನಗಳಿಂದ ಜಗಳವಾಗುತ್ತಿತ್ತು ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ಜೂ.1ರ ಸಂಜೆ ಮತ್ತೆ ಇದೇ ವಿಚಾರವಾಗಿ ಜಗಳ ಆರಂಭವಾಗಿ ಶರತ್ ಪ್ರಿಯಾಳ ಕತ್ತು ಹಿಸುಕಿದ್ದಾನೆ. ಈ ವೇಳೆ ಪ್ರಿಯಾಗೆ ಉಸಿರಾಟದ ತೊಂದರೆಯುಂಟಾಗಿ ಸಾವನ್ನಪ್ಪಿದ್ದಾಳೆ. ಇದರಿಂದ ಗಾಬರಿಗೊಂಡ ಶರತ್ ಘಟನೆಯನ್ನು ಮುಚ್ಚಿಡಲು ಪತ್ನಿಯ ಮೃತದೇಹವನ್ನು ಆಸ್ಪತ್ರೆಗೆ ತಂದು ಗೋಳಾಡುವ ನಾಟಕವಾಡಿದ್ದಾನೆ. ಶರತ್ನ ನಾಟಕ ಕಂಡು ಪೊಲೀಸರು ಅನುಮಾನಗೊಂಡಿದ್ದಾರೆ. ಇನ್ನು ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಪ್ರಿಯಾ ಸಾವಿನ ಅಸಲಿ ಸತ್ಯ ಬಯಲಾಗಿದೆ.
ಪ್ರಿಯಾಳ ಮೇಲೆ ಶರತ್ ಹಲ್ಲೆ ನಡೆಸಿ ಕುತ್ತಿಗೆಯ ಬಳಿ ಪಕ್ಕೆಲುಬು ಮುರಿದಿರುವುದು ವರದಿಯಲ್ಲಿ ತಿಳಿದುಬಂದಿದೆ. ಸದ್ಯ ಆರೋಪಿ ಶರತ್ನನ್ನು ವಶಕ್ಕೆ ಪಡೆದಿರುವ ಯಶವಂತಪುರ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.