ಕಚ್ಚಾತೈಲ ಬೆಲೆ ಸ್ಥಿರವಾಗಿದ್ದರೆ ತೈಲ ಕಂಪನಿಗಳು ಬೆಲೆ ಇಳಿಸಬಹುದು: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
ಹೊಸದಿಲ್ಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಸ್ಥಿರವಾಗಿದ್ದಲ್ಲಿ ಮತ್ತು ಮುಂದಿನ ತ್ರೈಮಾಸಿಕ ಉತ್ತಮವಾಗಿದ್ದಲ್ಲಿ, ದೇಶದಲ್ಲಿ ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಳಿಸುವ ವಿಷಯವನ್ನು ಪರಿಗಣಿಸುವ ಸ್ಥಿತಿ ತಲುಪಲಿವೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಆದರೆ ಈ ವಿಷಯ ಕುರಿತಂತೆ ಘೋಷಣೆ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿ ಇಂಧನ ಬೆಲೆಯನ್ನು ಉಳಿಸುವ ವಿಚಾರ ಸರ್ಕಾರದ ಕಾರ್ಯಸೂಚಿಯಲ್ಲಿದೆಯೇ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಮುಂದೆ ಹೋದಂತೆಲ್ಲ ಏನು ಮಾಡಬಹುದು ನೋಡೋಣ" ಎಂದು ಹೇಳಿದರು. ಕಳೆದ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಮಾರಾಟ ಕಂಪನಿಗಳ ಸಾಧನೆ ತೃಪ್ತಿಕರವಾಗಿದೆ ಎಂದ ಅವರು, ಕಂಪನಿಗಳು ಒಂದಷ್ಟು ಪ್ರಮಾಣದ ನಷ್ಟ ಭರ್ತಿ ಮಾಡಿಕೊಂಡಿವೆ. ಮುಂದೆ ಏನು ಮಾಡಬಹುದು ನೋಡೋಣ ಎಂದರು.
2022ರ ಎಪ್ರಿಲ್ನಿಂದ ಇಂಧನ ಬೆಲೆ ಹೆಚ್ಚದಂತೆ ಸರ್ಕಾರ ನೋಡಿಕೊಂಡಿದೆ ಎಂದು ಸಮರ್ಥಿಸಿಕೊಂಡರು. ಪ್ರತಿಯೊಂದನ್ನೂ ಉಚಿತವಾಗಿ ನೀಡುವುದನ್ನು ಕೆಲವರು ಇಷ್ಟಪಡಬಹುದು. ಆದರೆ ಆಗ ಅವರು 'ಉಚಿತ' ರಾಜಕೀಯದ ಅಪಾಯಕಾರಿ ಪ್ರದೇಶವನ್ನು ಅವರು ಪ್ರವೇಶಿಸುತ್ತಾರೆ. ವಿರೋಧ ಪಕ್ಷಗಳು "ರೇವ್ಡಿ ರಾಜಕೀಯ" ಮಾಡುತ್ತಿವೆ ಎಂದು ಟೀಕಿಸಿದರು.
ಬಿಜೆಪಿಯೇತರ ರಾಜ್ಯ ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿವೆ. ಆದರೆ ಈ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ದರ ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ಇರುವ ದರಕ್ಕಿಂತ ಅಧಿಕ. ಏಕೆಂದರೆ ಅವರು ವ್ಯಾಟ್ ಇಳಿಸಿಲ್ಲ ಎಂದು ವಿಶ್ಲೇಷಿಸಿದರು.