ಕೊಲ್ಕತ್ತಾದ ಹೌರಾದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆ, ರವಿವಾರ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ: ಸಚಿವ ಸಂತೋಷ್ ಲಾಡ್

ಬೆಂಗಳೂರು: ಒಡಿಶಾ ರೈಲು ದುರಂತದ ಹಿನ್ನೆಲೆ ಸಂಚಾರ ಸ್ಥಗಿತಗೊಂಡು ಕೊಲ್ಕತ್ತಾದ ಹೌರಾದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕರ್ನಾಟಕಕ್ಕೆ ಕರೆತರಲು ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಂಡಿದ್ದು,ವಿಶೇಷ ವಿಮಾನದಲ್ಲಿ ಬಂದಿಳಿಯಲಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಲ್ಕತ್ತಾ ವಿಮಾನ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆತರಲು ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ರವಿವಾರ ಬೆಳಗ್ಗೆ ಮುಂಜಾನೆ 4.15 ಕ್ಕೆ ಇಂಡಿಗೋ ವಿಮಾನದಲ್ಲಿ ಹೊರಟು ಬೆಂಗಳೂರು ನಗರಕ್ಕೆ 6.50ಕ್ಕೆ 32 ಮಂದಿ ವಾಲಿಬಾಲ್ ಆಟಗಾರರು ಬಂದಿಳಿಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೊಲ್ಕತ್ತಾದಲ್ಲಿ ಅಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಮಹಿಳಾ, ಪುರುಷ ಆಟಗಾರರು, ಕೋಚ್ ಸೇರಿದಂತೆ 32 ಮಂದಿ ಪಾಲ್ಗೊಂಡಿದ್ದರು. ಪಂದ್ಯ ಮುಗಿಸಿ ವಾಪಸ್ ಬರುವಾಗ ಒಡಿಶಾದಲ್ಲಿ ರೈಲು ದುರಂತ ಸಂಭವಿಸಿದ್ದರಿಂದ ಕೊಲ್ಕತ್ತಾದಲ್ಲಿ ಈ ಆಟಗಾರರು ಸಂಕಷ್ಟಕ್ಕೆ ಸಿಲುಕಿದ್ದರು.

