ಉತ್ತರಾಖಂಡ: ಮುಸ್ಲಿಂ ವ್ಯಾಪಾರಿಗಳಿಗೆ ಅಂಗಡಿ ಖಾಲಿ ಮಾಡುವಂತೆ ಪೋಸ್ಟರ್ಗಳ ಮೂಲಕ ಎಚ್ಚರಿಕೆ
14 ವರ್ಷದ ಬಾಲಕಿಯ ಅಪಹರಣ ಯತ್ನ ಆರೋಪ

ಡೆಹ್ರಾಡೂನ್: ಕಳೆದ ತಿಂಗಳು 14 ವರ್ಷದ ಬಾಲಕಿಯನ್ನು ಇಬ್ಬರು ವ್ಯಕ್ತಿಗಳು ಅಪಹರಣ ಯತ್ನ ನಡೆಸಿದ ಆರೋಪದ ನಂತರ ಉಂಟಾಗಿರುವ ಉದ್ವಿಗ್ನತೆ ಪರಿಸ್ಥಿತಿಯ ನಡುವೆಯೇ ಸೋಮವಾರ ಉತ್ತರಾಖಂಡದ ಉತ್ತರಕಾಶಿ ಪಟ್ಟಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಜೂನ್ 15 ರೊಳಗೆ ಅಂಗಡಿಗಳನ್ನುಖಾಲಿ ಮಾಡಬೇಕು, ಇಲ್ಲದೇ ಇದ್ದರೆ ಅಂಗಡಿ ಮುಚ್ಚುವುದಾಗಿ ಬೆದರಿಕೆ ಹಾಕುವ ಪೋಸ್ಟರ್ಗಳು ಕಾಣಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಪಾದಿತ ಅಪಹರಣ ಯತ್ನಕ್ಕಾಗಿ ಮೇ 27 ರಂದು ಸ್ಥಳೀಯ ಅಂಗಡಿಯ ಉಬೇದ್ ಖಾನ್ (24) ಹಾಗೂ ಮೋಟಾರ್ ಸೈಕಲ್ ಮೆಕ್ಯಾನಿಕ್ ಜಿತೇಂದರ್ ಸೈನಿ (23) ಇಬ್ಬರನ್ನೂ ಬಂಧಿಸಲಾಯಿತು. ಸ್ಥಳೀಯ ನಿವಾಸಿಗಳು ಇದು 'ಲವ್ ಜಿಹಾದ್' ಪ್ರಕರಣ ಎಂದು ಆರೋಪಿಸಿದ್ದಾರೆ.
ಉತ್ತರಕಾಶಿಯ ಪುರೋಲಾ ಮುಖ್ಯ ಮಾರುಕಟ್ಟೆಯಲ್ಲಿ ಜೂನ್ 15 ರಂದು ನಡೆಯುವ ಮಹಾಪಂಚಾಯತ್ಗೆ ಮುನ್ನ ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಖಾಲಿ ಮಾಡುವಂತೆ ಪೋಸ್ಟರ್ಗಳನ್ನು ಅಂಟಿಸಲಾಗಿದೆ.
ಜೂನ್ 15 ರಂದು ಮಹಾಪಂಚಾಯತ್ಗೆ ಮುಂಚಿತವಾಗಿ ಅಂಗಡಿಗಳನ್ನು ಖಾಲಿ ಮಾಡಬೇಕು ಎಂದು ಲವ್ ಜಿಹಾದಿಗಳಿಗೆ ತಿಳಿಸುತ್ತಿದ್ದೇವೆ. ಅವರು ಹಾಗೆ ಮಾಡದಿದ್ದರೆ, ಅದು (ಪರಿಣಾಮಗಳು) ಸಮಯವನ್ನು ಅವಲಂಬಿಸಿರುತ್ತದೆ. 'ದೇವಭೂಮಿ ರಕ್ಷಾ ಅಭಿಯಾನ' (ಭೂಮಿ ರಕ್ಷಣೆಗಾಗಿ ಅಭಿಯಾನ)ಈ ಕರೆ ನೀಡುತ್ತದೆ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ
ಸಂಘ ಪರಿವಾರದ ಸದಸ್ಯರು ಬಾರ್ಕೋಟ್ನಲ್ಲಿ ಪ್ರತಿಭಟನೆ ನಡೆಸಿ ಮುಸ್ಲಿಮರಿಗೆ ಸೇರಿದ ಅಂಗಡಿಗಳು ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ ಎರಡು ದಿನಗಳ ನಂತರ ಪೋಸ್ಟರ್ಗಳು ಕಾಣಿಸಿಕೊಂಡಿವೆ. ಹಿಂಸಾಚಾರದ ಹಿಂದೆ ಇರುವವರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ
"ನಾವು ಈ ಪೋಸ್ಟರ್ಗಳನ್ನು ತೆಗೆದುಹಾಕಿದ್ದೇವೆ ಹಾಗೂ ಅವುಗಳನ್ನು ಅಂಟಿಸಿದ ಸಮಾಜವಿರೋಧಿಗಳನ್ನು ಗುರುತಿಸುತ್ತಿದ್ದೇವೆ" ಎಂದು ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅರ್ಪಣ್ ಯದುವಂಶಿ ಹೇಳಿದ್ದಾರೆ.