ಸುರತ್ಕಲ್ ಬಂಟರ ಸಂಘದಿಂದ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣೆ

ಸುರತ್ಕಲ್, ಜೂ.4: ಸುರತ್ಕಲ್ ಬಂಟರ ಸಂಘದ ವತಿಯಿಂದ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ರವಿವಾರ ಸಂಜೆ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, ಸುರತ್ಕಲ್ ಬಂಟರ ಸಂಘ ಸುಧಾಕರ್ ಪೂಂಜಾರ ಅವಧಿಯಲ್ಲಿ ಶ್ಲಾಘನೀಯ ಕಾರ್ಯವನ್ನು ಮಾಡಿದೆ. ಸಂಘ ಸಂಸ್ಥೆಗಳು ಕೇವಲ ಹೆಸರಿಗೆ ಮಾತ್ರ ಇರಬಾರದು. ಸುರತ್ಕಲ್ ಬಂಟರ ಸಂಘದಂತೆ ಬಡವರ, ಅಶಕ್ತರ ಆಶಾಕಿರಣವಾಗಿ ಸಮಾಜದಲ್ಲಿ ಹೆಸರನ್ನು ಅಚ್ಚಳಿಯದೆ ಉಳಿಯುವಂತೆ ನೋಡಿಕೊಳ್ಳಬೇಕು. ಶಿಕ್ಷಣ, ಮೂಲ ಭೂತ ಸೌಕರ್ಯಗಳಿಗೆ ಬಂಟರ ಸಂಘ ನೆರವು ನೀಡುತ್ತಾ ಬಂದಿದ್ದು ಮುಂದೆಯೂ ಇಂತಹ ಕೆಲಸಕ್ಕೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.
ಬಳಿಕ ಮಾತಾಡಿದ ಕಾವು ಹೇಮಾನಾಥ್ ಶೆಟ್ಟಿ ಅವರು, ಸುರತ್ಕಲ್ ಬಂಟರ ಸಂಘ ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜದಲ್ಲಿ ಇಂದು ಗುರುತಿಸಿಕೊಳ್ಳುವಂತೆ ಮಾಡಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ಸಂಘದ ಕಾರ್ಯ ಚಟುವಟಿಕೆಯ ಹಿಂದೆ ಇದರ ಅಧ್ಯಕ್ಷರ ಶ್ರಮ ಅಡಗಿದೆ. ಪ್ರಾಮಾಣಿಕ ಸೇವೆಗೆ ಪ್ರತಿಫಲವಾಗಿ ಮಾತ್ರ ಇಂತಹ ಹಿರಿಮೆ ಪಡೆಯಲು ಸಾಧ್ಯ. ವರ್ಷದಿಂದ ವರ್ಷಕ್ಕೆ ವಿನೂತನ ಯೋಜನೆಗಳ ಮೂಲಕ ಸಂಘ ಜನರಿಗೆ ಹತ್ತಿರವಾಗಿರುವ ಸುರತ್ಕಲ್ ಬಂಟರ ಸಂಘ ಮುಂದೆ ಇನ್ನಷ್ಟು ಸಮಾಜಮುಖಿಯಾಗಿ ಬೆಳೆಯಲಿ" ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಕಮಲಾಕ್ಷಿ ರೈ ಅವರಿಗೆ ಸುರತ್ಕಲ್ ಬಂಟರ ಸಂಘ ಕೊಡಮಾಡಿದ ನೂತನ ಮನೆಯ ಕೀಲಿಕೈ ಅನ್ನು ಪ್ರವೀಣ್ ಭೋಜ ಶೆಟ್ಟಿ ಅವರು ಹಸ್ತಾಂತರಿಸಿದರು.
ಇದೇ ಸಂದರ್ಭ ವಿಶೇಷ ಚೇತನರಿಗೆ ಸಹಾಯಹಸ್ತ,102 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಜರುಗಿತು. ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾ ನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಸುರತ್ಕಲ್ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲೋಕಯ್ಯ ಶೆಟ್ಟಿ ಮುಂಚೂರು ಅವರು ಮಾತನಾಡಿ, ಸಂಘದ ಸದಸ್ಯರು, ಬಂಟ ಸಮಾಜದ ಬಾಂಧವರು ಇಲ್ಲಿ ಯವರೆಗೆ ಸಹಕಾರ ಕೊಟ್ಟಂತೆ ಇನ್ನು ಮುಂದೆಯೂ ನನಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ಬಳಿಕ ಮಾತಾಡಿದ ಸುಧಾಕರ್ ಎಸ್. ಪೂಂಜಾ ಅವರು, ನಾನು ಬಂಟರ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಆಡಳಿತ ಕಮಿಟಿಯಲ್ಲಿದ್ದ ನನ್ನ ಮಿತ್ರರ ಸಹಕಾರ ಕಾರಣ. ಅವರೆಲ್ಲರನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸುತ್ತಿದ್ದೇನೆ. ಮುಂದಿನ ಅಧ್ಯಕ್ಷರಿಗೂ ನೀವೆಲ್ಲರೂ ಇದೇ ರೀತಿಯಲ್ಲಿ ಸಹಕಾರ ಕೊಡಬೇಕು ಎಂದರು.
ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕಾವು ಹೇಮನಾಥ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ, ಬಂಟರ ಸಂಘ ಮುಂಬೈ ಇದರ ಸುಬ್ಬಯ್ಯ ಎ. ಶೆಟ್ಟಿ ಕಲ್ಲಂಜ, ಪಂಜುರ್ಲಿ ಗ್ರೂಪ್ಸ್ ಮಾಲಕ ರಾಜೇಂದ್ರ ಶೆಟ್ಟಿ, ದೇವಿಚರಣ್ ಶೆಟ್ಟಿ, ವಸಂತ ಶೆಟ್ಟಿ, ಸ್ಥಾಪಕಾಧ್ಯಕ್ಷ ದೇವಾನಂದ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಎಸ್. ಪೂಂಜಾ, ಮಹಿಳಾ ಘಟಕದ ಅಧ್ಯಕ್ಷೆ ಚಿತ್ರಾ ಜೆ. ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪಿ. ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ ಮತ್ತಿತರರು ಉಪಸ್ಥಿತರಿದ್ದರು.
