ಜ್ಞಾನೇಶ್ವರಿ ಎಕ್ಸ್ಪ್ರೆಸ್ ದುರಂತ: 13 ವರ್ಷಗಳಿಂದ ಮರಣ ಪ್ರಮಾಣಪತ್ರಕ್ಕೆ ಅಲೆದಾಟ!

ಕೊಲ್ಕತ್ತಾ: 2010ರ ಮೇ 28ರಂದು ಜ್ಞಾನೇಶ್ವರಿ ಎಕ್ಸ್ಪ್ರೆಸ್ ರೈಲು ಏರಿದ ತಂದೆ ಪ್ರಸೇನ್ಜೀತ್ ಅವರನ್ನು ಹೌರಾದ ಐದು ವರ್ಷದ ಪುಟ್ಟ ಬಾಲಕಿ ಪೌಲೋಮಿ ಅತ್ತಾ ಸಂತಸದಿಂದಲೇ ಬೀಳ್ಕೊಟ್ಟಿದ್ದಳು. ತನಗಾರಿ ಆಟಿಕೆ, ತಿಂಡಿ ತಿನಸುಗಳೊಂದಿಗೆ ತಂದೆ ವಾಪಸ್ಸಾಗುತ್ತಾರೆ ಎಂ ಕನಸು ಕಾಣುತ್ತಿದ್ದಳು.
ಆದರೆ ಬಂಗಾಳದ ಝಾರ್ಗ್ರಾಮ್ ಬಳಿ ಜ್ಞಾನೇಶ್ವರಿ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿ ಪ್ರಸೇನ್ಜೀತ್ ಸೇರಿದಂತೆ 148 ಮಂದಿ ಮೃತಪಟ್ಟರು. ಆದರೆ ಅಧಿಕಾರಿಗಳ ಪ್ರಕಾರ, ಪ್ರಸೇನ್ಜೀತ್ ಇನ್ನೂ ನಾಪತ್ತೆಯಾಗಿದ್ದಾರೆಯೇ ವಿನಃ ಮೃತಪಟ್ಟಿಲ್ಲ. 13 ವರ್ಷ ಕಳೆದರೂ ಅವರ ಕುಟುಂಬಕ್ಕೆ ಇನ್ನೂ ಪ್ರಸೇನ್ಜೀತ್ ಅವರ ಮರಣ ಪ್ರಮಾಣಪತ್ರ ಸಿಕ್ಕಿಲ್ಲ.
ಕುಟುಂಬಕ್ಕೆ ಆರಂಭಿಕ ಹಂತದ ಪರಿಹಾರವನ್ನೂ ನೀಡಲಾಗಿತ್ತು. ಆದರೆ ಪ್ರಸೇನ್ಜೀತ್ ನಾಪತ್ತೆಯಾಗಿದ್ದಾರೆ ಎಂದೇ ದಾಖಲೆ ಸೃಷ್ಟಿಸಿರುವುದರಿಂದ ಮರಣ ಪ್ರಮಾಣಪತ್ರಕ್ಕಾಗಿ ಪೌಲೋಮಿ ತಾಯಿ ಜ್ಯುತಿಕಾ ಅಲೆದಾಡುತ್ತಿದ್ದಾರೆ. ಈ ಪ್ರಮಾಣಪತ್ರ ಇಲ್ಲದೇ ಕುಟುಂಬ ಪರಿಹಾರ ಮತ್ತು ಇತರ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ. ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಭರವಸೆಯನ್ನು ರೈಲ್ವೆ ಇಲಾಖೆ ನ್ಯಾಯಮಂಡಳಿಯಲ್ಲಿ ನೀಡಿತ್ತು.
"ಸಿಎಂ ಮಮತಾ ಬ್ಯಾನರ್ಜಿ, ಬಳಿಕ ರೈಲ್ವೆ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾ ಅಧಿಕಾರಿಗಳು ಹೀಗೆ ಎಲ್ಲ ಹಂತದಲ್ಲೂ ಸಂಬಂಧಪಟ್ಟವರನ್ನು ತಾಯಿ ಭೇಟಿ ಮಾಡಿದ್ದಾರೆ. ಅಂತಿಮವಾಗಿ ಝಾರಗ್ರಾಮದ ಸಿವಿಲ್ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ತಂದೆಯನ್ನು ಕಳೆದುಕೊಂಡು ಬೀದಿಗೆ ಬೀಳುವ ಸ್ಥಿತಿಯಲ್ಲಿದ್ದೇವೆ. ಕಳೆದ ವರ್ಷ ತಾಯಿಯೂ ಮೃತಪಟ್ಟಿದ್ದಾರೆ. ತಾಯಿಯ ಹೋರಾಟವನ್ನು ನಾನು ಮುಂದುವರಿಸಬೇಕು" ಎಂದು ಪೌಲೋಮಿ ಹೇಳುತ್ತಾರೆ.
ಅಂತೆಯೇ ಕೊಲ್ಕತ್ತಾದ ಸುರೇಂದ್ರ ಸಿಂಗ್ ಹಾಗ ಲಿಲೂವಾದ ರಾಜೇಶ್ ಕುಮಾರ್ ಭೋತ್ರಾ 2018ರಲ್ಲಿ ನ್ಯಾಯಾಲಯದ ಕಟ್ಟೆ ಏರಿದ್ದಾರೆ. ಇಬ್ಬರ ಪತ್ನಿಯರು ಹಾಗೂ ಮಕ್ಕಳು ದುರಂತದಲ್ಲಿ ಮಡಿದಿದ್ದರು. 2002ರಲ್ಲಿ ನಡೆದ ವಿಚಾರಣೆಯ ವೇಳೆ ರೈಲ್ವೆ, ಇಂಥ ದಾವೆಯ ಅಗತ್ಯತೆಯನ್ನು ಪ್ರಶ್ನಿಸಿತ್ತು. ಸರ್ಕಾರ ಇನ್ನೂ ಪ್ರಕರಣದಲ್ಲಿ ಹಾಜರಾಗಿಲ್ಲ.
"ಎರಡು ಮೂರು ಬಾರಿ ಡಿಎನ್ಎ ಹೊಂದಿಕೆಯಾಗುತ್ತದೆಯೇ ಎಂದು ನೋಡಲು ನನ್ನ ಕಕ್ಷಿದಾರರ ರಕ್ತ ಪರೀಕ್ಷೆಯನ್ನು ಎರಡು ಮೂರು ಬಾರಿ ಮಾಡಲಾಗಿದೆ. ಇಷ್ಟಾಗಿಯೂ ಗುರುತು ಪತ್ತೆಯಾಗದ 37 ಮೃತದೇಹಳ ಪೈಕಿ 24 ಇನ್ನೂ ಅದೇ ವರ್ಗದಲ್ಲಿ ಇದೆ. ಇದೀಗ ಮತ್ತೊಂದು ಭಯಾನಕ ರೈಲು ದುರಂತ ಸಂಭವಿಸಿದರೂ, ಯಾವ ಸಚಿವರಾಗಲೀ, ಅಧಿಕಾರಿಗಳಾಗಲೀ ಈ ಕುಟುಂಬಗಳ ನೆರವಿಗೆ ಬಂದಿಲ್ಲ" ಎಂದು ಜ್ಞಾನೇಶ್ವರಿ ದುರಂತದ ನಾಲ್ವರು ಸಂತ್ರಸ್ತ ಕುಟುಂಬಗಳ ವಕೀಲರಾಗಿರುವ ತೀರ್ಥಂಕರ ಭಕತ್ ಹೇಳಿದ್ದಾರೆ.