10 ದಿನದಲ್ಲೇ 4 ಹುಲಿ - ಚಿರತೆ ಸಾವು: ತನಿಖೆಗೆ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಆದೇಶ
ಬರೇಲಿ: ದುಧ್ವಾ ಹುಲಿ ಅಭಯಾರಣ್ಯದಲ್ಲಿ ಕಳೆದ 10 ದಿನಗಳ ಅವಧಿಯಲ್ಲಿ ಮೂರು ಹುಲಿ ಹಾಗೂ ಒಂದು ಚಿರತೆ ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ತನಿಖೆ ನಡೆಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶಿಸಿದ್ದಾರೆ. ಅದೇಶದ ಬೆನ್ನಲ್ಲೇ ಅರಣ್ಯ ಸಚಿವ ಅರುಣ್ ಕುಮಾರ್ ಸಕ್ಸೇನಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್ ಸಕ್ಸೇನಾ ಹಾಗೂ ಇತರ ಹಿರಿಯ ಅಧಿಕಾರಿಗಳ ತಂಡ ಅಭಯಾರಣ್ಯಕ್ಕೆ ಧಾವಿಸಿದೆ.
"ಹುಲಿಗಳ ಸಾವಿನ ದರ ಕಡಿಮೆ ಮಾಡಲು ಅಗತ್ಯ ಕ್ರಿಯಾಯೋಜನೆ ಸಿದ್ಧಪಡಿಸುವ ಬಗ್ಗೆ" ವಿವರವಾದ ವರದಿ ಸಲ್ಲಿಸುವಂತೆ ಯೋಗಿ ಆದೇಶಿಸಿದ್ದಾರೆ. ಈ ಎಲ್ಲ ಘಟನೆಗಳಲ್ಲಿ ಹುಲಿಗಳ ಸಾವಿಗೆ ಪರಸ್ಪರ ಜಗಳವೇ ಮುಖ್ಯ ಕಾರಣ ಎನ್ನಲಾಗಿದೆ. ಎರಡು ಹುಲಿ ಮರಿಗಳು ಮೇ 31 ಹಾಗೂ ಜೂನ್ 1ರಂದು ಮೃತಪಟ್ಟಿವೆ. ಐದು ವರ್ಷ ವಯಸ್ಸಿನ ಚಿರತೆಯ ಶವ ಜೂನ್ 5ರಂದು ಪತ್ತೆಯಾಗಿತ್ತು. ಶುಕ್ರವಾರ ಸಂಜೆ ಎಂಟು ವರ್ಷದ ಮತ್ತೊಂದು ಹುಲಿಯ ಶವ ಪತ್ತೆಯಾಗಿದೆ.
Next Story