ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿಗೆ ಬೀಗ ಜಡಿಯಲು ಆಗ್ರಹ, ಹೋರಾಟ ಸಮಿತಿಯಿಂದ ಸ್ಥಳ ಪರಿಶೀಲನೆ, ಪ್ರತಿಭಟನೆ

ಸುರತ್ಕಲ್, ಜೂ.3: ಜೀವನದಿ ಪಲ್ಗುಣಿಗೆ ಮಾರಕ ಕೈಗಾರಿಕಾ ತ್ಯಾಜ್ಯ ನೇರವಾಗಿ ಹರಿಸುತ್ತಾ ಗಂಭೀರವಾದ ಕ್ರಿಮಿನಲ್ ಅಪರಾಧ ಎಸಗಿರುವ, ಪರಿಸರ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಉಲ್ಲಂಘಿಸಿರುವ ಬಾಬಾ ರಾಮದೇವ್ ಮಾಲಕತ್ವದ ಪತಂಜಲಿ (ರುಚಿಗೋಲ್ಡ್) ಕೈಗಾರಿಕಾ ಘಟಕಕ್ಕೆ ಬೀಗ ಜಡಿಯಬೇಕೆಂದು ಮುನೀರ್ ಕಾಟಿಪಳ್ಳ ನೇತೃತ್ವದ ಹೋರಾಟಗಾರರ ತಂಡ ರುಚಿಗೋಲ್ಡ್ ಕೈಗಾರಿಕಾ ಸಂಸ್ಥೆಯ ಎದರು ಶನಿವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಆಗ್ರಹಿಸಿತು.
ಈ ವೇಳೆ ಸ್ಥಳದಲ್ಲಿ ಗಾಬರಿಯಾಗುವ ಮಟ್ಟದಲ್ಲಿ ಮಾರಕ ಕೈಗಾರಿಕಾ ಮಾಲಿನ್ಯ ಬೃಹತ್ ಕೊಳವೆಗಳ ಮೂಲಕ ನದಿಗೆ ಹರಿದಿರುವುದನ್ನು ಹೋರಾಟ ಸಮಿತಿ ಪತ್ತೆ ಹಚ್ಚಿತು. ಸಾರ್ವಜನಿಕ ಆಕ್ರೋಶ ವ್ಯಾಪಕವಾಗುತ್ತಿರುವುದ ರಿಂದ ಕಂಗೆಟ್ಟು ಕಣ್ಣಿಗೆ ಕಾಣುವ ತ್ಯಾಜ್ಯವನ್ನು ಕೊಳವೆಯ ಸುತ್ತಲಿನಿಂದ ತೆರವುಗೊಳಿಸಲು ಕಂಪೆನಿ ವ್ಯರ್ಥ ಪ್ರಯತ್ನ ಮಾಡುತ್ತಿರುವುದು ಗೋಚರಿಸುತ್ತಿತ್ತು. ರುಚಿಗೋಲ್ಡ್ ಕೈಗಾರಿಕೆಯ ಎದರು ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ಕಂಪೆನಿಯ ಒಳಗಡೆ ಬಂದು ಮಾತಾಡುವಂತೆ ಸಂಸ್ಥೆಯಿಂದ ಬಂದ ಆಹ್ವಾನವನ್ನು ಪ್ರತಿಭಟನಾ ನಿರತರು ತಿರಸ್ಕರಿಸಿದರು. ಸ್ಥಳದಿಂದಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಕಂಪೆನಿಯ ಮೇಲೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಹೋರಾಟಗಾರರು ಮಾಹಿತಿ ಕೇಳಿ ಪಡೆದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಘಟಕವು ಪತಂಜಲಿ ಕೈಗಾರಿಕಾ ಘಟಕ ಮುಚ್ಚುವಂತೆ ಕೇಂದ್ರ ಕಚೇರಿಗೆ ಶಿಫಾರಸ್ಸು ಮಾಡಿ ದಾಖಲೆ ಸಹಿತ ವಿವರವಾದ ಪತ್ರ ಬರೆದಿರುವುದಾಗಿ ಅಧಿಕಾರಿಗಳು ತಿಳಿಸಿದರು. ಈ ವೇಳೆ ಕಂಪೆನಿಗೆ ತಕ್ಷಣದಿಂದಲೇ ಬೀಗ ಜಡಿಯಲು ಹೋರಾಟಗಾರರು ಆಗ್ರಹಿಸಿದರು.
ಇದೇ ಸಂದರ್ಭ ಫಲ್ಗುಣಿ ನದಿಗೆ ಬಿಡುತ್ತಿದ್ದ ವಿಷಕಾರಿ ಕೈಗಾರಿಕಾ ತ್ಯಾಜ್ಯದ ನೀರು ಹಾಗೂ ಅದರ ಜಿಡ್ಡನ್ನು ಕಂಪೆನಿಯು ಸಂಗ್ರಹಿಸಿ ಒಳಭಾಗಕ್ಕೆ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಹೋರಾಟಗಾರರು, ಇದರ ಔಚಿತ್ಯವನ್ನು ಪ್ರಶ್ನಿಸಿದರು. ತ್ಯಾಜ್ಯವನ್ನು ಒಳಗಡೆ ಇರುವ ಶುದ್ದೀಕರಣ ಘಟಕದಲ್ಲಿ ಶುದ್ದೀಕರಿಸಿ ನಿಯಮ ಪ್ರಕಾರ ವಿಸರ್ಜಿಸಲು ಸೂಚಿಸಲಾಗಿದೆ ಎಂದು ಅನುಮಾನಾಸ್ಪದ ಉತ್ತರ ನೀಡಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಬಳಿಕ ಮಾತನಾಡಿದ ಮುನೀರ್ ಕಾಟಿಪಳ್ಳ, ಕಂಪೆನಿಯ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಗಂಭೀರವಾದ ಕ್ರಿಮಿನಲ್ ಅಪರಾಧ ಎಸಗಿರುವ, ಪರಿಸರ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಉಲ್ಲಂಘಿಸಿರುವ ಬಾಬಾ ರಾಮದೇವ್ ಮಾಲಕತ್ವದ ಪತಂಜಲಿ ಘಟಕವನ್ನು ತಕ್ಷಣವೆ ಮುಚ್ಚಿ ಬೀಗ ಜಡಿಯಲು ಮಾಲಿನ್ಯ ನಿಯಂತ್ರಣ ಮಂಡಳಿಯಗೆ ಆಗ್ರಹಿಸಲಾಗಿದೆ. ನಿರ್ಣಾಯಕ ಕ್ರಮ ಜರುಗದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮುನೀರ್ ಕಾಟಿಪಳ್ಳ ರುಚಿಗೋಲ್ಡ್ ಸಂಸ್ಥೆಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ತೋಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಫಾರೂಕ್ ಜೋಕಟ್ಟೆ, ಮಾಜಿ ಅಧ್ಯಕ್ಷ ಕೆವಿನ್, ಹೋರಾಟ ಸಮಿತಿ ಪ್ರಮುಖರಾದ ಅಬೂಬಕ್ಕರ್ ಬಾವ, ಶ್ರೀನಾಥ್ ಕುಲಾಲ್, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ನಿತಿನ್ ಬಂಗೇರ, ಮನೋಜ್ ಉರ್ವಸ್ಟೋರ್, ಇಕ್ಬಾಲ್ ಜೋಕಟ್ಟೆ, ಲಾನ್ಸಿ ಜೋಕಟ್ಟೆ, ಚಂದ್ರಶೇಖರ್ ಜೋಕಟ್ಟೆ, ಹನೀಫ್ ಜೋಕಟ್ಟೆ, ಗ್ರಾಪಂ ಮಾಜಿ ಉಪಾಧ್ಯಕ್ಷ ಸಂಶು ಇದ್ದಿನಬ್ಬ, ಹನೀಫ್ ಇಡ್ಯಾ, ವಿಜಯ್ ಅರಾನ್ಹ ಮತ್ತಿತರರು ಹಾಜರಿದ್ದರು.